ಕೆಲ ದಿನಗಳ ಹಿಂದೆ ಕೇಂದ್ರ ಕ್ರೀಡಾ ಸಚಿವ ರಾಜವರ್ಧನ ಸಿಂಗ್ ರಾಥೋರ್ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನಲ್ಲಿ ಭಾರತೀಯ ಕ್ರೀಡಾ ಪಟುಗಳಿಗೆ ಆಹಾರ ಸೇವೆ ಒದಗಿಸಿದ್ದಾರೆ ಅನ್ನುವುದು ದೊಡ್ಡ ಸುದ್ದಿಯಾಗಿತ್ತು.
ಇದಕ್ಕೆ ಸಂಬಂಧಿಸಿದಂತೆ ಒಂದು ಫೋಟೋ ಕೂಡಾ ವೈರಲ್ ಆಗಿತ್ತು.ಭಾರತೀಯ ಕ್ರೀಡಾಪಟುಗಳ ಬಳಿ ನಿಂತಿದ್ದ ಸಚಿವರ ಕೈಯಲ್ಲಿ ಆಹಾರದ ಬೌಲ್ ಗಳಿದದ್ದು ಈ ಪರಿ ವೈರಲ್ ಗೆ ಕಾರಣವಾಗಿತ್ತು. ಭಾರತೀಯ ಕ್ರೀಡಾಪಟುಗಳಿಗಾಗಿ ಸಚಿವರು ಏನೆಲ್ಲಾ ಕೆಲಸ ಮಾಡುತ್ತಿದ್ದಾರೆ ನೋಡಿ ಎಂದು ಜನ ಸಚಿವರನ್ನು ಸಿಕ್ಕಾಪಟ್ಟೆ ಹೊಗಳಿದ್ದರು.
ಆದರೆ ರಾಜವರ್ಧನ ಸಿಂಗ್ ರಾಥೋರ್ ಕ್ರೀಡಾಪಟುಗಳಿಗೆ ಆಹಾರ ಸರಬರಾಜು ಮಾಡುವ ಕೆಲಸ ಮಾಡಿಯೇ ಇಲ್ಲ. ಬದಲಿಗೆ ತಾವು ಆಹಾರ ತಿನ್ನುವ ಸಲುವಾಗಿ ತಮ್ಮ ಆಹಾರದ ಟ್ರೇ ಜೊತೆ ಅಲ್ಲಿಗೆ ಬಂದಿದ್ದಾರೆ. ಇದೇ ವೇಳೆ ಕ್ರೀಡಾಪಟುಗಳೊಂದಿಗೆ ಅವರು ಮಾತುಕತೆಯನ್ನು ಕೂಡಾ ನಡೆಸಿದ್ದಾರೆ.ಆದರೆ ಪೋಟೋ ಕಂಡ ಮಂದಿ ಅದಕ್ಕೆ ಸುಣ್ಣ ಬಣ್ಣ ಬಳಿದು ಬಿಟ್ಟಿದ್ದಾರೆ.
ದುರಂತ ಅಂದರೆ ಸುಳ್ಳು ಮಾಹಿತಿ ಹೊತ್ತ ಫೋಟೋವನ್ನು ಕರ್ನಾಟಕ ಸೇರಿದಂತೆ ದೇಶದ ಅನೇಕ ಪ್ರಜ್ಞಾನಂತರೆನಿಸಿಕೊಂಡ ರಾಜಕಾರಣಿಗಳು ಶೇರ್ ಮಾಡಿದ್ದಾರೆ.
ಈ ವೈರಲ್ ಇಮೇಜ್ ಮೊದಲಿಗೆ ಕಾಣಿಸಿಕೊಂಡಿದ್ದು Sports Authority of India (SAI) ನ ಟ್ವೀಟರ್ ಪೇಜ್ ನಲ್ಲಿ. ಹಾಗಂತ ಅವರು ಸಚಿವರು ಆಹಾರ ಸರಬರಾಜು ಮಾಡುತ್ತಿದ್ದಾರೆ ಎಂದು ಬರೆಯಲಿಲ್ಲ. ಸಚಿವರು ಕೂಡಾ ತಾವು ಇಂತಹುದೊಂದು ಕೆಲಸ ಮಾಡಿದ್ದು ಹೌದು ಅಂದಿಲ್ಲ. ಆದರೆ ಈ ಪೋಟೋ ವನ್ನು ಡೌನ್ ಲೋಡ್ ಮಾಡಿಕೊಂಡ ಮಂದಿ ಸಚಿವರನ್ನು ಹೊಗಳುವ ಭರಾಟೆಯಲ್ಲಿ ಸುಳ್ಳುಗಳನ್ನು ಸೇರಿಸಿದ್ದಾರೆ.
ಹಾಗಾದರೆ ಬದಲಾಗುತ್ತಿದೆ ಭಾರತ, ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಕ್ರೀಡಾ ಸಚಿವರೇ ಬರಲು 60 ವರ್ಷ ಬೇಕಾಯ್ತು ಅನ್ನುವ ಟೀಕೆಯಲ್ಲಿ ಅರ್ಥವಿಲ್ಲವೇ, ಖಂಡಿತಾ ಇದೆ.
ಯುಪಿಎ ಆಡಳಿತ ನಡೆಸಿದ ಸಂದರ್ಭದಲ್ಲಿ ಕ್ರೀಡಾಪಟುಗಳನ್ನು ಅದ್ಯಾವ ಕ್ರೀಡಾ ಸಚಿವ ಈ ಮಟ್ಟಿಗೆ ಪ್ರೋತ್ಸಾಹಿಸಿದ್ದಾನೆ ಹೇಳಿ. ಕಲ್ಮಾಡಿಯಂತವರು ಕ್ರೀಡೆ ಹೆಸರಿನಲ್ಲಿ ಏನು ಮಾಡಿದ್ರು ಅನ್ನುವುದು ಎಲ್ಲರಿಗೆ ಗೊತ್ತಿದೆ.ಕಾಂಗ್ರೆಸ್ ನಿಂದ ಆಯ್ಕೆಯಾದ ಅದ್ಯಾವ ಕ್ರೀಡಾ ಸಚಿವ ಕ್ರೀಡಾಂಗಣಕ್ಕೆ ಹೋಗಿ ಕ್ರೀಡಾಪಟುಗಳ ಬೆನ್ನು ತಟ್ಟಿದ್ದಾನೆ, ಖಂಡಿತಾ ಇಲ್ಲ. ತಾವೇ ಕ್ರೀಡಾಪಟುವಾಗಿರುವ ಕಾರಣ, ಕ್ರೀಡಾಪಟುಗಳ ಸಂಕಷ್ಟದ ಅರಿವಿರುವ ರಾಥೋರ್ ಇಂತಹುದೊಂದು ಕೆಲಸ ಮಾಡಿದ್ದಾರೆ. ದೇಶಕ್ಕೆ ಇಂತಹ ಕ್ರೀಡಾ ಸಚಿವರನ್ನು ಕೊಟ್ಟ ಮೋದಿಯವರನ್ನು ನಾವು ಅಭಿನಂದಿಸಬೇಕು ತಾನೇ…?
Discussion about this post