ಚಾಮರಾಜಪೇಟೆ ಪೊಲೀಸರ ಕಾರ್ಯಾಚರಣೆಯಲ್ಲಿ ಶಂಶೀರ್, ಇಮ್ರಾನ್, ಸುಹೈಲ್ ಅಂದರ್ ಆಗಿದ್ದಾರೆ.
ಬೆಂಗಳೂರು : ಅಂಗಡಿಗಳ ಬೀಗ ಮುರಿದು ಯುಪಿಎಸ್ ಬ್ಯಾಟರಿ ಕದಿಯುತ್ತಿದ್ದ ಖದೀಮರನ್ನು ಬಂಧಿಸುವಲ್ಲಿ ಚಾಮರಾಜಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಚಾಮರಾಜಪೇಟೆ ಠಾಣಾ ವ್ಯಾಪ್ತಿಯಲ್ಲಿ ಯುಪಿಎಸ್ ಬ್ಯಾಟರಿ ಕಳ್ಳತನ ಪ್ರಕರಣ ಹೆಚ್ಚಾದ ಹಿನ್ನಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ಮೆಕ್ಯಾನಿಕ್ ಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಗೋರಿಪಾಳ್ಯದ ಇಮ್ರಾನ್, ಪಾದರಾಯನಪುರದ ಶಂಶೀರ್ ಮತ್ತು ಸುಹೈಲ್ ಎಂದು ಗುರುತಿಸಲಾಗಿದೆ. ಈ ಮೂವರು ಚಾಮರಾಜಪೇಟೆಯ ಗ್ಯಾರೇಜ್ ಒಂದರಲ್ಲಿ ಮೆಕ್ಯಾನಿಕ್ ಗಳಾಗಿದ್ದರು. ಹಣದಾಸೆಗೆ ಬಿದ್ದ ಇವರು ಬ್ಯಾಟರಿ ಕಳ್ಳತನ ಪ್ರಾರಂಭಿಸಿದ್ದರು.
ಬಂಧಿತರಿಂದ 9 ಲಕ್ಷ ಮೌಲ್ಯದ ಬ್ಯಾಟರಿಗಳು ಹಾಗೂ ಕಳ್ಳತನಕ್ಕೆ ಬಳಸುತ್ತಿದ್ದ ಆಟೋ ಒಂದನ್ನು ಜಪ್ತಿ ಮಾಡಲಾಗಿದೆ. ಕಳ್ಳತನ ಮಾಡಿದ ಬ್ಯಾಟರಿಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಜನವರಿ 4 ರಂದು ಚಾಮರಾಜಪೇಟೆಯ ದಿನಸಿ ಅಂಗಡಿಯೊಂದಕ್ಕೆ ನುಗ್ಗಿದ್ದ ಖದೀಮರು 50 ಸಾವಿರ ರೂಪಾಯಿ ಮೌಲ್ಯದ ಬ್ಯಾಟರಿ ಕಳ್ಳತನ ಮಾಡಿದ್ದರು. ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಸಿಸಿಟಿವಿ ದೃಶ್ಯ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ವೇಳೆ ವಿಚಾರಣೆ ನಡೆಸಿದಾಗ ನಗರದ ಅನೇಕ ಬ್ಯಾಟರಿ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದೆ.
Discussion about this post