ಮಂಗಳೂರು : ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದಿದೆ. ಅದರಲ್ಲೂ ಕೊರೋನಾ ಅಬ್ಬರಿಸಿದ್ದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೇ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಸೋಂಕು ನಿಯಂತ್ರಿಸಬೇಕಾದ ರಾಜ್ಯ ಸರ್ಕಾರ ಐಸಿಯುನಲ್ಲಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಕರಾವಳಿ ಜಿಲ್ಲೆಯನ್ನು ದೇವರೇ ಕಾಪಾಡಬೇಕು.
ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಸೋಂಕಿತರ ಸಂಖ್ಯೆ ಏರುತ್ತಿದ್ದರೂ ಸೋಂಕು ನಿಯಂತ್ರಿಸಬೇಕಾದ ಅಗತ್ಯ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಂತೆ ಕಾಣಿಸುತ್ತಿಲ್ಲ. ಈಗಾಗಲೇ ರಾಜ್ಯ ಸರ್ಕಾರ ಹೊರಡಿಸಿರುವ ಅನ್ ಲಾಕ್ ನಿಯಮ ದಕ್ಷಿಣಕನ್ನಡಕ್ಕೂ ಅನ್ವಯಿಸುವುದರಿಂದ ಬಸ್ ಓಡಾಡುತ್ತಿದೆ, ಧಾರ್ಮಿಕ ಕೇಂದ್ರಗಳನ್ನು ತೆರೆಯಲಾಗಿದೆ. ಇಂದಿನಿಂದ ಕಾಲೇಜು ಬೇರೆ ಬಾಗಿಲು ತೆರೆದಿದೆ.
ಕೇವಲ ಸೋಂಕಿತರ ಸಂಖ್ಯೆ ಮಾತ್ರವಲ್ಲದೆ, ಸಾವಿನ ಸಂಖ್ಯೆಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಾಖಲೆ ಬರೆಯುತ್ತಿದೆ. ಬೆಂಗಳೂರು ನಗರದಲ್ಲಿ ಸೋಮವಾರದಂದು 467 ಮಂದಿಗೆ ಸೋಂಕು ತಗುಲಿದೆ.3 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಅದೇ ದಕ್ಷಿಣ ಕನ್ನಡದಲ್ಲಿ 357 ಮಂದಿಗೆ ಸೋಂಕು ತಗುಲಿದ್ದು, 4 ಮಂದಿ ಮೃತಪಟ್ಟಿದ್ದಾರೆ. ಮಾಸ್ಕ್ ಹಾಕಿಲ್ಲ ಎಂದು ಪೆಟ್ರೋಲ್ ಹುಡುಗನೊಬ್ಬನ ಮೇಲೆ ಅಬ್ಬರಿಸಿದ್ದ ಅಧಿಕಾರಿಗಳು ಇದೀಗ ಎಲ್ಲಿದ್ದಾರೋ ಗೊತ್ತಿಲ್ಲ.
ಇನ್ನು ಇವತ್ತಿನ ಜಿಲ್ಲಾವಾರು ಮಾಹಿತಿ:
ಬಾಗಲಕೋಟೆ 0, ಬಳ್ಳಾರಿ 0, ಬೆಳಗಾವಿ 69, ಬೆಂಗಳೂರು ಗ್ರಾಮಾಂತರ 17, ಬೆಂಗಳೂರು ನಗರ 467, ಬೀದರ್ 0, ಚಾಮರಾಜನಗರ 54, ಚಿಕ್ಕಬಳ್ಳಾಪುರ 7, ಚಿಕ್ಕಮಗಳೂರು 38, ಚಿತ್ರದುರ್ಗ 36, ದಕ್ಷಿಣಕನ್ನಡ 357, ದಾವಣಗೆರೆ 11, ಧಾರವಾಡ 8, ಗದಗ 10, ಹಾಸನ 57, ಹಾವೇರಿ 2, ಕಲಬುರ್ಗಿ 0, ಕೊಡಗು 19, ಕೋಲಾರ 28, ಕೊಪ್ಪಳ 0, ಮಂಡ್ಯ 40, ಮೈಸೂರು 162, ರಾಯಚೂರು 2, ರಾಮನಗರ 3, ಶಿವಮೊಗ್ಗ 52, ತುಮಕೂರು 59, ಉಡುಪಿ 78, ಉತ್ತರಕನ್ನಡ 19, ವಿಜಯಪುರ 9, ಯಾದಗಿರಿ 2 ಜನರಿಗೆ ಸೋಂಕು ತಗುಲಿದೆ.
ಮೃತಪಟ್ಟವರ ಸಂಖ್ಯೆ:
ಇವತ್ತು ಬೆಳಗಾವಿ 2, ಬೆಂಗಳೂರು ನಗರ 3, ಚಿಕ್ಕಮಗಳೂರು 1, ದಕ್ಷಿಣಕನ್ನಡ 4, ಹಾಸನ 1, ಹಾವೇರಿ 3, ಕಲಬುರ್ಗಿ 1, ಕೋಲಾರ 2, ಮಂಡ್ಯ 2, ಮೈಸೂರು 3, ರಾಮನಗರ 1, ಶಿವಮೊಗ್ಗ 1, ತುಮಕೂರು 1, ಉಡುಪಿ 1, ಉತ್ತರಕನ್ನಡ 3, ವಿಜಯಪುರ 2 ಸೇರಿದಂತೆ ರಾಜ್ಯದಲ್ಲಿ 31 ಸೋಂಕಿತರು ಮೃತಪಟ್ಟಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಸಾವಿನ ಪ್ರಕರಣ ವರದಿಯಾಗಿಲ್ಲ.
ದಕ್ಷಿಣ ಕನ್ನಡದ ಪರಿಸ್ಥಿತಿ ನೋಡಿದರೆ ಕೇರಳದ ಪರಿಸ್ಥಿತಿ ಜಿಲ್ಲೆಯಲ್ಲಾಗುತ್ತದೋ ಅನ್ನುವ ಆತಂಕ ಕಾಡುತ್ತಿದೆ. ಸೋಂಕು ಹೆಚ್ಚಿರುವ ಗ್ರಾಮಗಳಲ್ಲಿ ಕಟ್ಟು ನಿಟ್ಟಿನ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗದಿದ್ರೆ ಮೂರನೇ ಅಲೆಗೆ ದಕ್ಷಿಣ ಕನ್ನಡವೇ ಮುನ್ನುಡಿ ಬರೆಯುತ್ತದೆ.
Discussion about this post