ಬೆಂಗಳೂರು : ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಚಂದನವನದ ನಟ ಸತ್ಯಜಿತ್ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.
ಕನ್ನಡದಲ್ಲಿ 650ಕ್ಕೂ ಸಿನಿಮಾಗಳಲ್ಲಿ ನಟಿಸಿರುವ ಸತ್ಯಜಿತ್ ನೆಗೆಟಿವ್ ಪಾತ್ರದಲ್ಲಿ ಸಿಕ್ಕಾಪಟ್ಟೆ ಮಿಂಚಿದ್ದರು. ತಮ್ಮದೇ ಮ್ಯಾನರಿಸಂ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮನ ಗೆದ್ದಿದ್ದ ಅವರು ಕನ್ನಡದ ಅನೇಕ ಹಿರಿಯ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.
ಸತ್ಯಜಿತ್ ಅವರಿಗೆ ಚಿತ್ರರಂಗದ ಹಿನ್ನಲೆಯಿಲ್ಲ. ಬದಲಾಗಿ ಹುಬ್ಬಳ್ಳಿಯಲ್ಲಿ KSRTC ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಅವರಿಗೆ ನಟನೆ ಬಗ್ಗೆ ಅಪಾರ ಪ್ರೀತಿ ಬೆಳೆದಿತ್ತು. ಹೀಗಾಗಿ ಹವ್ಯಾಸಿ ನಾಟಕ ತಂಡಗಳ ಜೊತೆಗೆ ಗುರುತಿಸಿಕೊಂಡಿದ್ದ ಅವರು ಅನೇಕ ಊರುಗಳಿಗೆ ತೆರಳಿ ನಾಟಕ ಪ್ರದರ್ಶಿಸುತ್ತಿದ್ದರು. ಇದೇ ನಾಟಕ ಪ್ರೀತಿ ಅವರನ್ನು ಬಾಲಿವುಡ್ ಅಂಗಳಕ್ಕೂ ಕರೆದುಕೊಂಡು ಹೋಗಿತ್ತು.
ಮುಂಬೈ ನಲ್ಲಿ ನಾಟಕ ಪ್ರದರ್ಶಿಸುತ್ತಿದ್ದ ವೇಳೆ ನಾನಾ ಪಾಟೇಕರ್ ಸತ್ಯಜಿತ್ ನಟನೆ ನೋಡಿ ಅಂಕುಶ ಅನ್ನುವ ಸಿನಿಮಾದಲ್ಲಿ ನಟಿಸುವ ಅವಕಾಶ ನೀಡಿದರು. ಹೀಗಾಗಿ ಸತ್ಯಜಿತ್ ಹಿರಿತೆರೆಗೆ ಹಿಂದಿ ಸಿನಿಮಾ ಮೂಲಕ ಕಾಲಿಟ್ಟರು. ಅಂಕುಶ ಸಿನಿಮಾ ಹಿಟ್ ಆದ ಬೆನ್ನಲ್ಲೇ ಕನ್ನಡದಲ್ಲಿ ಅವಕಾಶದ ಬಾಗಿಲು ತೆರೆಯಿತು. ಹೀಗಾಗಿ 1986ರಲ್ಲಿ ಅನಂತನಾಗ್ ಅಭಿನಯದ ಅರುಣರಾಗ ಚಿತ್ರದ ಮೂಲಕ ಚಂದನವನಕ್ಕೆ ಬಂದ ಸತ್ಯಜಿತ್, ವಿಲನ್, ಪೊಲೀಸ್, ತಂದೆ ಹೀಗೆ ಎಲ್ಲಾ ಪಾತ್ರಗಳಿಗೆ ಜೀವ ತುಂಬಿದರು.
ಅಂದ ಹಾಗೇ ಸತ್ಯಜಿತ್ ಅವರ ಮೂಲ ಹೆಸರು ಸೈಯದ್ ನಿಜಾಮುದ್ದೀನ್, ಚಿತ್ರರಂಗಕ್ಕೆ ಕಾಲಿಟ್ಟ ವೇಳೆ ಹೆಸರು ಉದ್ದವಾಯ್ತು ಎಂದು ನಿರ್ದೇಶಕರೊಬ್ಬರು ಸತ್ಯಜಿತ್ ಎಂದು ಕರೆದರಂತೆ. ಹೀಗಾಗಿ ಅದೇ ಹೆಸರಿನಿಂದ ಮುಂದೆ ಅವರು ಪ್ರಸಿದ್ಧರಾದರು.
Discussion about this post