ಮಂಗಳೂರಿಗೆ ರಾಜ್ಯದ ಬೇರೆ ಭಾಗದ ಯಾವುದೇ ಸರ್ಕಾರಿ ಅಧಿಕಾರಿ ಕರ್ತವ್ಯ ಸಲುವಾಗಿ ತೆರಳಿದರೆ, ಸ್ಥಳೀಯರು ಅವರನ್ನು ಸ್ವೀಕರಿಸಲು ತುಂಬಾ ಸಮಯ ತೆಗೆದುಕೊಳ್ಳುತ್ತಾರೆ. ಅವರಿಗೆ ಇವ ನಮ್ಮವರು ಅನ್ನಿಸಿಕೊಳ್ಳುವ ತನಕ ಅವರನ್ನು ಒಂದಡಿ ದೂರದಲ್ಲೇ ನಿಂತು ಮಾತನಾಡಿಸುತ್ತಾರೆ.
ಅದರಲ್ಲೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ ಮುಖ್ಯಸ್ಥರುಗಳ ಬಗ್ಗೆ ಸ್ಥಳೀಯರು ಭಾರೀ ಎಚ್ಚರಿಕೆ ಹೆಜ್ಜೆ ಇಡುತ್ತಾರೆ. ಒಂದು ಸಲ ಆ ಅಧಿಕಾರಿಯನ್ನು ನಮ್ಮವರು ಅಂದುಕೊಂಡರೆ ಸಾಕು, ಆಮೇಲೆ ಅಧಿಕಾರಿಗಳು ಹೇಳಿದ ಮಾತು ಕ್ಷಣ ಮಾತ್ರದಲ್ಲಿ ನಡೆದು ಹೋಗುತ್ತದೆ.
ಈ ಕಾರಣದಿಂದಲೇ ಇಲ್ಲಿಗೆ ವರ್ಗವಾಗಿ ಹೋದ ಅನೇಕ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಪೊಲೀಸ್ ಇನ್ಸ್ ಪೆಕ್ಟರ್ ಗಳು ಸಾಕಷ್ಟು ಹೆಸರು ಮಾಡಿರುವುದು. ಜಾತಿಯ ಪ್ರಶ್ನೆಯೇ ಇಲ್ಲದೆ ಇಲ್ಲಿನ ತುಳು ಭಾಷೆ ಜನರ ಬಾಂಧವ್ಯ ಬೆಸೆಯುವುದೇ ಇದಕ್ಕೆ ಕಾರಣ.
ಇಂತಹ ಸಂದರ್ಭದಲ್ಲಿ ಚಿಕ್ಕ ಅವಧಿಯಲ್ಲಿ ಜನರಿಗೆ ಸಿಕ್ಕಾಪಟ್ಟೆ ಹತ್ತಿರವಾಗಿದ್ದು, ಇತ್ತೀಚೆಗೆ ಮಂಗಳೂರು ಕಮಿಷನರ್ ಆಗಿ ವರ್ಗವಾಗಿರುವ ಡಾ. ಹರ್ಷ. ಈ ಹಿಂದಿನ ಆಯುಕ್ತ ಸಂದೀಪ್ ಪಾಟೀಲ್ ಅವರು ಪ್ರಾರಂಭಿಸಿದ ಕಾರ್ಯಗಳಿಗೆ ಒಂದಿಷ್ಟು ಸ್ಥಳೀಯ ಪ್ಲೇವರ್ ಕೊಟ್ಟು ಜನರಿಗೆ ಸಿಕ್ಕಾಪಟ್ಟೆ ಹತ್ತಿರವಾಗಿದ್ದಾರೆ ಡಾ. ಹರ್ಷ.
‘ನನ್ನ ಬೀಟ್ ನನ್ನ ಹೆಮ್ಮೆ’ ಅನ್ನುವ ವಿಶೇಷ ಯೋಜನೆಯೊಂದನ್ನು ಜಾರಿಗೆ ತಂದ ಡಾ. ಹರ್ಷ, ಪೊಲೀಸ್ ಇಲಾಖೆಯ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ತುಳುವನ್ನು ಬಳಸಲಾರಂಭಿಸಿದರು. ಅಷ್ಟೇ ಡಾ. ಹರ್ಷ ಇದೀಗ ಕರಾವಳಿಯ ಪಾಲಿಗೆ ಹೀರೋ ಆಗಿದ್ದಾರೆ.
ಇದೇ ಡಾ.ಹರ್ಷ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕರಾವಳಿಯ ರೌಡಿಗಳಿಗೆ ಬದುಕು ಬದಲಾಯಿಸಿಕೊಳ್ಳಲು ಅದ್ಭುತ ಅವಕಾಶ ಕೊಟ್ಟಿದ್ದಾರೆ. ಈ ಮೂಲಕ ಕರಾವಳಿಯ ರೌಡಿ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ವಿಭಿನ್ನ ಪ್ರಯತ್ನ ಪ್ರಾರಂಭಿಸಿದ್ದಾರೆ.
ರೌಡಿಗಳಿಗೆ ರೌಡಿಸಂ ಬಿಟ್ಟು ಬಿಡಿ, ಇಲ್ಲ ಅಂದ್ರೆ ಹುಷಾರ್ ಅನ್ನುವುದು ಹಳೇ ಡೈಲಾಂಗ್ ಎಂದು ಅರಿತುಕೊಂಡಿರುವ ಅವರು, ರೌಡಿ ಶೀಟರ್ ಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಮುಂದಾಗಿದ್ದಾರೆ. ರೌಡಿ ಶೀಟರ್ ಗಳಿಗೂ ಮನ ಪರಿವರ್ತನೆ ಮಾಡಿಕೊಳ್ಳಲು ಅವಕಾಶವೊಂದನ್ನು ನೀಡಿದ್ದಾರೆ.
ಹಳೆಯ ಚಟುವಟಿಕೆಗಳಿಗೆ ಬ್ರೇಕ್ ಹಾಕಿ, ಸನ್ನಡತೆಯಿಂದ ಬದುಕಲು ಬಯಸುವ ರೌಡಿ ಶೀಟರ್ ಗಳಿಗೆ ಉದ್ಯೋಗದ ಆಫರ್ ನೀಡಿರುವ ಪೊಲೀಸ್ ಆಯುಕ್ತರು, ದುಡಿದು ತಿನ್ನುವ ಕೈಗಳಿಗೆ ಉದ್ಯೋಗ ಕೊಡುತ್ತೇವೆ ಅಂದಿದ್ದಾರೆ.
ಈ ಸಂಬಂಧ 350 ರೌಡಿ ಶೀಟರ್ ಗಳ ಪೆರೇಡ್ ನಡೆಸಿರುವ ಅವರು ಕೌಶಲ್ಯ ತರಬೇತಿ ನೀಡಲು ನಿರ್ಧರಿಸಿದ್ದಾರೆ.
ಇದಕ್ಕಾಗಿ ಆಯುಕ್ತರ ಕಚೇರಿಯಲ್ಲಿ ಪ್ರತ್ಯೇಕ ವಿಭಾಗ ತೆರೆಯಲಾಗಿದ್ದು, ಉದ್ಯೋಗ ಪಡೆಯ ಬಯಸುವ ರೌಡಿ ಶೀಟರ್ ಗಳಿಗೆ ಕೌಶಲ್ಯ ತರಬೇತಿ ನೀಡಲಾಗುತ್ತದೆ.
ಅಕ್ಟೋಬರ್ ತಿಂಗಳಲ್ಲಿ ಮೊದಲ ಬ್ಯಾಚ್ ಪ್ರಾರಂಭವಾಗಲಿದೆ. ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗ ಸಿಗಲಿದ್ದು, ನಂತರ ಆರು ತಿಂಗಳ ಕಾಲ ಅವರ ಚಟುವಟಿಕೆ ಬಗ್ಗೆ ಪೊಲೀಸ್ ಇಲಾಖೆ ನಿಗಾ ವಹಿಸಲಿದೆ. ನಡತೆ ಸನ್ನಡೆತೆಯಿಂದ ಕೂಡಿದ್ದಾರೆ. ಅವರನ್ನು ರೌಡಿ ಶೀಟರ್ ಪಟ್ಟಿಯಿಂದ ಕೈ ಬಿಡುವ ಪ್ರಕ್ರಿಯೆ ಪ್ರಾರಂಭಗೊಳ್ಳುತ್ತದೆ. ಒಂದು ವೇಳೆ ನಾಯಿ ಬಾಲ ಡೊಂಕು ಅನ್ನುವುದಾದರೆ ಕಾನೂನು ತನ್ನದೇ ಕ್ರಮ ಕೈಗೊಳ್ಳಲಿದೆ.
ಮಂಗಳೂರು ಕಮಿಷನರೇಟ್ ವ್ಯಾಪ್ತಿಯ 18 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುಮಾರು 3 ಸಾವಿರದಷ್ಟುರೌಡಿಶೀಟರ್ಗಳಿದ್ದಾರೆ. ಇವರಲ್ಲಿ ಹೆಚ್ಚಿನ ಮಂದಿ ಹಲ್ಲೆ, ದೊಂಬಿಯಂತಹ ಕೋಮು ಹಿಂಸಾಚಾರಗಳಲ್ಲಿ ತೊಡಗಿಸಿಕೊಂಡವರು. ಇದರಲ್ಲಿ ಅಕ್ರಮ ಜಾನುವಾರು ಸಾಗಾಟ, ಕೊಲೆ, ದರೋಡೆ ಪ್ರಕರಣಗಳಲ್ಲಿ ರೌಡಿಶೀಟ್ಗೆ ಒಳಗಾದವರೂ ಇದ್ದಾರೆ. ಆಗಸ್ಟ್ ಕೊನೆ ವಾರದಲ್ಲಿ ನಡೆದ ರೌಡಿ ಶೀಟರ್ಗಳ ಪರೇಡ್ನಲ್ಲಿ ಕಮಿಷನರ್ ಅವರು ಉದ್ಯೋಗದ ಹೊಸ ಆಫರ್ ನೀಡಿದ್ದರು. ಇದುವೇ ಈಗ ರೌಡಿಶೀಟರ್ಗಳ ಮನಃಪರಿವರ್ತನೆಗೆ, ಸನ್ನಡತೆಯ ಜೀವನಕ್ಕೆ ಹಾದಿ ಮಾಡಿಕೊಟ್ಟಿದೆ.
Discussion about this post