ಶನಿವಾರ ಹಾಗೂ ಭಾನುವಾರ ಪ್ರಸಾರವಾದ ಕನ್ನಡ ಕೋಟ್ಯಧಿಪತಿ ಕಾರ್ಯಕ್ರಮ ಸಾಕಷ್ಟು ಜನರ ಗಮನ ಸೆಳೆದಿದೆ. ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಯ ಮಕ್ಕಳನ್ನು ಹಾಟ್ ಸೀಟ್ ಗೆ ಆಹ್ವಾನಿಸಿದ್ದ ಪುನೀತ್ ರಾಜ್ ಕುಮಾರ್, ಮಕ್ಕಳ ಸಾಮಾನ್ಯ ಜ್ಞಾನವನ್ನು ಒರೆಗೆ ಹಚ್ಚಿದ್ದಾರೆ.
ಕನ್ನಡ ಮಾಧ್ಯಮದಲ್ಲಿ ಓದುವ ಸರ್ಕಾರಿ ಶಾಲೆಯ ಮಕ್ಕಳು ಅದ್ಯಾವ ಠಸ್ ಪುಸ್ ಇಂಗ್ಲೀಷ್ ಶಾಲೆಯ ಮಕ್ಕಳಿಗಿಂತ ಭಿನ್ನವಲ್ಲ ಅನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಅದರಲ್ಲೂ ಮಕ್ಕಳ ಮುಗ್ಧತೆ, ಅವರ ಸರಳತೆ, ನಾಟಕೀಯವಲ್ಲದ ಮಾತುಗಳು ಕೇಳಿದ್ರೆ ಸಿಟಿ ಮಕ್ಕಳಿಗಿಂತ ನಾವು ಒಂದು ಹೆಜ್ಜೆ ಮುಂದೆ ಎಂದು ಸಾಬೀತು ಮಾಡಿದ್ದಾರೆ.
ಕೇವಲ ಓದು ಮಾತ್ರವಲ್ಲ ಕೃಷಿ, ಹಾಲು ಕರೆಯುವುದು ಹೀಗೆ ಜೀವನ ಪಾಠಗಳನ್ನು ಕಲಿಯುವುದರಲ್ಲಿ ನಾವೇ ಎತ್ತಿದ ಕೈ ಅನ್ನುವುದನ್ನು ಕೂಡಾ ಸಾಬೀತು ಮಾಡಿದ್ದಾರೆ.
ಈ ಕನ್ನಡ ಮಾಧ್ಯಮದ ಸರ್ಕಾರಿ ಶಾಲಾ ಮಕ್ಕಳ ಎಪಿಸೋಡ್ ನಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳು ಒಬ್ಬರಿಗಿಂತ ಒಬ್ಬರು ಉತ್ತಮ ಸ್ಪರ್ಧಿಗಳಾಗಿದ್ದರು.
ಅದರಲ್ಲಿ ಗಮನ ಸೆಳೆದದ್ದು ಹಾಸನದ ಬ್ಯಾಡರಹಳ್ಳಿಯಿಂದ ಬಂದ ತೇಜಸ್ ಕೆಎನ್. ಕೆ.ಆರ್. ನಗರದ ಸಾಲಿಗ್ರಾಮ ಕೆಡಗದ ಈ ಹುಡುಗ ಮೂರು ಸೆಕೆಂಡ್ ಗಳಲ್ಲಿ ಫಾಸ್ಟೆಸ್ಟ್ ಫಿಂಗರ್ ರೌಂಡ್ಸ್ ನಲ್ಲಿ ಕೇವಲ ಮೂರು ಸೆಕೆಂಡ್ ಗಳಲ್ಲಿ ಉತ್ತರ ಕೊಟ್ಟು ಹಾಟ್ ಸೀಟ್ ಅಲಂಕರಿಸಿದ್ದ.
ಕಾರ್ಯಕ್ರಮಕ್ಕೆ ಸ್ವಾಗತಿಸಿದ ಪುನೀತ್, ತೇಜಸ್ ಗೆ ಬಾಯಿ ಸಿಹಿ ಮಾಡ್ಕೋ ಎಂದು ಚಾಕಲೇಟ್ ಕೊಟ್ರೆ, ಸರ್ ಇದನ್ನು ನಾನು ನನ್ನ ಅಕ್ಕನಿಗೆ ಕೊಡ್ತೀನಿ. ಪುನೀತ್ ಸರ್ ಕೊಡುವ ಚಾಕಲೇಟ್ ನನಗೆ ಬೇಕು ಅಂದಿದ್ದಾಳೆ ಮುಗ್ಧವಾಗಿ ಹೇಳುತ್ತಿದ್ದಂತೆ ಮನಸ್ಸು ಕರಗಿದ ಪುನೀತ್ ತಗೋ ಅಕ್ಕನಿಗೊಂದು ಚಾಕಲೇಟ್ ಎಂದು ಮತ್ತೊಂದು ಚಾಕಲೇಟ್ ಕೊಟ್ಟರು.
10ನೇ ತರಗತಿಯಲ್ಲಿ ಓದುತ್ತಿರುವ ತೇಜಸ್ 25 ಲಕ್ಷ ಗೆಲ್ಲುವ ಗುರಿ ಹೊಂದಿದ್ದ. ಇನ್ನು ಗೆದ್ದ ಕಾಸಿನಲ್ಲಿ ಏನು ಮಾಡಬೇಕು ಅಂದುಕೊಂಡಿದ್ದೀಯಾ ಅಂದ್ರೆ ಶಾಲೆಯ ಆವರಣದಲ್ಲಿ ನೆಡುವ ಗಿಡಗಳನ್ನು ದನ ತಿನ್ನುತ್ತಿದೆ. ಪ್ರತೀ ವರ್ಷ ಇದೇ ಗೋಳು. ಈ ವರ್ಷ ನೆಟ್ಟ ಗಿಡವೆಲ್ಲಾ ಮಳೆಗೆ ಕೊಚ್ಚಿ ಹೋಯ್ತು. ಹೀಗಾಗಿ ಅಲ್ಲೊಂದು ತಡೆಗೋಡೆ ನಿರ್ಮಿಸುತ್ತೇನೆ. ನನ್ನ ಕಾಲ ಮೇಲೆ ನಿಂತು ನಾನೇ ಓದಬೇಕು, ನನ್ನ ಅಕ್ಕನನ್ನು ಚೆನ್ನಾಗಿ ಓದಿಸಬೇಕು. ಆಕೆಗೆ ಮದುವೆ ಮಾಡಿಸಬೇಕು. ಹೀಗೆ ಕನಸುಗಳನ್ನು ಬಿಚ್ಚುತ್ತಲೇ ಸಾಗಿದೆ.
ಗೆದ್ದ ಕಾಸಿನಲ್ಲಿ ಶಾಲೆಗೊಂದು ತಡೆಗೋಡೆ ನಿರ್ಮಿಸಬೇಕು ಅನ್ನುವ ಆಸೆ ಈ ಹುಡುಗನಿಗಿತ್ತು ಅಂದ ಮೇಲೆ ಈತನ ಮುಗ್ಧತೆ ಎಂತಹುದು ಎಂದು ಊಹಿಸಿ.
ಇನ್ನು ಶಾಲೆಯ ರಜಾ ದಿನಗಳಲ್ಲಿ ಊರಿಗೆ ಹೋದ್ರೆ ಹಾಲು ಕರೆಯೋದು, ಡೈರಿಗೆ ಹಾಲು ಹಾಕೋದು ಹೀಗೆ ಅನೇಕ ಕೆಲಸಗಳನ್ನು ಮಾಡುತ್ತಾನಂತೆ.
ಇದೇ ಆಟದ ಸಂದರ್ಭದಲ್ಲಿ ಪುನೀತ್ ಅವರು ತೇಜಸ್ ಹಾಲು ಕರೆಯುತ್ತಾನೆ ಅನ್ನುವ ವಿಷಯ ತಿಳಿದು ನನಗೆ ಹಾಲು ಕರೆಯೋದಿಕ್ಕೆ ಬರೋದಿಲ್ಲ ಅಂದ್ರೆ, ಬನ್ನಿ ಸಾರ್ ಹೇಳಿ ಕೊಡ್ತೀನಿ ಅಂದ. ಮಾತುಕತೆ ಮುಂದುವರಿಸುತ್ತಾ ನೀನೇ ಹೀರೋ ಕಾಣೋ, ನೀನು ಮಾಡೋ ಕೆಲಸಗಳನ್ನು ನನ್ನ ಕೈಯಿಂದ ಮಾಡಲು ಸಾಧ್ಯವಿಲ್ಲ ಅಂದ್ರೆ, ನೀವು ಮಾಡೋ ಕೆಲಸ ನನ್ನಿಂದ ಕೈಯಿಂದ ಸಾಧ್ಯ ಇಲ್ಲ ಅಂದು ಪುನೀತ್ ಅವರಿಗೆ ಶಾಕ್ ಕೊಟ್ಟ.
ಇನ್ನು ಮೊದಲ ಪ್ರಶ್ನೆಗೆ ಲೈಫ್ ಬಳಸಿದ ಹುಡುಗ ಲಕ್ಷ ಲಕ್ಷ ಮೊತ್ತ ಗೆಲ್ಲುವತ್ತ ಸಾಗಿದ್ದ. ಮೊದಲ ಸುತ್ತಿನಲ್ಲಿ ದೂರದ ವಸ್ತುಗಳನ್ನು ನೋಡುವುದಕ್ಕೆ ಬಳಸುವ ಸಾಧನ ಯಾವುದು ಅನ್ನುವ ಪ್ರಶ್ನೆ ಕೇಳಲಾಗಿತ್ತು.
ಆಯ್ಕೆಯಾಗಿ ಬೈನಾಕ್ಯುಲರ್ಸ್ , ತಂಪು ಕನ್ನಡಕ, ಸ್ಟೆತಸ್ಕೋಪ್, ಕಂಪಾಸ್ ಗಳನ್ನು ನೀಡಲಾಗಿತ್ತು. ಆದರೆ ಉತ್ತರ ಇಂಗ್ಲೀಷ್ ನಲ್ಲಿದ್ದ ಕಾರಣ ಆಡಿಯನ್ಸ್ ಸಹಾಯ ಪಡೆದ ತೇಜಸ್ ಮತ್ತೆ ಲೈಫ್ ಲೈನ್ ಬಳಸದೇ ಗೆಲುವಿನತ್ತ ನುಗ್ಗಿದ್ದ. ಒಂದು ವೇಳೆ ಬೈನಾಕ್ಯುಲರ್ಸ್ ಬದಲಿಗೆ ದೂರದರ್ಶಕ ಅಂದಿದ್ದರೆ ಲೈಫ್ ಅನ್ನು ಬಳಸುವ ಪ್ರಮೇಯವೇ ಬರುತ್ತಿರಲಿಲ್ಲ.
ಗಾಂಧೀಜಿಯ ಪುಸ್ತಕವೊಂದರ ಕುರಿತ ಪ್ರಶ್ನೆಯೊಂದು ಬಂದಾಗ ಬುದ್ದಿವಂತಿಕೆ ತೋರಿದ ಹುಡುಗ ಆಟವನ್ನು ಕ್ವಿಟ್ ಮಾಡುವುದಾಗಿ ಹೇಳಿ 6,40,000 ಸಾವಿರ ರೂಪಾಯಿಗಳನ್ನು ಗೆದ್ದುಕೊಂಡಿದ್ದ.
ಒಂದು ವೇಳೆ ಕ್ವಿಟ್ ಮಾಡದಿರುತ್ತಿದ್ದರೆ ಲಕ್ಷದ ಮೊತ್ತ ಕಡಿಮೆಯಾಗಿರುತ್ತಿತ್ತು.
Discussion about this post