ತಂಜಾವೂರು : ಹೆಂಚು ತೆಗೆದು ಮನೆಯೊಳಗೆ ಪ್ರವೇಶಿಸಿದ ಮಂಗಗಳ ಗ್ಯಾಂಗ್ ಅವಳಿ ಮಕ್ಕಳನ್ನು ಹೊತ್ತೊಯ್ದು ಒಂದು ಮಗುವನ್ನು ಕೊಲೆ ಮಾಡಿದ ಘಟನೆ ತಂಜಾವೂರು ಅರಮನೆ ಸಮೀಪದ ವೇಲ ಅಲಗಂ ಅನ್ನುವ ಊರಿನಲ್ಲಿ ನಡೆದಿದೆ.
ಇಲ್ಲಿನ ರಾಜ ( 29 ) ಮತ್ತು 26 ವರ್ಷದ ಭುವನೇಶ್ವರಿಗೆ 5 ವರ್ಷದ ಮಗುವೊಂದು ಇದ್ದು, ಫೆಬ್ರವರಿ 6 ರಂದು ಭುವನೇಶ್ವರಿ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು.
ಆಸ್ಪತ್ರೆಯಿಂದ ಇತ್ತೀಚೆಗೆ ಮನೆಗೆ ಬಂದಿದ್ದ ಭುವನೇಶ್ವರಿ ಫೆ 13 ರಂದು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಶೌಚಾಲಯಕ್ಕೆಂದು ಹೋಗಿದ್ದರು.
ಈ ವೇಳೆ ಹಸುಗೂಸುಗಳು ಮನೆಯಲ್ಲೇ ನಿದ್ರಿಸುತ್ತಿತ್ತು. ಈ ವೇಳೆ ಅದೆಲ್ಲಿ ಇತ್ತೋ ಮಂಗಗಳ ಹಿಂಡು.
5 ರಿಂದ 6 ಮಂಗಗಳು ಮನೆಯ ಹೆಂಚು ತೆಗೆದು ಒಳ ಪ್ರವೇಶಿಸಿ ಅವಳಿ ಮಕ್ಕಳನ್ನು ಹೊತ್ತುಕೊಂಡು ಹೋಗಿದೆ.
ಕೆಲವೇ ಹೊತ್ತಿನಲ್ಲಿ ಶೌಚಾಲಯದಿಂದ ಹೊರ ಬಂದ ಭುವನೇಶ್ವರಿ ಮಕ್ಕಳು ಇಲ್ಲದಿರುವುದನ್ನು ಕಂಡು ಗಾಬರಿಯಾಗಿದ್ದಾರೆ. ಕಿರುಚಾಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ಮಗು ಅಳುವ ಶಬ್ಧ ಕೇಳಲಾರಂಭಿಸಿದೆ.
ಹೊರಗೆ ಬಂದು ನೋಡಿದರೆ ಮಂಗವೊಂದರ ಕೈಯಲ್ಲಿ ಒಂದು ಮಗುವಿತ್ತು. ಏನು ತೋಚದ ಭುವನೇಶ್ವರಿ ಕಿರುಚಿದ್ದಾರೆ. ಕಿರುಚಾಟ ಕೇಳಿದ ಅಕ್ಕ ಮಕ್ಕದ ಮನೆಯ ಮಂದಿ ಧಾವಿಸಿದ್ದಾರೆ.
ಮಗುವನ್ನು ಹೇಗಾದ್ರೂ ರಕ್ಷಿಸಬೇಕು ಎಂದು ಮಂಗಗಳ ಹಿಂಡನ್ನು ಬೆದರಿಸಿದ್ದಾರೆ. ಈ ವೇಳೆ ಗಾಬರಿಯಾದ ಮಂಗಗಳು ಮಗುವನ್ನು ಬಿಟ್ಟು ಹೋಗಿದೆ. ಆದರೆ ಮತ್ತೊಂದು ಮಗುವಿನ ಸುಳಿವಿರಲಿಲ್ಲ.
ಇದೇ ವೇಳೆ ಸ್ಥಳೀಯರ ದೂರಿನಂತೆ ಸ್ಥಳಕ್ಕೆ ಬಂದ ಪೊಲೀಸರು ಮತ್ತೊಂದು ಮಗುವಿಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ. ಮಂಗಗಳು ಸಾಗಿದ ಹಾದಿಯಲ್ಲಿ ಹುಡುಕಾಡಿದ್ದಾರೆ.
ಈ ವೇಳೆ ಮಗುವಿನ ಶವ ಸಮೀಪದ ತೊರೆಯ ನೀರಿನಲ್ಲಿ ತೇಲುತ್ತಿತ್ತು.
ಇನ್ನು ಈ ಘಟನೆ ಬಗ್ಗೆ ಮಾತನಾಡಿರುವ ಪಶ್ಚಿಮ ತಂಜಾವೂರು ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಚಂದ್ರಮೋಹನ್, ಸ್ಥಳೀಯರು ಕರೆ ಮಾಡಿದ ತಕ್ಷಣ ನಾವು ಮತ್ತು ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದೇವೆ. ಅಷ್ಟು ಹೊತ್ತಿಗಾಗಲೇ ಒಂದು ಮಗುವನ್ನು ಮಂಗಗಳ ಕೈಯಿಂದ ರಕ್ಷಿಸಲಾಗಿತ್ತು.
ಹೀಗಾಗಿ ಮತ್ತೊಂದು ಮಗುವಿಗಾಗಿ ಸ್ಥಳೀಯರ ಜೊತೆ ನಾವು ಕೂಡಾ ಹುಡುಕಾಟ ನಡೆಸಿದ್ದೇವೆ. ಆದರೆ ದುರಾದೃಷ್ಟ ಅಂದ್ರೆ ಮಂಗಗಳು ಮಗುವನ್ನು ಕೊಂದು ಹಾಕಿತ್ತು. ಇದೀಗ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಅಂದಿದ್ದಾರೆ.
ಇನ್ನು ಈ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ಮಂಗಗಳನ್ನು ಬಂಧಿಸಲು ಕ್ರಮ ಕೈಗೊಂಡಿದ್ದಾರೆ. ಈ ಸಂಬಂಧ ಮಾತನಾಡಿರುವ ತಂಜಾವೂರು ವ್ಯಾಪ್ತಿಯ ಫಾರೆಸ್ಟ್ ರೇಂಜರ್ ಜಿ. ಜ್ಯೋತಿಕುಮಾರ್, ಈಗಾಗಲೇ ಅರಣ್ಯ ಇಲಾಖೆ ಸಿಬ್ಬಂದಿಗಳು ಮಂಗಗಳನ್ನು ಹಿಡಿಯುವ ಕೆಲಸ ಪ್ರಾರಂಭಿಸಿದ್ದಾರೆ ಅಂದಿದ್ದಾರೆ.
ಆದರೆ ಈ ಘಟನೆ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವ ಜಿಲ್ಲಾ ಅರಣ್ಯಾಧಿಕಾರಿ ಎಂ ಇಳೆಯರಾಜ, ಇದು ಅಪರೂಪದಲ್ಲಿ ಅಪರೂಪದ ಘಟನೆ. ಮಂಗಗಳು ಹೋದ ದಾರಿಯಲ್ಲಿ ಮತ್ತೆ ಹಿಂತಿರುಗುವುದಿಲ್ಲ.ಆದರೆ ಇಲ್ಲಿ ಹೆಂಚು ತೆಗೆದು ಒಳ ಪ್ರವೇಶಿಸಿದ ಮಂಗಗಳು ಮತ್ತೆ ದಾರಿಯಲ್ಲಿ ಹಿಂತಿರುಗಿದೆ ಅಂದಿದ್ದಾರೆ.
ಇನ್ನು ಮಂಗಗಳ ಕೈಯಿಂದ ಪವಾಡ ಅನ್ನುವಂತೆ ಪಾರಾಗಿರುವ ಮತ್ತೊಂದು ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಿಗಾ ವಹಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ವೈದ್ಯರು, ಎರಡೂ ಮಕ್ಕಳ ದೇಹದಲ್ಲಿ ಯಾವುದೇ ಗಾಯದ ಗುರುತುಗಳಿಲ್ಲ. ಜೊತೆಗೆ ಮೃತಪಟ್ಟ ಮಗುವಿನ ದೇಹದ ಎಲ್ಲಾ ಭಾಗಗಳು ಸರಿಯಾಗಿತ್ತು. ಒಂದು ವೇಳೆ ಮಂಗ ಶಿಶುವಿನ ಕೈಯನ್ನು ಎಳೆದ ಸಂದರ್ಭದಲ್ಲಿ jointಗಳು dislocation ಆಗಬೇಕಾಗಿತ್ತು. ಆದರೆ ಹಾಗಾಗಿಲ್ಲ ಅಂದಿದ್ದಾರೆ.
ಒಟ್ಟಿನಲ್ಲಿ ತಮಿಳುನಾಡಿನಲ್ಲಿ ನಡೆದ ಈ ಘಟನೆ ಎಂತವರನ್ನೂ ಬೆಚ್ಚಿ ಬೀಳಿಸುವಂತಿದೆ.
Discussion about this post