ಸಾಮಾಜಿಕ ಜಾಲ ತಾಣ ಅನ್ನುವ ಮಾಯಾಂಗನೆ ಎಂಥವರನ್ನೋ ಮೋಡಿ ಮಾಡುತ್ತದೆ. ಸಾಮಾಜಿಕ ಜಾಲ ತಾಣ ಜಮಾನದಲ್ಲಿ ಪ್ರತಿಭೆ ಇದ್ದವರು, ರಾತ್ರೋ ರಾತ್ರಿ ಸ್ಟಾರ್ ಆಗಿ ಬಿಡುತ್ತಾರೆ. ಕೆಟ್ಟದಾಗಿ ಹಾಡುವ ಮಂದಿಯೂ ಲಕ್ಷ ಲಕ್ಷ ಲೈಕ್ ಪಡೆದು ಬಿಡುವುದೂ ಉಂಟು.
ಆದರೆ ಗದಗ ಶಿರಹಟ್ಟಿಯ ಯುವಕ ಹನುಮಂತಪ್ಪ ಬಟ್ಟೂರು ತನ್ನ ಅದ್ಭುತ ಕಂಠ ಸಿರಿಯಿಂದ ಬೆಳಕಿಗೆ ಬಂದ ಪ್ರತಿಭೆ. ಕಾಡು ಮೇಡುಗಳಲ್ಲಿ ಕುರಿ ಮೇಯಿಸುತ್ತಾ ಹಾಡುತ್ತಿದ್ದ ಪ್ರತಿಭೆ ಯಾವಾಗ ಫೇಸ್ ಬುಕ್ ಗೆ ಎಂಟ್ರಿ ಕೊಡ್ತೋ, ಜನ ಹುಚ್ಚೆದ್ದು ಲೈಕ್ ಮಾಡಿದರು. ಸ್ವಂತ ಸಹೋದರನೇ ಹಾಡುತ್ತಿದ್ದಾನೆ ಅನ್ನುವಂತೆ ಶೇರ್ ಹೊಡೆದರು.
ಪುಟ್ಟ ಹಳ್ಳಿಯ ಪ್ರತಿಭೆ ಬೆಂಗಳೂರಿನ ಚಾನೆಲ್ ಅಂಗಳಕ್ಕೆ ಬಂದು ನಿಂತಿತು. ಚಲನಚಿತ್ರಗಳಲ್ಲಿ ಹಾಡಬೇಕು, ರಿಯಾಲಿಟಿ ಶೋ ವೇದಿಕೆ ಹತ್ತಬೇಕು ಎಂದು ಕನಸು ಕಂಡವನಿಗೆ ನನಸಾಗಲು ಇನ್ನೊಂದು ಹೆಜ್ಜೆ ಅನ್ನುವಂತೆ ಭಾಸವಾಯ್ತು.
ಆದರೆ ಇದೀಗ ಮಿಂಚಿನಂತೆ ಬಂದ ಹನುಮಂತಪ್ಪ ಎಲ್ಲಿ ಹೋದ ಅಂದರೆ, ಮುಗಿಲ ತಾರೆಯಂತೆ ಮಿಂಚಿ ಮರೆಯಿಗಿ ಹೋಗಿದ್ದಾನೆ. ಲೈಕ್ ಶೇರ್ ಮಾಡಿ ಕಮೆಂಟ್ ಮಾಡಿದ ಮಂದಿ ಹನುಮಂತಪ್ಪನನ್ನು ಮರೆತಿದ್ದಾರೆ.
ಮತ್ತೆ ತನ್ನದೇ ಲೋಕಕ್ಕೆ ಮರಳಿರುವ ಹನುಮಂತಪ್ಪ ಕುರಿ ಕಾಯುವ ಕಾಯಕ ಮುಂದುವರಿಸಿದ್ದಾನೆ. ನಿತ್ಯ 8 ಗಂಟೆಗೆ ಅಂಬ್ಲಿ ತಿಂದು ಬುತ್ತಿ ಕಟ್ಟಿ ಕುರಿಗಳ ಜೊತೆ ಹೊರಟರೆ ಮತ್ತೆ ಮನೆಗೆ ಬರುವುದು ಸೂರ್ಯ ಮುಳುಗಿದ ಮೇಲೆಯೇ
ಆದರೂ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, SPB ಯಂತೆ ನಾನು ಹಾಡಬೇಕು ಅನ್ನುವ ಛಲ ಮಾತ್ರ ನಿಂತಿಲ್ಲ. 8ನೇ ತರಗತಿ ಓದಿರುವ 22 ವರ್ಷದ ಹನುಮಂತಪ್ಪ ಅವಕಾಶಗಳ ಕರೆಗಾಗಿ ಬಾಗಿಲು ಕಾಯುತ್ತಿದ್ದಾನೆ. ಇಷ್ಟು ನಾನು ದಿನ ಹಾಡುತ್ತಿರುವುದುನ್ನು ಕುರಿಗಳು ಕೇಳಿಸಿಕೊಳ್ಳುತ್ತಿತ್ತು. ಈಗ ಇಡೀ ಕರ್ನಾಟಕ ಕೇಳಿಸಿಕೊಂಡಿದೆ. ಮುಂದೊಂದು ದಿನ ಖಂಡಿತಾ ಅವಕಾಶ ಬರುತ್ತದೆ ಅನ್ನುವ ನಿರೀಕ್ಷೆ ಈತನದ್ದು.
ಈಗಾಗಲೇ ಹೆಸರಿಡದ ಎರಡೂ ಸಿನಿಮಾಗಳ ಮಂದಿ ಅವಕಾಶ ಕೊಡುತ್ತೇನೆ ಎಂದಿದ್ದಾರೆ. ಝೀ ಕನ್ನಡ ವಾಹಿನಿಯವರು ಮುಂದಿನ ಅಡಿಶನ್ ನಲ್ಲಿ ಅವಕಾಶ ಕೊಡುತ್ತೇವೆ ಅಂದಿದ್ದಾರೆ.
ಪ್ರತಿಭೆ ಯಾರಪ್ಪನ ಸೊತ್ತು ಅಲ್ಲ ಅನ್ನುವುದನ್ನು ತೋರಿಸಿದ ಹನುಮಂತಪ್ಪನನ್ನು ಜನ ಮರೆತರೂ ಹಾಡುವುದನ್ನು ಅವರು ಮರೆತಿಲ್ಲ.
Discussion about this post