ಮಂಗಳೂರು : ಕೊರೋನಾ ಕಾರಣದಿಂದ ಹೇರಲಾಗಿದ್ದ ಲಾಕ್ ಡೌನ್ ತೆರವು ಬೆನ್ನಲ್ಲೇ ಅನ್ ಲಾಕ್ ನಿಯಮಗಳು ದೇವಸ್ಥಾನಕ್ಕೂ ಅನ್ವಯಿಸುತ್ತಿದೆ. ಈಗಾಗಲೇ ದೇವಸ್ಥಾನಗಳನ್ನು ತೆರೆಯಲಾಗಿದ್ದು, ಮಂಗಳವಾರದಿಂದ ಶ್ರೀಕ್ಷೇತ್ರ ಸುಬ್ರಹ್ಮಣ್ಯದಲ್ಲಿ ಭೋಜನ ಪ್ರಸಾದ, ಶ್ರೀ ದೇವಳದ ವಸತಿ ಗೃಹಗಳಲ್ಲಿ ತಂಗಲು ಅವಕಾಶ, ಲಡ್ಡು, ಪಂಚ ಕಜ್ಜಾಯ ಪ್ರಸಾದ, ತೀರ್ಥ ಬಾಟ್ಲಿ ವಿತರಣೆ ಹೀಗೆ ಅನೇಕ ಸೇವೆಗಳು ಪ್ರಾರಂಭಗೊಂಡಿದೆ.
ಜುಲೈ 29ರಿಂದ ಸರ್ಪಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ, ಮಹಾಭಿಷೇಕ ಸೇವೆಗಳು ಪ್ರಾರಂಭಗೊಳ್ಳಲಿದೆ. ಆದರೆ ಈ ಸೇವೆ ಮಾಡಿಸುವವರು ಕೊರೋನಾ ಸೋಂಕಿನ ವಿರುದ್ಧ ಒಂದು ಡೋಸ್ ಲಸಿಕೆ ಪಡೆದಿರುವುದು ಕಡ್ಡಾಯ. ಒಂದು ವೇಳೆ ಲಸಿಕೆ ಪಡೆದಿಲ್ಲ ಅನ್ನುವುದಾದರೆ RTPCR ಪರೀಕ್ಷೆ ನಡೆಸಿದ ನೆಗೆಟಿವ್ ರಿಪೋರ್ಟ್ ತರುವುದು ಕಡ್ಡಾಯ. ಇನ್ನು ಪೂಜೆಯ ವೇಳೆ ಸಾಮಾಜಿಕ ಅಂತರ ಮಾಸ್ಕ್ ಹಾಕುವುದು ಕೂಡಾ ಕಡ್ಡಾಯ. ಮಾತ್ರವಲ್ಲದೆ ಒಂದು ಟಿಕೆಟ್ ನಲ್ಲಿ ಇಬ್ಬರು ಮಾತ್ರ ಪಾಲ್ಗೊಳ್ಳ ಬಹುದಾಗಿದ್ದು ಸರ್ಪಸಂಸ್ಕಾರ ಮಾಡುವ ಅರ್ಚಕರು ಕೂಡಾ ಕೊರೋನಾ ಲಸಿಕೆ ಪಡೆದವರೇ ಆಗಿರುತ್ತಾರೆ.
ಈವರೆಗೆ ಒಂದು ಬ್ಯಾಚ್ನಲ್ಲಿ ನಡೆಯುತ್ತಿದ್ದ ಸರ್ಪಸಂಸ್ಕಾರ ಸೇವೆಯು ಪ್ರತಿದಿನ ಎರಡು ಬ್ಯಾಚ್ನಲ್ಲಿ ನಡೆಯಲಿದೆ. ಬೆಳಗ್ಗೆ 8 ಗಂಟೆಗೆ ಮೊದಲು ಹಾಗೂ 10 ಗಂಟೆಗೆ ಎರಡನೇ ಬ್ಯಾಚ್ ಸೇವೆ ನಡೆಯಲಿದೆ. ಪ್ರತೀ ಬ್ಯಾಚ್ ನಲ್ಲಿ 90 ಜನರಂತೆ ಒಟ್ಟು 180 ಮಂದಿ ಸರ್ಪಸಂಸ್ಕಾರ ಸೇವೆ ನಡೆಸಬಹುದಾಗಿದೆ.
ಆನ್ ಲೈನ್ ಬುಕ್ಕಿಂಗ್ ಮಾಡಿದ 60 ಮಂದಿ, ಡಿ.ಡಿ, ಎಂಟಿ, ಎಂ.ಒ ಮಾಡಿದ 10 ಭಕ್ತರು ಹಾಗೂ 39 ಗಣ್ಯ ವ್ಯಕ್ತಿಗಳ ಸೇವೆಗೆ ವ್ಯವಸ್ಥೆ ಕಲ್ಪಿಸಲಾಗಿದೆ..
ಇನ್ನು ಪ್ರತಿ ದಿನ 4 ಸರದಿಯಲ್ಲಿ ಆಶ್ಲೇಷ ಬಲಿ ಸೇವೆ ನಡೆಯಲಿದ್ದು ಒಟ್ಟು 240 ಭಕ್ತರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಬೆಳಗ್ಗೆ 6 ರಿಂದ ಸಂಜೆ 6.30ರ ತನಕ ಪ್ರತೀ ಸರದಿಯಲ್ಲಿ 60 ಭಕ್ತರಂತೆ 4 ಸರದಿಯಲ್ಲಿ 240 ಭಕ್ತರು ಸೇವೆ ಸಲ್ಲಿಸಲಿದ್ದಾರೆ. ಜೊತೆಗೆ ಸರ್ಪಸಂಸ್ಕಾರ ಸೇವೆಗೆ ಸಂಬಂಧಪಟ್ಟಂತೆ 180 ನಾಗಪ್ರತಿಷ್ಠೆ ಹಾಗೂ ಪ್ರತ್ಯೇಕ 25 ಭಕ್ತರಿಗೆ ನಾಗಪ್ರತಿಷ್ಠೆಗೆ ಅವಕಾಶವಿದ್ದು ಪ್ರತಿ ದಿನ 3 ಭಕ್ತರಿಗೆ ಮಹಾಭಿಷೇಕ ಸೇವೆ ನೆರವೇರಿಸಲು ಅವಕಾಶ ನೀಡಲಾಗಿದೆ.
Discussion about this post