ದೇಶದ ಸಮಸ್ಯೆಗಳನ್ನು ಚರ್ಚಿಸುವ ಸಲುವಾಗಿ ಕರೆದಿರುವ ಬಹು ನಿರೀಕ್ಷಿತ ಸಂಸತ್ತಿನ ಮುಂಗಾರು ಅಧಿವೇಶನ ಸೋಮವಾರ ಆರಂಭಗೊಂಡಿದ್ದು, ಮೊದಲ ದಿನದ ಕಲಾಪ ವಿರೋಧ ಪಕ್ಷಗಳ ಗಲಾಟೆ ಗದ್ದಲಗಳಿಗೆ ಬಲಿಯಾಗಿದೆ. ರಾಜ್ಯ ಸಭೆ ಹಾಗೂ ಲೋಕಸಭೆಗಳಲ್ಲಿ ವಿರೋಧ ಪಕ್ಷಗಳ ಸದಸ್ಯರು ಗದ್ದಲ ಎಬ್ಬಿಸಿದ ಕಾರಣ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.
ಈ ನಡುವೆ ಅಧಿವೇಶನ ಪ್ರಾರಂಭದಲ್ಲೇ ವೈಎಸ್ಆರ್ ಸಿಪಿ ಮದ್ದಿಲ ಗುರುಮೂರ್ತಿ, ಬಿಜೆಪಿ ಮಂಗಳಾ ಸುರೇಶ್, ಐಯುಎಂಎಲ್ ಅಬ್ದುಸಮ್ಮಾದ್ ಸಮದಾನ್ ಮತ್ತು ಕಾಂಗ್ರೆಸ್ಸಿನ ವಿಜಯ್ ವಸಂತ್ ಲೋಕಸಭೆ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು. ಇನ್ನು ರಾಜ್ಯ ಸಭೆಯಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಕ್ಷದ ಅಬ್ದುಲ್ ವಹಾಬ್ ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು.
![mangala suresh](https://torrentspree.com/wp-content/uploads/2021/07/mangala-suresh.png)
ಇದಾದ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಮಹಿಳೆಯರು, ದಲಿತರು, ಬುಡಕಟ್ಟು ಜನಾಂಗದವರು ಸಚಿವರಾದ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ಉತ್ಸಾಹ ಹೆಚ್ಚಾಗಿರುತ್ತದೆ. ಈ ಬಾರಿ ಕೃಷಿ ಮತ್ತು ಗ್ರಾಮೀಣ ಹಿನ್ನೆಲೆಯ ಒಬಿಸಿ ಸಮುದಾಯದ ನಮ್ಮ ಸಹೋದ್ಯೋಗಿಗಳಿಗೆ ಮಂತ್ರಿ ಸ್ಥಾನ ನೀಡಲಾಗಿದೆ ಎಂದರು.
ಮಹಿಳೆಯರು, ಒಬಿಸಿಗಳು, ರೈತರ ಪುತ್ರರು ಮಂತ್ರಿಗಳಾಗಿರುವುದು ಕೆಲವರಿಗೆ ಸಂತೋಷ ತಂದಿಲ್ಲ. ಹೀಗಾಗಿಯೇ ನೂತನ ಸಚಿವರಿಗೆ ತಮ್ಮ ಪರಿಚಯ ಮಾಡಿಕೊಳ್ಳುವುದಕ್ಕೂ ಸಹ ಅವರು ಅನುಮತಿಸುವುದಿಲ್ಲ ಎಂದು, ಪ್ರತಿಪಕ್ಷಗಳ ಸದಸ್ಯರ ಗದ್ದಲವನ್ನು ಮೋದಿ ಟೀಕಿಸಿದರು.
![modi loka sabha](https://torrentspree.com/wp-content/uploads/2021/07/modi-loka-sabha.png)
ವಿಪಕ್ಷಗಳು ತೀವ್ರ ಗದ್ದಲವನ್ನುಂಟು ಮಾಡಿದ ಹಿನ್ನಲೆಯಲ್ಲಿ ಲೋಕಸಭಾ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. ಬಳಿಕ ಅಂದಾಜು ಒಂದು ಗಂಟೆ ಕಲಾಪ ನಡೆಯಿತು. ಪ್ರತಿಪಕ್ಷಗಳ ಗಲಾಟೆ ಹೆಚ್ಚಾದ ಹಿನ್ನಲೆಯಲ್ಲಿ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.
ರಾಜ್ಯ ಸಭೆಯಲ್ಲೂ ಪ್ರತಿಪಕ್ಷಗಳ ಗದ್ದಲ ಹಿನ್ನಲೆಯಲ್ಲಿ ಕಲಾಪವನ್ನು 2 ಗಂಟೆಗೆ ಮುಂದೂಡಲಾಯ್ತು. ಎರಡು ಗಂಟೆಗೆ ಕಲಾಪ ಪ್ರಾರಂಭವಾದರೂ ಪ್ರತಿಪಕ್ಷಗಳ ಗದ್ದಲ ನಿಲ್ಲದ ಹಿನ್ನಲೆಯಲ್ಲಿ ಕೆಲ ಹೊತ್ತು ಕಲಾಪ ನಡೆಯಿತು. ಬಳಿಕ ಕಲಾಪವನ್ನು 3 ಗಂಟೆಗೆ ಮುಂದೂಡಲಾಯ್ತು. 3 ಗಂಟೆಗೆ ಪ್ರಾರಂಭವಾದ ಕಲಾಪ ಕೇವಲ 19 ನಿಮಿಷಗಳ ಕಾಲ ನಡೆಯಿತು. ಪ್ರತಿಪಕ್ಷಗಳ ಗಲಾಟೆ ಗದ್ದಲದ ಕಾರಣ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.
![rs](https://torrentspree.com/wp-content/uploads/2021/07/rs.png)
Discussion about this post