ಉಡುಪಿ : ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರ ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆಗೆ ಮುಂದಾಗಿರುವುದು ವಿವಾದಕ್ಕೆ ಕಾರಣವಾಗಿದೆ. ರೋಹಿತ್ ಚಕ್ರತೀರ್ಥ ಅವರನ್ನು ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಗೆ ಸೇರಿಸಿರುವ ಕಾರಣದಿಂದ ವಿವಾದವೆದ್ದಿದೆ. ಹೀಗೆ ವಿವಾದ ಹುಟ್ಟುಹಾಕುವ ಬದಲು ಮಕ್ಕಳ ಪಠ್ಯದಲ್ಲಿ ಏನಿರಬೇಕು, ಏನಿರಬಾರದು ಅನ್ನುವ ಬಗ್ಗೆ ಚರ್ಚೆಗಳು ನಡೆದಿರುತ್ತಿದ್ರೆ ಉತ್ತಮವಾಗಿತ್ತು. ಬದಲಾಗಿ ಸೈದ್ಧಾಂತಿಕ ಕಾರಣಕ್ಕೆ ಮಕ್ಕಳ ಪಠ್ಯದಲ್ಲಿ ವಿವಾದ ಹುಟ್ಟುಹಾಕಿರುವುದು ದುರಂತವೇ ಸರಿ.
ಪ್ರಗತಿಪರ ಎಂದು ಕರೆಸಿಕೊಂಡವರು, ಸ್ವಯಂಘೋಷಿತ ಕನ್ನಡ ಹೋರಾಟಗಾರರು ರೋಹಿತ್ ಚಕ್ರತೀರ್ಥರ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ. ಈ ನಡುವೆ ಚಕ್ರತೀರ್ಥ ಪರ ಬ್ಯಾಟ್ ಬೀಸುವವರ ಸಂಖ್ಯೆಯೂ ಕಡಿಮೆ ಇಲ್ಲ.
ಇದೀಗ ಲೇಖಕ ರೋಹಿತ್ ಚಕ್ರತೀರ್ಥ ಅವರನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ ಅಂದಿರುವ ಶಿಕ್ಷಣ ಸಚಿವ ಬಿಸಿ ನಾಗೇಶ್, ಹಳ್ಳಿಯಲ್ಲಿ ಹುಟ್ಟಿ, ಸರಕಾರಿ ಶಾಲೆಯಲ್ಲಿ ಕಲಿತು ಕುವೆಂಪು ಜ್ಞಾನಪೀಠ ಹೇಗೆ ಪಡೆದರು ಅನ್ನುವುದು ಮಕ್ಕಳಿಗೆ ಗೊತ್ತಾಗಲಿ, ಆದರೆ ಆ ಪಾಠವನ್ನೇ ಕಿತ್ತು ಹಾಕಲಾಗಿದೆ. ಇಂತಹ ಸಾಕಷ್ಟು ಆಪಾದನೆಗಳು ಈ ಹಿಂದಿನ ಪಠ್ಯ ಪುಸ್ತಕ ಸಂಸ್ಕರಣಾ ಸಮಿತಿಯ ಮೇಲಿದ್ದು ಅವೆಲ್ಲವನ್ನೂ ಸರಿಪಡಿಸುವ ನಿಟ್ಟಿನಲ್ಲೇ ಸಮಿತಿ ಮಾಡಲಾಗಿದೆ ಅಂದಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ತನ್ನ ಅಧಿಕಾರಾವಧಿಯಲ್ಲಿ ಬರಗೂರು ರಾಮಚಂದ್ರಪ್ಪ ಅವರನ್ನು ನೇಮಿಸಿದ್ಯಾಕೆ, ಈ ಅವಧಿಯಲ್ಲಿ ಪ್ರಕಟಿಸಿದ ಪಠ್ಯ ಪುಸ್ತಕದಲ್ಲಿರುವ ತಪ್ಪುಗಳನ್ನು, ವ್ಯಾಕರಣ ದೋಷಗಳನ್ನು ನೋಡಿದರೆ ಜನ ನಮಗೆ ಹೊಡೆಯುತ್ತಾರೆ. ಇದೇ ಪಠ್ಯದಲ್ಲಿ ವಿವೇಕಾನಂದರ ಭಾಷಣವನ್ನೇ ತಿರುಚಲಾಗಿದೆ ಎಂದು ಬರಗೂರು ಸಾಧನೆಯನ್ನು ಕೊಂಡಾಡಿದ್ದಾರೆ.
Discussion about this post