ಬೆಂಗಳೂರು : ರಾಜ್ಯದಲ್ಲಿ ಆನ್ ಲೈನ್ ಜೂಜು ನಿಷೇಧಗೊಳಿಸಿ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ಮೊದಲ ಬಾರಿಗೆ ಹೊಸ ಕಾಯ್ದೆಯ ಅಡಿಯಲ್ಲಿ ಮೂವರನ್ನು ಬಂಧಿಸಲಾಗಿದೆ. ಬೆಂಗಳೂರು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಜೆಪಿ ನಗರದ ಬಾಲಚಂದ್ರನ್, ಗುಟ್ಟಹಳ್ಳಿ ಕಸ್ತೂರಿ ಬಾ ನಗರದ ರವಿಕುಮಾರ್ ಹಾಗೂ ಹೊರಮಾವು ನಿವಾಸಿ ಪೆನ್ನಿ ಚೇತನ್ ಎಂಬವರನ್ನು ಬಂಧಿಸಲಾಗಿದೆ.
ಬಂಧಿತರಿಂದ 59 ಸಾವಿರ ನಗದು, ಕಾರು, ಸ್ಕೂಟರ್, ಮೊಬೈಲ್ ಸೇರಿ 10.41 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು IPL ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯಾವಳಿ ಸಂದರ್ಭದಲ್ಲಿ ಹೊಸೂರು ರಸ್ತೆಯ ಲಾಡ್ಜ್ ನಲ್ಲಿ ರೂಮ್ ಮಾಡಿ ಬೆಟ್ಟಿಂಗ್ ನಲ್ಲಿ ತೊಡಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ.
ಮಡಿವಾಳ ಉಪವಿಭಾಗದ ಎಸಿಪಿ ಸುಧೀರ್ ಹೆಗ್ಡೆ ಹಾಗೂ ಇನ್ಸ್ ಪೆಕ್ಟರ್ ಸುನೀಲ್ ನಾಯ್ಕ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಈ ಪೈಕಿ ರವಿ ಎಂಬಾತ ಕ್ಯಾಸಿನೋದಲ್ಲಿ ಹಣ ಕಳೆದುಕೊಂಡಿದ್ದ, ಕಳೆದುಕೊಂಡ ಹಣ ಮತ್ತೆ ಸಂಪಾದಿಸುವ ಸಲುವಾಗಿ ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಇಳಿದಿದ್ದ ಎಂದು ಗೊತ್ತಾಗಿದೆ. ಇನ್ನು ಚೇತನ್ ಕೇರಳ ಮೂಲದವನಾಗಿದ್ದು, ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ವಾಸವಾಗಿದ್ದಾನೆ.
ಎರಡು ದಿನಗಳ ಹಿಂದಷ್ಟೇ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಆನ್ ಲೈನ್ ನಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದ ಡ್ರೀಮ್ಸ್ 11 APP ನಲ್ಲಿ ವಿರುದ್ಧ FIR ದಾಖಲಿಸಿದ್ದರು.
Discussion about this post