ಲೋಕಸಭಾ ಚುನಾವಣೆಯ ಫಲಿತಾಂಶದ ನಂತ್ರ ಹಲವು ರಾಜ್ಯಗಳ ರಾಜಕೀಯ ಪರಿಸ್ಥಿತಿ ಬದಲಾದರೂ ಅಚ್ಚರಿ ಇಲ್ಲ. ಈಗಾಗಲೇ ಕರ್ನಾಟಕದಲ್ಲಿ ಜೂನ್ ನಂತ್ರ ಹೊಸ ಸರ್ಕಾರ ಆಡಳಿತಕ್ಕೆ ಬರಲಿದೆ ಅನ್ನುವ ಸುದ್ದಿಗಳು ಹರಿದಾಡುತ್ತಿದೆ.
ಈ ನಡುವೆ ಪಶ್ಚಿಮ ಬಂಗಾಳದಲ್ಲೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆಗಳಿದೆ ಎನ್ನಲಾಗಿದೆ.
ಇದಕ್ಕೆ ಪುಷ್ಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ.
ಹೂಗ್ಲಿ ಜಿಲ್ಲೆಯ ಶ್ರೀರಾಂಪುರದಲ್ಲಿ ಸೋಮವಾರ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಮಾತನಾಡಿದ ನರೇಂದ್ರ ಮೋದಿಯವರು, ಲೋಕಸಭೆ ಚುನಾವಣೆಯ ಫಲಿತಾಂಶದ ಬಳಿಕ ಪಶ್ಚಿಮ ಬಂಗಾಳದಲ್ಲಿ ದೊಡ್ಡ ಮಟ್ಟದ ಪಕ್ಷಾಂತರ ನಡೆಯಲಿದೆ ಎಂಬ ಸುಳಿವನ್ನು ನೀಡಿದ್ದಾರೆ.
‘ದೀದಿ ಅವರೇ ನಿಮ್ಮ ಕಾಲಡಿಯ ನೆಲ ಕುಸಿಯುತ್ತಿದೆ. ಮೇ 23ರಂದು ಚುನಾವಣಾ ಫಲಿತಾಂಶ ಪ್ರಕಟವಾದಾಗ ಪಶ್ಚಿಮ ಬಂಗಾಳದಲ್ಲಿ ಕಮಲ ಅರಳಿರುತ್ತದೆ. ನಿಮ್ಮ ಶಾಸಕರು ನಿಮ್ಮ ಕೈಬಿಡುವರು. ನಿಮ್ಮ ಪಕ್ಷದ
40 ಶಾಸಕರು ಈಗಲೂ ನನ್ನ ಸಂಪರ್ಕದಲ್ಲಿದ್ದಾರೆ. ದೀದಿ ಅವರೇ ಈ ಸಂಕಷ್ಟದಿಂದ ಪಾರಾಗಲು ನಿಮಗೆ ಸಾಧ್ಯವಾಗದು, ಯಾಕೆಂದರೆ ನೀವೊಬ್ಬ ವಿಶ್ವಾಸದ್ರೋಹಿ’ ಎಂದು ಟೀಕಿಸಿದರು.
ಇನ್ನು ಮೋದಿಯವರ ಹೇಳಿಕೆ ಕುರಿತಂತೆ ಟಿಎಂಸಿ ಪ್ರತಿಕ್ರಿಯಿಸಿದ್ದು, ಪ್ರಧಾನಿಯಿಂದ ಶಾಸಕರ ಖರೀದಿ ಯತ್ನ ನಡೆಯುತ್ತಿದೆ ಎಂದು ಟಿಎಂಸಿ ಮುಖಂಡರೊಬ್ಬರು ದೂರಿದ್ದಾರೆ.
ನಮ್ಮ ಪಕ್ಷದ ಒಬ್ಬ ಪಾಲಿಕೆಯ ಸದಸ್ಯನೂ ನಿಮ್ಮ ಜೊತೆ ಬರುವುದಿಲ್ಲ. ನೀವು ಚುನಾವಣಾ ಪ್ರಚಾರ ಮಾಡುತ್ತಿರುವಿರೋ, ಶಾಸಕರ ಖರೀದಿ ನಡೆಸುತ್ತೀದ್ದೀರೋ ಎಂದು ಅವರು ಪ್ರಶ್ನಿಸಿದ್ದಾರೆ.
ಮೋದಿಯವರದ್ದು ಕೇವಲ ಚುನಾವಣಾ ಭಾಷಣಕ್ಕೆ ಸೀಮಿತವಾದ ಹೇಳಿಕೆ ಎಂದು ಸುಮ್ಮನಾಗುವ ಹಾಗಿಲ್ಲ. ಪಶ್ಚಿಮ ಬಂಗಾಳದ ರಾಜಕೀಯ ಪರಿಸ್ಥಿತಿ ನೋಡಿದರೆ, ಈ ಹಿಂದೆ ಬಿಜೆಪಿಗೆ ಬಾವುಟ ಕಟ್ಟಲು ಕಾರ್ಯಕರ್ತರು ಇರಲಿಲ್ಲ. ಆದರೆ ಈಗ ಟಿಎಂಸಿಗೆ ದೊಡ್ಡ ಪ್ರತಿಸ್ಪರ್ಧಿಯಾಗಿ ಬಿಜೆಪಿ ಹೊರ ಹೊಮ್ಮಿದೆ.
ಮಮತಾ ಬ್ಯಾನರ್ಜಿ ಅವರಿಗೆ ಆತ್ಮೀಯರಾಗಿದ್ದ ಮುಕುಲ್ ರಾಯ್ ಅವರನ್ನು ಸೆಳೆಯುವುದರೊಂದಿಗೆ ಬಿಜೆಪಿ ಪ್ರಾರಂಭಿಸಿರುವ ಗೆಲುವಿನ ಯಾತ್ರೆ ಇನ್ನೂ ಸಾಗಿದೆ. ಈಗಾಗಲೇ ಹಲವು ಶಾಸಕರನ್ನು
ಮುಕುಲ್ ರಾಯ್ ನೇತೃತ್ವದಲ್ಲಿ ಸೆಳೆದಿರುವ ಬಿಜೆಪಿ, ಹಲವು ಟಿಎಂಸಿ ಸಂಸದರನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಏನೂ ಬೇಕಾದರೂ ನಡೆಯಬಹುದು.
Discussion about this post