ಬೆಂಗಳೂರು : ಕೊರೋನಾ ಕಾರಣದಿಂದ ಹೇರಲಾಗಿದ್ದ ಲಾಕ್ ಡೌನ್ ಅನ್ನು ತೆರವುಗೊಳಿಸಲಾಗುತ್ತಿದೆ. ರಾಜ್ಯದಲ್ಲಿ ಇದೀಗ ಅನ್ ಲಾಕ್ 4.O ಜಾರಿಯಲ್ಲಿದ್ದು, ಚಿತ್ರಮಂದಿರಗಳು ಬಾಗಿಲು ತೆರೆದಿದೆ. ನಿಯಮಗಳ ಪ್ರಕಾರ ಶೇ 50ರಷ್ಟು ಸೀಟು ಭರ್ತಿ ಮಾಡಿ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ. ಈ ಪ್ರಕಾರ ಕೆಲ ಜಿಲ್ಲಾ ಕೇಂದ್ರಗಳಲ್ಲಿ ಕೆಲ ಕಡೆ ಚಿತ್ರಗಳ ಮರು ಬಿಡುಗಡೆ ನಡೆದಿದೆ. ಆದರೆ ಜನರಿಂದ ನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಹೀಗಾಗಿ ಸ್ಟಾರ್ ಸಿನಿಮಾಗಳು ಬಂದರೆ ಪರಿಸ್ಥಿತಿ ಸರಿ ಹೋಗಬಹುದು ಅನ್ನುವುದು ಚಿತ್ರೋದ್ಯಮಿಗಳ ಆಶಯ.
ಈ ನಡುವೆ ಆಗಸ್ಟ್ 1 ರಿಂದ ಶೇ100ರಷ್ಟು ಸೀಟು ಭರ್ತಿ ಮಾಡಲು ಅವಕಾಶ ಸಿಗಲಿದೆ ಅನ್ನುವ ಮಾತುಗಳು ಗಾಂಧಿನಗರದಲ್ಲಿದೆ. ಹೀಗಾಗಿ ಹೊಸ ಸಿನಿಮಾಗಳು ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ಕಾಯುತ್ತಿದ್ದಾರೆ. ಈಗಾಗಲೇ ಶಿವಣ್ಣ, ಸುದೀಪ್, ದುನಿಯಾ ವಿಜಯ್, ಗಣೇಶ್, ಜಗ್ಗೇಶ್, ನೀನಾಸಂ ಸತೀಶ್, ರಮೇಶ್ ಅರವಿಂದ್ ಸೇರಿ ಸಾಕಷ್ಟು ನಾಯಕರ ಚಿತ್ರಗಳು ಬಿಡುಗಡೆ ಭಾಗ್ಯಕ್ಕೆ ಕಾಯುತ್ತಿದೆ.
ಆಗಸ್ಟ್ ತಿಂಗಳಲ್ಲಿ ಶೇ100 ಸೀಟು ಭರ್ತಿ ಮಾಡಲು ಅವಕಾಶ ಸಿಗಲಿದೆ ಅನ್ನುವ ಸುದ್ದಿಯ ಬೆನ್ನಲ್ಲೇ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ಸಿನಿಮಾ ಸಪ್ಟಂಬರ್ 10ಕ್ಕೆ ಬಿಡುಗಡೆಯಾಗುವ ನಿರೀಕ್ಷೆ ಇದೆ. ಗೌರಿ ಗಣೇಶ ಹಬ್ಬದ ಪ್ರಯುಕ್ತ ಸಪ್ಟಂಬರ್ ತಿಂಗಳಲ್ಲಿ ಎ ಹರ್ಷ ನಿರ್ದೇಶನದ ಚಿತ್ರವನ್ನು ತೆರೆಗೆ ತರಲು ನಿರ್ಮಾಪಕ ಜಯಣ್ಣ ನಿರ್ಧರಿಸಿದ್ದಾರೆ.
Discussion about this post