ಬೆಂಗಳೂರು : ಝೋಮ್ಯಾಟೋ ಡೆಲಿವರಿ ಬಾಯ್ ಹಾಗೂ ಮಾಡೆಲ್ ನಡುವಿನ ಜಗಳದ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ.
ಮಾಡೆಲ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದ್ದ ಕಾರಣ ಮೊದಲು ಆಕೆಯ ಬಗ್ಗೆ ಅನುಕಂಪದ ಅಲೆ ಹರಿದು ಬಂದಿತ್ತು.
ಡೆಲಿವರಿ ಹುಡುಗನಿಗೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡೋದು ಹೇಗೆಂದು ಗೊತ್ತಿಲ್ಲದ ಕಾರಣ ಅವನು ವಿಲನ್ ಎಂದೇ ಬಿಂಬಿತನಾಗಿದ್ದ.
ಆದರೆ ಇದೀಗ ಹಲ್ಲೆಗೊಳಗಾಗಿದ್ದೇನೆ ಎಂದು ಹೇಳಿಕೊಂಡಿರುವ ಮಾಡೆಲ್ ಹಿತೇಶಾ ಚಂದ್ರಾಣಿ ವಿರುದ್ಧ ನೆಟ್ಟಿಗರು ತಿರುಗಿ ಬಿದ್ದಿದ್ದಾರೆ.
ಇದಕ್ಕೆ ಕಾರಣ ಆರೋಪಿ ಸ್ಥಾನದಲ್ಲಿರುವ ಕಾಮರಾಜ್ ಕೊಟ್ಟಿರುವ ಹೇಳಿಕೆ.
ಫುಡ್ ಡೆಲಿವರಿ ತಡ ಮಾಡಿದ, ನಾನು ನಿನ್ನ ಗುಲಾಮನಲ್ಲ ಅಂದ, ಮೂಗಿಗೆ ಹೊಡೆದ ಎಂದೆಲ್ಲಾ ಅಪಾದಿಸಿದ್ದ ಹಿತೇಶಾ ವಿರುದ್ಧ ಹೇಳಿಕೆ ಕೊಟ್ಟಿರುವ ಕಾಮರಾಜ್, ಅದು ನಾನು ಹೊಡೆದು ಆಗಿರುವ ಗಾಯವಲ್ಲ, ಆಕೆಯ ಉಂಗುರ ತಾಗಿ ಆಗಿರುವ ಗಾಯ. ಬೇಕಿದ್ದರೆ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಲಿ ಅಂದಿದ್ದಾರೆ.
ಫುಡ್ ಆರ್ಡರ್ ಸ್ವೀಕರಿಸಿದ ಬಳಿಕ 40 ರಿಂದ 50 ನಿಮಿಷ ತಡವಾಗಿ ಹೋಗಿದ್ದು ಹೌದು, ಅದಕ್ಕಾಗಿ ನಾನು ಅರ ಕ್ಷಮೆಯನ್ನು ಕೂಡಾ ಯಾಚಿಸಿದ್ದೆ. ಬರೋ ದಾರಿಯಲ್ಲಿ ನಡೆಯುತ್ತಿದ್ದ ಕಾಮಗಾರಿಯಿಂದ ತಡವಾಯಿತು ಅನ್ನುವುದನ್ನು ಅವರಿಗೆ ವಿವರಿಸಲು ಯತ್ನಿಸಿದ್ದೇನೆ. ಆದರೆ ಅದನ್ನು ಕೇಳುವ ಸ್ಥಿತಿಯಲ್ಲಿ ಅವರು ಇರಲಿಲ್ಲ.
ನನ್ನಿಂದ ಊಟವನ್ನು ಪಡೆದ ಅವರು ಕಾಸು ಕೊಡಲಿಲ್ಲ, ಕೇಳಿದ್ರೆ ಝೋಮ್ಯಾಟೋದವರೇ ಕ್ಯಾನ್ಸಲ್ ಮಾಡಿದ್ದಾರೆ ಅಂದಿದ್ದಾರೆ. ಸರಿ ಊಟ ವಾಪಾಸ್ ಕೊಡಿ ಅಂದ್ರೆ ಅದಕ್ಕೂ ಒಪ್ಪಲಿಲ್ಲ. ಈ ವೇಳೆ ಮಾತಿಗೆ ಮಾತು ಬೆಳೆದಿದೆ. ಜೊತೆಗೆ ನನ್ನ ಅವರು ಆಳು ಎಂದು ಕರೆದಿದ್ದಾರೆ.
ನನ್ನ ಎರಡು ವರ್ಷದ ಅನುಭವದಲ್ಲಿ ಇಂತಹ ಗ್ರಾಹಕರನ್ನು ನೋಡಿರಲಿಲ್ಲ. ಹೀಗಾಗಿ ಕಾಸು ಸಿಗೋದಿಲ್ಲ ಎಂದು ನಾನು ವಾಪಾಸ್ ಹೊರಟೆ, ಈ ವೇಳೆ ಲಿಫ್ಟ್ ಕಡೆ ಬಂದ್ರೆ ನನ್ನ ಮೇಲೆ ಚಪ್ಪಲಿ ಎಸೆದ್ರು, ತಪ್ಪಿಸಿಕೊಳ್ಳುವ ಸಲುವಾಗಿ ಕೈ ಅಡ್ಡ ಹಿಡಿದೆ. ಈ ವೇಳೆ ಹೊಡೆಯಲು ಬಂದ್ರು, ನನ್ನ ರಕ್ಷಣೆಗಾಗಿ ನಾನು ನನ್ನ ಕೈ ಅಡ್ಡ ಹಿಡಿದೆ. ಈ ವೇಳೆ ಅವರ ಬೆರಳಿನಲ್ಲಿದ್ದ ಉಂಗುರ ಅವರ ಮೂಗಿಗೆ ಬಡಿದಿದೆ. ಹೀಗಾಗಿ ಗಾಯವಾಗಿ ರಕ್ತ ಸುರಿದಿದೆ.
ಫೋಟೋ ನೋಡಿದ್ರೆ ಯಾರಿಗಾದ್ರೂ ಗೊತ್ತಾಗುತ್ತದೆ ಅದು ಹೊಡೆದು ಆಗಿರೋ ಗಾಯವಲ್ಲ ಎಂದು. ಜೊತೆಗೆ ನಾನು ಎಂದಿಗೂ ಉಂಗುರ ತೊಟ್ಟವನಲ್ಲ. ಇನ್ನು ಯುವತಿಯೇ ನನ್ನ ಮೇಲೆ ದಾಳಿ ಮಾಡಿರುವುದಕ್ಕೆ ಸಿಸಿಟಿವಿ ದೃಶ್ಯಗಳೇ ಸಾಕ್ಷಿ ಅಂದಿದ್ದಾರೆ ಕಾಮರಾಜ್.
ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲೂ ಹಿತೇಶಾ ವಿರುದ್ಧ ಟೀಕೆಗಳು ಕೇಳಿ ಬಂದಿದೆ.
ಇನ್ನು ಕೆಲವರು ಕಾಮರಾಜ್ ನನ್ನು ಕೆಲಸಕ್ಕೆ ವಜಾಗೊಳಿಸಿರುವ ಝೋಮ್ಯಾಟೋ ವಿರುದ್ಧ ತಿರುಗಿ ಬಿದ್ದಿದ್ದಾರೆ.
Discussion about this post