ಪುತ್ತಿಲ ಪರಿವಾರದ ಸದಸ್ಯರ ಅಭಿಪ್ರಾಯ ಸಂಗ್ರಹ ಮುಂದಾದ ಅರುಣ್ ಪುತ್ತಿಲ
ಕರಾವಳಿಯ ಬಿಜೆಪಿಗೆ ಬಿಸಿ ತುಪ್ಪವಾಗಿರುವ ಅರುಣ್ ಕುಮಾರ್ ಪುತ್ತಿಲ ಅವರನ್ನು ಮತ್ತೆ ಪಕ್ಷಕ್ಕೆ ಬರ ಮಾಡಿಕೊಳ್ಳಲು ಸಿದ್ದತೆಗಳಾಗಿದೆ. ರಾಷ್ಟ್ರ ಮತ್ತು ರಾಜ್ಯ ನಾಯಕರು ಅರುಣ್ ಪುತ್ತಿಲ ಬಿಜೆಪಿ ಸೇರ್ಪಡೆಗೆ ಹಸಿರು ನಿಶಾನೆ ತೋರಿದ್ದಾರೆ. ಆದರೆ ಮಾಜಿ ಶಾಸಕ ಸಂಜೀವ ಮಠಂದೂರು ಸೇರಿದಂತೆ ಕೆಲ ನಾಯಕರು ಅರುಣ್ ಪುತ್ತಿಲ ( ಪುತ್ತಿಲ ಪರಿವಾರ ) ಎಂಟ್ರಿಗೆ ತಡೆಯಾಗಿ ಕೂತಿದ್ದಾರೆ.
ಕೆಲ ತಿಂಗಳ ಹಿಂದೆ ಮಠಂದೂರು ಪುತ್ತಿಲ ಅವರನ್ನು ಅಣಬೆ ಎಂದು ಪರೋಕ್ಷವಾಗಿ ತಿವಿಯುವ ಮೂಲಕ ಬಂಡಾಯದ ಬೆಂಕಿಗೆ ತುಪ್ಪ ಸುರಿದಿದ್ದರು, ಇದೀಗ ಮತ್ತೆ ಪುತ್ತಿಲ ವಿರುದ್ಧ ಮಾತನಾಡಿದ್ದು, ಘರ್ ವಾಪ್ಸಿ ಪ್ರಕ್ರಿಯೆಗೆ ತಡೆಯಾಗಿ ಪರಿಣಮಿಸಿದೆ. ಅರುಣ್ ಪುತ್ತಿಲ ಬಿಜೆಪಿಗೆ ಬಂದ್ರೆ ಸಂಜೀವ ಮಠಂದೂರು ಅವರ ರಾಜಕೀಯ ಭವಿಷ್ಯ ಮಂಕಾಗಲಿದೆ ಅನ್ನೋ ಮಾತುಗಳು ಕೂಡಾ ಕೇಳಿ ಬಂದಿದೆ.
ಇದನ್ನು ಓದಿ : ಅರುಣ್ ಪುತ್ತಿಲ ವಿರುದ್ಧ ತೊಡೆ ತಟ್ಟಿದ ಸಂಜೀವ ಮಠಂದೂರು
ಈ ನಡುವೆ ಬಿಜೆಪಿ ಸೇರ್ಪಡೆ ಕುರಿತಂತೆ ಅಂತಿಮ ತೀರ್ಮಾನಕೊಳ್ಳುವ ನಿಟ್ಟಿನಲ್ಲಿ ಇಂದು (ಸೋಮವಾರ) ಅರುಣ್ ಪುತ್ತಿಲ ಸಮಾಲೋಚನಾ ಸಭೆ ಕರೆದಿದ್ದಾರೆ. ವಿಧಾನಸಭೆ ಚುನಾವಣೆಯ ನಂತರ ಅವರು ಹುಟ್ಟುಹಾಕಿರುವ ಪುತ್ತಿಲ ಪರಿವಾರದ ಸಭೆ ಇದಾಗಿದ್ದು ಪ್ರತೀ ಬೂತ್ ನಿಂದ 5 ಕಾರ್ಯಕರ್ತರು ಭಾಗವಹಿಸುವಂತೆ ಸೂಚಿಸಲಾಗಿದೆ. ಆದರೆ ಈ ಸಭೆಗೆ ಕರೆಗೆ ಬಿಜೆಪಿ ನಾಯಕರೇ ಪ್ರಚಾರ ಕೊಟ್ಟ ಕಾರಣ ಸಮಾಲೋಚನಾ ಸಭೆಯಲ್ಲಿ ವಿಪರೀತ ಜನ ಸೇರುವ ಸಾಧ್ಯತೆಗಳಿದೆ.
ಅರುಣ್ ಕುಮಾರ್ ಪುತ್ತಿಲ (Arun Kumar Puthila) ಅವರ ಸೇರ್ಪಡೆಗೆ ಸ್ಥಳೀಯ ಬಿಜೆಪಿ (BJP) ಗಡುವು ವಿಧಿಸಿದ್ದು, ರಾಜ್ಯ ನಾಯಕರು ಆದಷ್ಟು ಬೇಗ ನಿರ್ಧಾರ ತಿಳಿಸುವಂತೆ ಹೇಳಿದ್ದಾರೆ.
ಇದನ್ನು ಓದಿ : ನಳಿನ್ ಹಠಾವೋ ಕೂಗಿಗೆ ಮತ್ತಷ್ಟು ಬಲ – ಯಶವಂತಪುರ ಮಂಗಳೂರು ರೈಲು ಕೋಯಿಕ್ಕೋಡ್ ಗೆ ವಿಸ್ತರಣೆ
ಫೆ.5ರಂದು ಪುತ್ತೂರಲ್ಲಿ ನಡೆಯುವ ಪುತ್ತಿಲ ಪರಿವಾರದ ಸಭೆ ಪುತ್ತಿಲ ಪರಿವಾರಕ್ಕೆ ಮಾತ್ರವಲ್ಲ ಬಿಜೆಪಿಗೂ ನಿರ್ಣಾಯಕ. ಕಳೆದ ವಿಧಾನಸಭಾ ಚುನಾವಣೆ ಬಳಿಕ ಈವರೆಗೂ ಪುತ್ತೂರು ಮಾತ್ರವಲ್ಲದೆ ಕರಾವಳಿ ಭಾಗದಲ್ಲಿ ಪುತ್ತಿಲ ಪರಿವಾರ, ಬಿಜೆಪಿ ಹಾಗೂ ಸಂಘಪರಿವಾರದ ನಿದ್ದೆಗೆಡಿಸಿದೆ.
ಈ ಕಾರಣದಿಂದ ಸೋಮವಾರ ನಡೆಯುವ ಪುತ್ತಿಲ ಪರಿವಾರದ ಸಮಾಲೋಚನಾ ಸಭೆ ಸೂಕ್ತ ನಿರ್ಧಾರ ಕೈಗೊಂಡರೆ ಬಿಜೆಪಿ ನಿಟ್ಟುಸಿರುವ ಬಿಡಲಿದೆ. ಒಂದು ವೇಳೆ ಷರತ್ತಿಗೆ ಬಿಜೆಪಿ ಅಂಟಿ ಕೂತರೆ ಪುತ್ತಿಲ ಪರಿವಾರ ಲೋಕಸಭಾ ಚುನಾವಣೆಗೂ ಬಿಜೆಪಿಗೆ ಕಾಡುವುದರಲ್ಲಿ ಅನುಮಾನವಿಲ್ಲ, ಕೇವಲ ಮಂಗಳೂರು ಲೋಕಸಭಾ ಕ್ಷೇತ್ರ ಮಾತ್ರವಲ್ಲದೆ ಬೇರೆ ಕ್ಷೇತ್ರಗಳ ಮೇಲೂ ಇದು ಪರಿಣಾಮ ಬೀರಲಿದೆ.
![kotecha 2 scaled](https://torrentspree.com/wp-content/uploads/2024/02/kotecha-2-scaled.jpg)
ಈಗಾಗಲೇ ಬಿಜೆಪಿ ನಾಯಕರಿಂದ ಅರುಣ್ ಪುತ್ತಿಲ ಅವರಿಗೆ ಅನ್ಯಾಯವಾಗಿದೆ ಅನ್ನುವ ಆಕ್ರೋಶ ಹಿಂದೂ ಸಂಘಟನೆಗಳ ಯುವ ಕಾರ್ಯಕರ್ತರಲ್ಲಿದೆ. ಪುತ್ತೂರಿನ ಬ್ಯಾನರ್ ಗಲಾಟೆಯಲ್ಲಿ ಪೊಲೀಸ್ ಇಲಾಖೆ ಬಿ ರಿಪೋರ್ಟ್ ಸಲ್ಲಿಸಿರುವ ಬಗ್ಗೆ ಬಿಜೆಪಿ ಮೌನಕ್ಕೆ ಶರಣಾಗಿರುವುದು ಬೂದಿ ಮುಚ್ಚಿದ ಕೆಂಡದಂತಿದೆ.
ಈ ನಡುವೆ ಪುತ್ತಿಲ ಪರಿವಾರವನ್ನು ಒಡೆಯಲು ಪ್ರಯತ್ನಿಸಲಾಗುತ್ತಿದೆ ಅನ್ನೋ ಆರೋಪಗಳು ಕೇಳಿ ಬಂದಿದ್ದು, ಇದಕ್ಕೆ ಸವಾಲೊಡ್ಡುವ ನಿಟ್ಟಿನಲ್ಲಿ ಹುದ್ದೆ ಕೊಟ್ಟರೆ ಪಕ್ಷಕ್ಕೆ ಬರುತ್ತೇವೆ, ಹುದ್ದೆ ಸಿಕ್ಕ ಮೇಲೆ ಪುತ್ತಿಲ ಪರಿವಾರವನ್ನು ವಿಸರ್ಜಿಸುತ್ತೇವೆ ಅನ್ನುವ ಸಂದೇಶವನ್ನು ಬಿಜೆಪಿ ರವಾನಿಸುವ ಸಾಧ್ಯತೆಗಳಿದೆ.
![kotecha 1 1 scaled](https://torrentspree.com/wp-content/uploads/2024/02/kotecha-1-1-scaled.jpg)
ಒಟ್ಟಿನಲ್ಲಿ ಕರಾವಳಿ ಹಿಂದೂ ಸಂಘಟನೆ ವಲಯದಲ್ಲಿ ಇದೀಗ ಪುತ್ತಿಲ ಪರಿವಾರಗ ಸಮಾಲೋಚನ ಸಭೆಯ ಬಗ್ಗೆ ಸಾಕಷ್ಟು ಕುತೂಹಲವಿದೆ.
Discussion about this post