ತಪಾಸಣೆ ನೆಪದಲ್ಲಿ ಗೂಡ್ಸ್ ವಾಹನ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ ಹಲಸೂರು ಗೇಟ್ ಸಂಚಾರ ಠಾಣೆ ಹೆಡ್ ಕಾನ್ಸ್ಟೆಬಲ್ ಮಹಾಸ್ವಾಮಿ ವೀಡಿಯೋ ವೈರಲ್ ಆಗಿತ್ತು.
ಘಟನೆ ನಡೆದ ಬೆನ್ನಿಗೆ ಶನಿವಾರ ರಾತ್ರಿ ಜೆ.ಪಿ.ನಗರದ ಜರಗನಹಳ್ಳಿಯಲ್ಲಿರುವ ಚಾಲಕ ಸುನೀಲ್ ಕುಮಾರ್ ಮನೆಗೆ ನುಗ್ಗಿದ ನಾಲ್ಕೈದು ಮಂದಿ ಅಪರಿಚಿತರು, ಚಾಲಕನ ತಾಯಿಗೆ ಪ್ರಾಣ ಬೆದರಿಕೆ ಹಾಕಿದ್ದು, ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.
ಅತಿಯಾಗಿ ಕಾಡುವ ಬೆನ್ನು ನೋವಿನಿಂದ ಮುಕ್ತಿ ಕಾಣೋದು ಹೇಗೆ…?
ಈ ಸಂಬಂಧ ಚಾಲಕ ಸುನೀಲ್ ಕುಮಾರ್ ತಾಯಿ ರತ್ನಮ್ಮ, ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ದೂರು ಸ್ವೀಕರಿಸಿರುವ ಪೊಲೀಸರು ಗಂಭೀರ ಸ್ವರೂಪವಲ್ಲದ ಪ್ರಕರಣ(ಎನ್ಸಿಆರ್) ದಾಖಲಿಸಿಕೊಂಡಿದ್ದಾರೆ.
ಗೂಡ್ಸ್ ವಾಹನ ಚಾಲಕರಾಗಿರುವ ಸುನೀಲ್ ಕುಮಾರ್, ಜರಗನಹಳ್ಳಿಯಲ್ಲಿ ತಾಯಿ ರತ್ನಮ್ಮ ಜತೆ ವಾಸವಾಗಿದ್ದಾರೆ. ಶುಕ್ರವಾರ ಹಲಸೂರು ಗೇಟ್ ಸಂಚಾರ ಠಾಣೆಯ ಹೆಡ್ ಕಾನ್ಸ್ಟೆಬಲ್ ಮಹಾಸ್ವಾಮಿ, ಚಲಿಸುವ ವಾಹನವನ್ನೇರಿ ಚಾಲಕ ಸುನೀಲ್ ಕುಮಾರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಕೂಡ ನಡೆಸಿದ್ದರು. ಈ ವಿಚಾರವನ್ನು ತಾಯಿ ರತ್ನಮ್ಮಗೆ ಕರೆ ಮಾಡಿ ಹೇಳಿದ್ದ ಸುನೀಲ್ ಕುಮಾರ್ ಇದುವರೆಗೂ ಮನೆಗೆ ಬಂದಿಲ್ಲ.
ಈ ನಡುವೆ ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಮನೆಗೆ ನುಗ್ಗಿದ ನಾಲ್ಕೈದು ಮಂದಿ, “ನಿಮ್ಮ ಮಗ ಎಲ್ಲಿದ್ದಾನೆ? ಎಂದು ಪ್ರಶ್ನಿಸಿ ಸುನೀಲ್ ತಾಯಿ ರತ್ನಮ್ಮ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಒಂದು ವೇಳೆ ನಿಮ್ಮ ಮಗ ಕೈಗೆ ಸಿಕ್ಕರೆ ಕೈ-ಕಾಲು ಮುರಿದು ಹಾಕುತ್ತೇವೆ. ನಿನ್ನನ್ನು ಮತ್ತು ನಿನ್ನ ಮಗನನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಬೆದರಿಕೆ ಹಾಕಿದ್ದಾರೆ ಎಂದು ರತ್ನಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಆದರೆ, ಈ ಕೃತ್ಯದ ಹಿಂದೆ ಹಲ್ಲೆ ನಡೆಸಿದ ಹೆಡ್ ಕಾನ್ಸ್ಟೆಬಲ್ ಮಹಾಸ್ವಾಮಿ ಕೈವಾಡ ಇದೆಯೇ? ಇಲ್ಲವೇ ಎಂಬ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ. ಅಪರಿಚಿತ ವ್ಯಕ್ತಿಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪುಟ್ಟೇನಹಳ್ಳಿ ಪೊಲೀಸರು ಹೇಳಿದರು.
ಈ ಕುರಿತು ಮಾತನಾಡಿರುವ ಚಾಲಕ ಸುನೀಲ್ ಕುಮಾರ್ ತಾಯಿ ರತ್ನಮ್ಮ, “ತಾಯಿ, ಮಗ ಇಬ್ಬರೇ ವಾಸವಾಗಿದ್ದೇವೆ. ಶುಕ್ರವಾರ ಘಟನೆ ಬಳಿಕ ಮಗ ಕರೆ ಮಾಡಿ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ. ಅಂದಿನಿಂದ ಆತ ಮನೆಗೆ ಬಂದಿಲ್ಲ. ಶನಿವಾರ ಯಾರೋ ನಾಲ್ಕೈದು ಮಂದಿ ಮನೆಗೆ ನುಗ್ಗಿ ಬೆದರಿಕೆ ಹಾಕಿದ್ದಾರೆ. ಅವರು ಪೊಲೀಸರೋ ಅಥವಾ ರೌಡಿಗಳೋ ಗೊತ್ತಿಲ್ಲ. ದಯಮಾಡಿ ತಮ್ಮ ಮಗನನ್ನು ಹುಡುಕಿಕೊಡಿ’ ಎಂದು ಮನವಿ ಮಾಡಿದ್ದಾರೆ.
Discussion about this post