ಚಂದನವನದ ಯುವರಾಜ ನಟ ಕಮ್ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ದಂಪತಿ ಗಂಡು ಮಗುವನ್ನು ಕುಟುಂಬಕ್ಕೆ ಬರ ಮಾಡಿಕೊಂಡಿದ್ದಾರೆ. ಈ ಮೂಲಕ ಕರ್ನಾಟಕದ ರಾಜಕೀಯದ ದೊಡ್ಮನೆಗೆ ಹೊಸ ಸದಸ್ಯನ ಎಂಟ್ರಿಯಾಗಿದೆ.
ಹೀಗಾಗಿ ಮಾಜಿ ಪ್ರಧಾನ ಮಂತ್ರಿದೇವೇಗೌಡ ಅವರ ಕುಟುಂಬದಲ್ಲಿ ಸಂಭ್ರಮ ನೆಲೆಸಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರೇವತಿ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.
ಇನ್ನು ತಾತನಾದ ಸುದ್ದಿ ಸಿಕ್ಕ ಬೆನ್ನಲ್ಲೇ ಕುಮಾರಸ್ವಾಮಿ ಆಸ್ಪತ್ರೆಗೆ ದೌಡಾಯಿಸಿದ್ದು ಮೊಮ್ಮಗನನ್ನು ಕಂಡು ಬಂದಿದ್ದಾರೆ. ಜೊತೆಗೆ ಈ ಸಂಬಂಧ ಟ್ವೀಟ್ ಮಾಡಿದ್ದು, ನನ್ನ ಜೀವನದಲ್ಲಿ ಇನ್ನೊಂದು ಶುಭ ಘಳಿಗೆ ಬಂದಿದೆ. ನಮ್ಮ ಪರಿವಾರಕ್ಕೆ ಹೊಸ ಸದಸ್ಯನ ಆಗಮನವಾಗಿದೆ. ತಾತನಾದೆ ಎಂದು ಹೇಳಲು ಅತೀವ ಸಂತಸವಾಗುತ್ತಿದೆ. ಕಂದನಿಗೆ ನಿಮ್ಮೆಲ್ಲರ ಹಾರೈಕೆ ಮತ್ತು ಆಶೀರ್ವಾದ ಇರಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಅಂದಿದ್ದಾರೆ.
ಇನ್ನು ದೇವೇಗೌಡರ ಕುಟುಂಬದ ಆಪ್ತ ಶಾಸಕ ಶರವಣ ಕೂಡಾ ಈ ಸಂಬಂಧ ಟ್ಟೀಟ್ ಮಾಡಿದ್ದುನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಅವರಿಗೆ ಗಂಡು ಮಗು ಜನನವಾಗಿದೆ. ಮಾಜಿ ಪ್ರಧಾನಿ ಶ್ರೀ ಹೆಚ್ ಡಿ ದೇವೇಗೌಡರ ಮರಿ-ಮೊಮ್ಮಗ ಆಗಮನ ಅತ್ಯಂತ ಸಂತೋಷ ತಂದಿದೆ. ಶಿರಡಿ ಸಾಯಿಬಾಬನ ಅನುಗ್ರಹ ಮಗುವಿನ ಮೇಲಿರಲೆಂದು ಆಶಿಸುತ್ತೇನೆ ಅಂದಿದ್ದಾರೆ.
Discussion about this post