ಬೆಂಗಳೂರು : ಕೊರೋನಾ ಸೋಂಕಿನ ಎರಡನೆ ಅಲೆಯಿಂದ ತತ್ತರಿಸಿ ಹೋಗಿರುವ ಭಾರತದಲ್ಲಿ ಇದೀಗ ಲಸಿಕೆಯ ಕೊರತೆ ದೊಡ್ಡ ಸಮಸ್ಯೆಯಾಗಿದೆ. ಸರ್ಕಾರ ಹಾಗೂ ಜನ ಮಾಡಿದ ತಪ್ಪಿನಿಂದಾಗಿ ಇಡೀ ದೇಶ ಇಕ್ಕಟ್ಟಿಗೆ ಸಿಲುಕಿದೆ.
ಇದೀಗ ಕೋವಿಶೀಲ್ಡ್ ಲಸಿಕೆಯನ್ನು ಒಂದು ಹಂತದ ಮಟ್ಟಿಗೆ ಜನರಿಗೆ ನೀಡುವ ಕೆಲಸಗಳು ನಡೆಯುತ್ತಿದೆ. ಹಾಗಿದ್ದರೂ ವಯಸ್ಕರಿಗೆ ಲಸಿಕೆ ನೀಡುವ ಕೆಲಸ ಮಾತ್ರ ಉದ್ಘಾಟನೆಗೆ ಸೀಮಿತವಾಗಿ ಹೋಗಿದೆ. ಮೇ 1 ರಂದು ಯಡಿಯೂರಪ್ಪ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ವಿತರಣೆ ಕಾರ್ಯಕ್ರಮವನ್ನು ಪ್ರಚಾರಕ್ಕೆ ಬಳಸಿಕೊಂಡರೇ ಹೊರತು, ಸರ್ವರಿಗೂ ಲಸಿಕೆ ಮರೀಚಿಕೆಯಾಗಿದೆ.
ಈ ನಡುವೆ ಕೆಲವೇ ದಿನಗಳಲ್ಲಿ ಲಸಿಕೆ ಕೊರತೆ ನಿವಾರಣೆಯಾಗಲಿದೆ. ಲಕ್ಷ ಲಕ್ಷ ಲೆಕ್ಕದಲ್ಲಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳು ಬರಲಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೇಳುತ್ತಿದೆ. ಪರಿಸ್ಥಿತಿ ನೋಡಿದರೆ ಕಾಸಿದ್ದವರಿಗೆ ಮಾತ್ರ ಮುಂದಿನ ದಿನಗಳಲ್ಲಿ ಲಸಿಕೆ ಅನ್ನುವಂತಿದೆ ಪರಿಸ್ಥಿತಿ.
ಬೆಂಗಳೂರು ಕಣ್ವ ಆಸ್ಪತ್ರೆಯಲ್ಲಿ ಈಗಾಗಲೇ ಸಾವಿರ ರೂಪಾಯಿ ಕೊಟ್ರೆ ಲಸಿಕೆ ಸಿಗುತ್ತಿದೆ. ಇನ್ನು ಸಂಸದ ತೇಜಸ್ವಿ ಸೂರ್ಯ ಅವರು 900 ರೂಪಾಯಿ ಲಸಿಕೆ ಇದೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಹಾಗಾದರೆ ಕಾಸಿಲ್ಲದವರಿಗೆ ಲಸಿಕೆ ಯಾವಾಗ ಅನ್ನೋ ಪ್ರಶ್ನೆಗೆ ಇನ್ನೂ ಉತ್ತರವಿಲ್ಲ.
ಈ ನಡುವೆ ದೇಶದ 30 ನಗರಗಳಿಗೆ ಇನ್ನು 30 ದಿನದ ಒಳಗಾಗಿ ಲಸಿಕೆ ಪೂರೈಸುವುದಾಗಿ ಭಾರತ್ ಬಯೋಟೆಕ್ ಸಂಸ್ಥೆ ಹೇಳಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಂಸ್ಥೆಯ ಸಹ ಸಂಸ್ಥಾಪಕಿ ಸುಚಿತ್ರ ಎಲ್ಲಾ ಕೊರೋನಾ ಕಾರಣದಿಂದ ಅನೇಕ ಉದ್ಯೋಗಿಗಳು ರಜೆಯಲ್ಲಿದ್ದರೂ, ಲಸಿಕೆ ಉತ್ಪಾದನೆಗೆ ತಡೆಯಾಗದಂತೆ ಕಾರ್ಯ ನಿರ್ವಹಿಸಲಾಗಿದೆ. ಲಾಕ್ ಡೌನ್ ನಡುವೆಯೂ ಸಿಬ್ಬಂದಿ ದುಡಿಯುತ್ತಿದ್ದು, ದೇಶದಲ್ಲಿ ಲಸಿಕೆ ಕೊರತೆ ಉಂಟಾಗದಂತೆ ಶ್ರಮಿಸುತ್ತಿದ್ದಾರೆ ಅಂದಿದ್ದಾರೆ. ಇನ್ನು ಲಸಿಕೆ ಪೂರೈಕೆ 30 ನಗರಗಳ ಪೈಕಿ ಕರ್ನಾಟಕದ ಮೈಸೂರು, ಬೆಂಗಳೂರು, ಶಿವಮೊಗ್ಗ ಸೇರಿದೆ. ಹಾಗಾದರೆ 30 ದಿನದ ಒಳಗಾಗಿ ಕೋವ್ಯಾಕ್ಸಿನ್ ಲಸಿಕೆ ಪಡೆಯಬಹುದು ಅಂದುಕೊಂಡ್ರೆ ಸ್ವಲ್ಪ ತಡೆಯಿರಿ, 30 ನಗರದ ಖಾಸಗಿ ಆಸ್ಪತ್ರೆಗಳಿಗೆ ಈ ಲಸಿಕೆಗಳು ಪೂರೈಕೆಯಾಗಲಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಲಸಿಕೆ ಯಾವಾಗ ಅನ್ನುವುದು ಇನ್ನೂ ಯಕ್ಷ ಪ್ರಶ್ನೆ.
Discussion about this post