ಚನ್ನಪಟ್ಟಣ : ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಅಕ್ರಮ ಶಿಶು ಮಾರಾಟ ನಡೆಸುತ್ತಿದ್ದ ಜಾಲವನ್ನು ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಬೇಧಿಸಿದ್ದು ಐದು ಮಂದಿಯನ್ನು ಬಂಧಿಸಿದ್ದಾರೆ. ಜಿಲ್ಲಾ ಶಿಶು ಅಭಿವೃದ್ಧಿ ಅಧಿಕಾರಿ ನೀಡಿದ ದೂರಿನಂತೆ ಈ ಕಾರ್ಯಾಚರಣೆ ನಡೆದಿದೆ.
ಚನ್ನಪಟ್ಟಣ ನಗರದ ಸುಷ್ಮಾ ಅವರಿಗೆ ತನಗೆ ಮಕ್ಕಳಾಗುವುದಿಲ್ಲ ಎಂದು ಗೊತ್ತಾಗುತ್ತಿದ್ದಂತೆ, ಸರ್ಕಾರಿ ನೌಕರಿಯಲ್ಲಿರುವ ತನ್ನ ಗಂಡನನ್ನು ಮೆಚ್ಚಿಸಲು,ತಾನು ಗರ್ಭಿಣಿ ಎಂದು ನಾಟಕವಾಡಿದ್ದಾಳೆ. ಇದಕ್ಕಾಗಿ ಸಾಕಷ್ಟು ಸರ್ಕಸ್ ಮಾಡಿದ ಆಕೆ ನೆರೆಹೊರೆಯವರನ್ನು ನಂಬಿಸಲು ಸೀಮಂತ ಬೇರೆ ಮಾಡಿಸಿಕೊಂಡಿದ್ದಾಳೆ. ಇದಾದ ಬಳಿಕ ಡೆಲಿವರಿಗೆಂದು ಹೋದವಳು ಮಗುವಿನೊಂದಿಗೆ ಹಿಂತಿರುಗಿದ್ದಾಳೆ.
ಈ ವೇಳೆ ಸುಷ್ಮಾ ಮನೆಗೆ ಅಂಗವನಾಡಿ ಕಾರ್ಯಕರ್ತೆಯರು ಇಲಾಖೆಯ ಸೌಲಭ್ಯ ನೀಡಲು ಮನೆಗೆ ಭೇಟಿ ಕೊಟ್ಟಿದ್ದಾರೆ. ಇದಕ್ಕಾಗಿ ತಾಯಿ ಕಾರ್ಡ್ ಕೇಳಿದ್ದಾರೆ. ಈಗ ಸರಿಯಾದ ಮಾಹಿತಿ ಸುಷ್ಮಾ ಕಡೆಯಿಂದ ಸಿಗಲಿಲ್ಲ. ಹೀಗಾಗಿ ಅನುಮಾನಗೊಂಡ ಅಂಗವನಾಡಿ ಕಾರ್ಯಕರ್ತೆಯರು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಈ ಸಂಬಂಧ ಜಿಲ್ಲಾ ಶಿಶು ಅಭಿವೃದ್ಧಿ ಅಧಿಕಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದರ ಬೆನ್ನಲ್ಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಚನ್ನಪಟ್ಟಣ ನಗರ ನಿವಾಸಿ ಅಪ್ಪಗೆರೆ ನಿವಾಸಿ ಸುಷ್ಮಾ, ಬೈರಾಪಟ್ಟಣದ ಶಾರಾದ, ರವಿಕುಮಾರ್, ಜಯಲಕ್ಷ್ಮಿ, ಲಕ್ಷ್ಮಿ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಶಾರಾದ ಎಂಬವರನ್ನು ಬಂಧಿಸಿದ್ದಾರೆ.
9 ದಿನದ ನವಜಾತ ಶಿಶುವನ್ನು ಪಡೆಯಲು ಸುಷ್ಮಾ 70 ಸಾವಿರ ರೂಪಾಯಿ ನೀಡಿದ್ದರು ಅನ್ನುವುದು ಈಗ ಗೊತ್ತಾಗಿದೆ. ಮಗುವನ್ನು ಎಲ್ಲಿಂದ ಪಡೆದರು, ಕಳ್ಳತನ ಮಾಡಿದರೇ ಅನ್ನುವ ಕುರಿತಂತೆ ವಿಚಾರಣೆ ಮುಂದುವರಿದಿದೆ.
Discussion about this post