ದೇಶದಲ್ಲಿ ಮೋದಿ ಸುನಾಮಿ ಕಂಡ ಚಲನಚಿತ್ರ ನಿರ್ದೇಶಕ ಅನುರಾಗ್ ಕಶ್ಯಪ್ ಬೆಚ್ಚಿ ಬಿದ್ದಿರುವಂತಿದೆ. ಮೋದಿಯವರನ್ನು ಸದಾ ಟೀಕಿಸುತ್ತಿದ್ದ ಅನುರಾಗ್ ಕಶ್ಯಪ್ ಇದೀಗ ತಮ್ಮ ಹೆಸರು ಮಾಧ್ಯಮಗಳಲ್ಲಿ ಬರುತ್ತಿರಬೇಕು, ಪ್ರಚಾರದಲ್ಲಿರಬೇಕು ಅನ್ನುವ ಕಾರಣಕ್ಕೆ ಮಗಳಿಗೆ ಬಂದಿರುವ ಬೆದರಿಕೆಯನ್ನು ಬಳಸಿಕೊಳ್ಳುತ್ತಿದ್ದಾರೆ.
ಚೌಕಿದಾರ್ ರಾಮ್ಸಂಘಿ ಅನ್ನುವ ವ್ಯಕ್ತಿ ಅನುರಾಗ್ ಕಶ್ಯಪ್ ಅವರ ಮಗಳು ಅಲಿಯಾ ಕಶ್ಯಪ್ಗೆ ಇನ್ಸ್ಟಾಗ್ರಾಂನ ಕಮೆಂಟ್ ಸೆಕ್ಷನ್ನಲ್ಲಿ ಬೆದರಿಕೆ ಹಾಕಿದ್ದು, ಇದಕ್ಕೆ ಪ್ರತಿಯಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕ್ರಮಕ್ಕೆ ಒತ್ತಾಯಿಸುವ ಬದಲು, ಟ್ವೀಟ್ ಮಾಡಿರುವ ಅವರು, ನರೇಂದ್ರ ಮೋದಿಯವರೇ ನೀವು ಜಯ ಗಳಿಸಿದ್ದಕ್ಕೆ ಅಭಿನಂದನೆ. ಆದರೆ ನಿಮ್ಮ ಬೆಂಬಲಿಗರೆಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬ ಟ್ವೀಟ್ ಮಾಡಿ ನನ್ನ ಮಗಳಿಗೆ ಬೆದರಿಕೆವೊಡ್ಡಿದ್ದಾರೆ. ನಾನು ನಿಮ್ಮೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದೇನೆ ಎಂಬ ಕಾರಣಕ್ಕೆ ನನ್ನ ಮಗಳಿಗೆ ಬೆದರಿಕೆ ಹಾಕುತ್ತಿದ್ದಾರೆ.
ನಿಮ್ಮ ಗೆಲುವನ್ನು ಸಂಭ್ರಮಿಸುತ್ತ ನಮಗೆ ಬೆದರಿಕೆ ಹಾಕುವ ಇಂತವರನ್ನು ಹೇಗೆ ಡೀಲ್ ಮಾಡಬೇಕು ಎಂಬುದನ್ನು ತಿಳಿಸಿ ಎಂದು ಹೇಳಿದ್ದಾರೆ. ಅಲ್ಲದೆ, ತಮ್ಮ ಮಗಳಿಗೆ ಬೆದರಿಕೆಯೊಡ್ಡಿದ್ದ ಮೆಸೇಜ್ನ ಸ್ಕ್ರೀನ್ಶಾಟ್ನ್ನು ಕೂಡ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅನುರಾಗ್ ಕಶ್ಯಪ್ ಅವರು ತೀರಾ ಕಳಪೆ ಮಟ್ಟದಲ್ಲಿ ಪ್ರಚಾರಕ್ಕೆ ಯತ್ನಿಸುತ್ತಿದ್ದಾರೆ ಅನ್ನುವುದು ಸ್ಪಷ್ಟ. ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಬಂದಿದೆ ಅಂದ ತಕ್ಷಣ, ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆ ಅಥವಾ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕು. ಅವರು ಕ್ರಮ ಕೈಗೊಂಡಿಲ್ಲ ಅನ್ನುವುದಾದರೆ ಮೋದಿಗೊಂದು ದೂರು ಸಲ್ಲಿಸುವುದರಲ್ಲಿ ಅರ್ಥವಿದೆ.
ಅದನ್ನು ಬಿಟ್ಟು ಮೋದಿ ಪ್ರಧಾನಿಯಾದ ಹತಾಶೆಯಲ್ಲಿ ಇರೋ ಬರೋ ಎಲ್ಲಾ ವಿಷಯಕ್ಕೂ ಪ್ರಧಾನಿಯನ್ನು ಎಳೆದು ತರೋದು ಪ್ರಚಾರದ ಹುಚ್ಚು ತಾನೇ.
Discussion about this post