ಜೆಡಿಎಸ್ ಪಕ್ಷ ಒಕ್ಕಲಿಗ ಸಮುದಾಯವನ್ನು ಕೇವಲ ವೋಟ್ ಬ್ಯಾಂಕಾಗಿ ಬಳಸಿಕೊಂಡು ರಾಜಕೀಯ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುತ್ರ ಬಿ. ವೈ ವಿಜಯೇಂದ್ರ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೆ.ಆರ್ ಪೇಟೆಯಲ್ಲಿ ಶುಕ್ರವಾರ ಮಾತನಾಡಿದ ಅವರು, ಒಕ್ಕಲಿಗ ನಾಯಕರೆನಿಸಿರುವ ಕುಮಾರಸ್ವಾಮಿ, ಒಕ್ಕಲಿಗ ಸಮಾಜವನ್ನು ಕೇವಲ ಓಟ್ ಬ್ಯಾಂಕ್ ಆಗಷ್ಟೇ ಬಳಸಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಜಾತ್ಯಾತೀತ ಜನತಾದಳ ನಿರ್ನಾಮವಾಗಿದೆ. ಬೆರಳೆಣಿಕೆಯಷ್ಟು ಶಾಸಕರು ಮಾತ್ರ ಜೆಡಿಎಸ್ನಲ್ಲಿ ಉಳಿದುಕೊಂಡಿದ್ದಾರೆ. ಅವರು ಯಾವಾಗ ಜೆಡಿಎಸ್ ಹಾಗೂ ಕುಮಾರಸ್ವಾಮಿಗೆ ಗುಡ್ ಬೈ ಹೇಳುತ್ತಾರೋ ಗೊತ್ತಿಲ್ಲ. ರಾಜ್ಯ ಮುಖ್ಯಮಂತ್ರಿಯಾಗಿ ಓರ್ವ ಹೆಣ್ಣು ಮಗಳ ಮುಂದೆ ತನ್ನ ಪುತ್ರನನ್ನು ಗೆಲ್ಲಿಸಿಕೊಳ್ಳಲಾಗಲಿಲ್ಲ. ಅಧಿಕಾರದ ಮದದಿಂದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಗೆಲ್ಲುತ್ತೆವೆ ಎಂದು ಬೀಗುತ್ತಿದ್ದರು.
ಇನ್ನು ಯಡಿಯೂರಪ್ಪ ಅವರನ್ನು ಒಕ್ಕಲಿಗ ವಿರೋಧಿ ಎಂದು ಬಿಂಬಿಸಲಾಗುತ್ತದೆ. ಅದೆಲ್ಲ ಶುದ್ಧ ಸುಳ್ಳು. ಒಕ್ಕಲಿಗ ಸಮುದಾಯಕ್ಕೆ ಸೇರಿದ ಸದಾನಂದ ಗೌಡರನ್ನು ರಾಜ್ಯದ ಮುಖ್ಯಮಂತ್ರಿ ಪಟ್ಟದ ಮೇಲೆ ಕೂರಿಸಿದ್ದು, ಅದೇ ಬಿಎಸ್ ಯಡಿಯೂರಪ್ಪ. ಎಲ್ಲ ಸಮುದಾಯದವರೂ ಯಡಿಯೂರಪ್ಪ ಅವರನ್ನು ಒಪ್ಪಿದ್ದಾರೆ ಎಂದು ಬಿಎಸ್ವೈಗೆ ಒಕ್ಕಲಿಗ ವಿರೋಧಿ ಹಣೆಪಟ್ಟಿ ಕಟ್ಟುತ್ತಿರುವವರ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
Discussion about this post