ನೈರುತ್ಯ ರೈಲ್ವೆಯಲ್ಲಿ ಖಾಲಿ ಇರುವ ಡಿ ವೃಂದದ 2,200 ಹುದ್ದೆಗಳಿಗೆ ಇತ್ತೀಚೆಗೆ ನೇಮಕಾತಿ ನಡೆದಿದ್ದು, SSLC ವಿದ್ಯಾರ್ಹತೆಯ ಹುದ್ದೆಗಳನ್ನು ಎಂಟೆಕ್, ಎಂಬಿಎ, ಬಿ ಟೆಕ್, ಬಿಇ ಓದಿರುವವರು ಗಿಟ್ಟಿಸಿಕೊಂಡಿದ್ದಾರೆ.
ದುರಂತ ಅಂದರೆ 2,200 ಹುದ್ದೆಗಳ ಪೈಕಿ ಕನ್ನಡಿಗರಿಗೆ ಸಿಕ್ಕಿದ್ದು ಕೇವಲ ಶೇ.1ರಷ್ಟು ಮಾತ್ರ. ಫಿಟ್ಟರ್,ವೆಲ್ಡರ್, ಟ್ರ್ಯಾಕ್ ಮನ್, ಖಲಾಸಿ, ಹೆಲ್ಪರ್, ಪಾಯಿಂಟ್ ಮೆನ್ ಕಂ ಹಮಾಲಿ ಸೇರಿದಂತೆ ಬಹುತೇಕ ಹುದ್ದೆಗಳು ಬಿಹಾರ, ರಾಜಸ್ಥಾನ, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳದವರ ಪಾಲಾಗಿದೆ.
ಸಾಮಾನ್ಯ ಮತ್ತು ಹಿಂದುಳಿದ ಅಭ್ಯರ್ಥಿಗಳ ಆಯ್ಕೆ ಪಟ್ಟಿಯಲ್ಲಿ ಶೇ. 80ರಷ್ಟು ಬಿಹಾರ ಮಂದಿ ಸ್ಥಾನ ಪಡೆದುಕೊಂಡರೆ, ಪರಿಶಿಷ್ಟ ವರ್ಗಕ್ಕೆ ಮೀಸಲಾದ ಹುದ್ದೆಗಳು ಉತ್ತರ ಪ್ರದೇಶದವರ ಪಾಲಾಗಿದೆ.
ಕರ್ನಾಟಕ, ಕೇರಳ, ಮತ್ತು ಆಂಧ್ಪಪ್ರದೇಶದಿಂದ ಕೆಲವೇ ಕೆಲವು ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಆದರಲ್ಲಿ ಎಂಟೆಕ್ ಓದಿರುವ ಕೇರಳದ ಮೂವರು ಯುವತಿಯರೂ ಸೇರಿದ್ದಾರೆ.
ಎಂಟೆಕ್ ಓದಿರುವ ಹುಡುಗಿಯರು ಟ್ರ್ಯಾಕ್ ಮನ್ ಹುದ್ದೆಗೆ ಆಯ್ಕೆಯಾಗಿದ್ದು ಬೆಂಗಳೂರು ಮತ್ತು ಧಾರವಾಡದಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಟ್ರ್ಯಾಕ್ ಮನ್ ಅಂದರೆ ಚೀಲ ಬೆನ್ನಿಗೇರಿಸಿ, ಸುತ್ತಿಗೆ ಹಿಡಿದು ಹಳಿ ಪೂರ್ತಿ ಓಡಾಡಬೇಕು. ಪಾಯಿಂಟ್ ಮನ್ ಗಳು ರೈಲಿನ ಮುಂಭಾಗದಲ್ಲಿ ಬಾವುಟ ಬೀಸಬೇಕು.
2013ರಲ್ಲಿ ಈ ಹುದ್ದೆಗಳಿಗೆ ಕೊನೆಯ ಬಾರಿ ನೇಮಕಾತಿ ನಡೆದಿತ್ತು. ಆಗ ಆನ್ ಲೈನ್ ವ್ಯವಸ್ಥೆ ಇರಲಿಲ್ಲ. ಹುಬ್ಬಳ್ಳಿ, ಮೈಸೂರು, ಬೆಂಗಳೂರು ಮತ್ತು ಗೋವಾದಲ್ಲಿ ಪರೀಕ್ಷೆ ನಡೆದಿತ್ತು. ಆಗ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಆಯ್ಕೆಯಾಗಿದ್ದರು.
ಈ ಬಾರಿ ಆನ್ ಲೈನ್ ಪರೀಕ್ಷಾ ವ್ಯವಸ್ಥೆ ಜಾರಿಯಾಗಿದ್ದ ಕಾರಣ, ಅಖಿಲ ಭಾರತ ಮಟ್ಟದಲ್ಲಿ ಪರೀಕ್ಷೆ ನಡೆದಿತ್ತು. ದೇಶದ ಯಾವುದೇ ಮೂಲೆಯಿಂದಲೂ ಪರೀಕ್ಷೆ ಬರೆಯಲು ಅವಕಾಶವಿದ್ದ ಕಾರಣ ಹೊರ ರಾಜ್ಯದವರು ಆಯ್ಕೆಯಾಗಿದ್ದಾರೆ. ಮಾತ್ರವಲ್ಲದೆ ಹಿಂದಿ ಮಾಧ್ಯಮದಲ್ಲಿ ಪ್ರಶ್ನೆ ಪತ್ರಿಕೆ ಇರುವುದು ಕೂಡಾ ಕಡಿಮೆ ಸಂಖ್ಯೆಯಲ್ಲಿ ಕನ್ನಡಿಗರ ಆಯ್ಕೆಗೆ ಕಾರಣ ಎನ್ನಲಾಗಿದೆ.
ಅಂದ ಹಾಗೇ ನೈರುತ್ಯ ರೈಲ್ವೆ ವಲಯ ಹುಬ್ಬಳ್ಳಿ, ಬೆಂಗಳೂರು ಮತ್ತು ಮೈಸೂರು ವಿಭಾಗವನ್ನು ಒಳಗೊಂಡಿದ್ದು, ಹುಬ್ಬಳ್ಳಿಯಲ್ಲಿ ಕೇಂದ್ರ ಕಚೇರಿ ಹೊಂದಿದೆ.
ಒಂದು ಕಡೆ ಓದಿದವರ ಕೈಗೆ ಸೂಕ್ತ ಉದ್ಯೋಗ ಸಿಗುತ್ತಿಲ್ಲ. ಅನಿವಾರ್ಯವಾಗಿ ಕೆಳ ದರ್ಜೆಯ ಉದ್ಯೋಗಗಳನ್ನು ಉನ್ನತ ವ್ಯಾಸಂಗ ಮಾಡಿದ ಮಂದಿ ಪಡೆಯಬೇಕಾಗಿದೆ.
Discussion about this post