ಜಮ್ಮು: ಗಡಿ ನಿಯಂತ್ರಣ ರೇಖೆ ಹತ್ತಿರದ ಗಣಿಯೊಂದರಲ್ಲಿ ನಡೆದ ಸ್ಫೋಟದಲ್ಲಿ ಭಾರತೀಯ ಸೇನೆಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಮಂಕೋಟೆ ವಲಯದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ಸಂಭವಿಸಿದೆ.
ಹುತಾತ್ಮರನ್ನು ಕಮಲ್ ದೇವ್ ವೈದ್ಯ (27) ಎಂದು ಗುರುತಿಸಲಾಗಿದೆ.ಪೂಂಚ್ ಜಿಲ್ಲೆಯ ಕೃಷ್ಣ ಘಾಟಿ ವಲಯದಲ್ಲಿ ಕಾರ್ಯಾಚರಣೆ ಕರ್ತವ್ಯದಲ್ಲಿದ್ದ ಇವರು ತೆರಳುತ್ತಿದ್ದ ವೇಳೆ ಆಕಸ್ಮಿಕ ಸಂಭವಿಸಿದ ಗಣಿ ಸ್ಫೋಟದಲ್ಲಿ ಅವರು ಗಂಭೀರ ಗಾಯಗೊಂಡಿದ್ದರು.
ತಕ್ಷಣ ಅವರನ್ನು ಸೇನಾ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ ತೀವ್ರ ಗಾಯಗೊಂಡಿದ್ದ ಅವರು ಮೃತಪಟ್ಟಿದ್ದಾರೆ. ಹಿಮಾಚಲ ಪ್ರದೇಶದ ಹಮೀರ್ಪುರದ ಘಮಾರ್ವಿನ್ ಗ್ರಾಮದವರಾದ ಇವರು ತಾಯಿಯನ್ನು ಅಗಲಿದ್ದಾರೆ.
ಈ ನಡುವೆ ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾದಲ್ಲಿ ಭಾರತೀಯ ಸೇನಾಪಡೆ ಹಾಗೂ ಉಗ್ರರ ನಡುವೆ ಮುಖಾಮುಖಿ ಗುಂಡಿನ ಚಕಮಕಿ ನಡೆದಿದ್ದು ಈ ವೇಳೆ ಇಬ್ಬರು ಉಗ್ರರನ್ನು ಭಾರತೀಯ ಸೇನೆ ಹತ್ಯೆ ಮಾಡಿದೆ.
ಬಂಡಿಪೋರಾದ ಸುಮ್ಬ್ಲಾರ್ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಆಧಾರದ ಮೇಲೆ ಸ್ಥಳಕ್ಕೆ ಧಾವಿಸಿದ ಭದ್ರತಾ ಪಡೆಗಳು ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಈ ವೇಳೆ ಶರಣಾಗುವಂತೆ ಎಚ್ಚರಿಕೆ ಕೊಟ್ಟರು ಉಗ್ರರು ಏಕಾಏಕಿ ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಈ ವೇಳೆ ಭದ್ರತಾ ಪಡೆಗಳು ಉಗ್ರರಿಗೆ ದಿಟ್ಟ ಉತ್ತರ ಕೊಟ್ಟಿದೆ. ಈ ವೇಳೆ ಎನ್ಕೌಂಟರ್ ನಡೆಸಿ ಅಡಗಿದ್ದ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಇನ್ನು ಈ ಕಾರ್ಯಾಚರಣೆಯಲ್ಲಿ ಮೂವರು ಯೋಧರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಉಗ್ರರ ಗುರುತನ್ನು ಪತ್ತೆ ಹಚ್ಚಲಾಗುತ್ತಿದ್ದು. ಇನ್ನುಳಿದ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,
Discussion about this post