ಬೆಂಗಳೂರು : ಕೋರಮಂಗಲದ ಬ್ಯಾಂಕ್ ವೊಂದರಲ್ಲಿ ಪತ್ನಿ ಹಾಗೂ ಮಗಳ ಮುಂದೆಯೇ ರೌಡಿ ಶೀಟರ್ ನನ್ನು ಕೊಲೆ ಮಾಡಿರುವ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ಮೃತನನ್ನು ಆಡುಗೋಡಿ ಪೊಲೀಸ್ ಠಾಣೆಯ ರೌಡಿ ಶೀಟರ್ ಆಗಿದ್ದ ಜೋಸೆಫ್ ಆಲಿಯಾಸ್ ಬಬ್ಲಿ (43) ಎಂದು ಗುರುತಿಸಲಾಗಿದೆ.
ಬೆಂಗಳೂರಿನ ಕೋರಮಂಗಲದ 8ನೇ ಬ್ಲಾಕ್ ನಲ್ಲಿರುವ ಯೂನಿಯನ್ ಬ್ಯಾಂಕ್ ಶಾಖೆಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
![murder1](https://torrentspree.com/wp-content/uploads/2021/07/murder1.jpg)
ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದ ಬಬ್ಲಿ ಸ್ವಂತ ಕಚೇರಿ ತೆರೆದು ಸಣ್ಣಪುಟ್ಟ ಗುತ್ತಿಗೆ ಕೆಲಸ ಮಾಡಿಸುತ್ತಿದ್ದ. ಈತನ ವಿರುದ್ಧ ಈ ಹಿಂದೆ ಆಡುಗೋಡಿ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಜೊತೆಗೆ ಇತ್ತೀಚಿನ ದಿನಗಳಲ್ಲಿ ಅಪರಾಧ ಕೃತ್ಯಗಳಿಂದ ದೂರವುಳಿದಿದ್ದ. 2011 ರವರೆಗೂ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬಳಿಕ ಯಾವುದೇ ದೂರು ಈತನ ವಿರುದ್ಧ ದಾಖಲಾಗಿರಲಿಲ್ಲ.
ಜೋಸೆಫ್ ಅಲಿಯಾಸ್ ಬಬ್ಲಿ ತನ್ನ ಪತ್ನಿಯ ಜೊತೆ ಕೋರಮಂಗಲದ ಯೂನಿಯನ್ ಬ್ಯಾಂಕ್ಗೆ ಹಣ ಡ್ರಾ ಮಾಡಲು ಬಂದಿದ್ದ. ಈ ವೇಳೆ ಕಾದು ಕುಳಿತಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ. ಈ ವೇಳೆ ತಡೆಯಲು ಬಂದ ಬಬ್ಲಿ ಪತ್ನಿಯ ಮೇಲೂ ಹಲ್ಲೆ ನಡೆಸಲಾಗಿದ್ದು ಅವರ ಕೈ ಬೆರಳುಗಳು ತುಂಡಾಗಿವೆ.
![murder](https://torrentspree.com/wp-content/uploads/2021/07/murder.jpg)
ಮುಖಕ್ಕೆ ಬಟ್ಟೆ ಸುತ್ತಿಕೊಂಡು ಬೈಕ್ಗಳಲ್ಲಿ ಬಂದಿದ್ದ 8 ಮಂದಿ ಹಂತಕರು ಈ ಕೃತ್ಯ ಎಸಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದು, ಘಟನೆಯ ಬೆನ್ನಲ್ಲೇ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್. ಆಗ್ನೇಯ ಡಿಸಿಪಿ ಜೋಶಿ ಶ್ರೀನಾಥ್ ಮಹದೇವ್, ಮಡಿವಾಳ ಎಸಿಪಿ ಸುಧೀರ್ ಹೆಗ್ಗಡೆ ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ.
ಈ ನಡುವೆ ಕೊಲೆಯಾದ ವ್ಯಕ್ತಿ ಬಬ್ಲಿ ಕೋರಮಂಗಲದ ರಾಜೇಂದ್ರ ಮತ್ತು ವಿವೇಕ ನಗರದ ಜಾರ್ಜ್ ಎಂಬವರ ಜೊತೆ ಹಳೆ ದ್ವೇಷ ಹೊಂದಿದ್ದ ಎಂದು ಗೊತ್ತಾಗಿದೆ. ಜೊತೆಗೆ ಕೊಳಚೆ ಪ್ರದೇಶದಲ್ಲಿರುವ ಜನರನ್ನು ಮತಾಂತರ ಮಾಡುವ ಕೆಲಸದಲ್ಲಿ ರೌಡಿ ಪಬ್ಲಿ ನಿರತನಾಗಿದ್ದ ಎಂಬ ಮಾಹಿತಿ ಲಭಿಸಿದ್ದು, ಈ ಬಗ್ಗೆಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Discussion about this post