ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ತಿಗಳನ್ನು ದೇಶದ ಪ್ರಮುಖ 100 ನದಿಗಳಲ್ಲಿ ವಿಸರ್ಜನೆ ಮಾಡಲು ನಿರ್ಧರಿಸಲಾಗಿದೆ. ಈ ಸಂಬಂಧ ಚಿತಾಭಸ್ಮವನ್ನು ಇಂದು ಕುಟುಂಬಸ್ಥರು ಸಂಗ್ರಹಿಸಿದ್ದಾರೆ.
ದೆಹಲಿಯ ಸ್ಮೃತಿ ಶಾಲಾಗೆ ಭೇಟಿ ನೀಡಿದ್ದ ವಾಜಪೇಯಿ ಪುತ್ರಿ ನಮಿತಾ ಹಾಗೂ ಮೊಮ್ಮಗಳು ನಿಹಾರಿಕಾ ಧಾರ್ಮಿಕ ವಿಧಿ ವಿಧಾನಗಳ ನಂತರ ಹರಿದ್ವಾರದಲ್ಲಿರುವ ಗಂಗಾ ನದಿಗೆ ಅಸ್ತಿ ವಿಸರ್ಜನೆಗೆ ತೆಗೆದುಕೊಂಡು ಹೋಗಿದ್ದಾರೆ.
ಮುಂದಿನ ದಿನಗಳಲ್ಲಿ ಎಬಿ ವಾಜಪೇಯಿ ಅಸ್ತಿಯನ್ನು ದೇಶದ ನೂರು ಪವಿತ್ರ ನದಿಗಳಲ್ಲಿ ಬಿಡಲು ನಿರ್ಧರಿಸಲಾಗಿದೆ. ಅದರಲ್ಲಿ ಕರ್ನಾಟಕದ ಆರು ನದಿಗಳೂ ಸೇರಿದೆ. ಬೆಂಗಳೂರಿನ ವೃಷಭಾವತಿ, ನೇತ್ರಾವತಿ ಹಾಗೂ ಗುರುಪುರ (ದಕ್ಷಿಣಕನ್ನಡ), ಶಿವಮೊಗ್ಗದ ತುಂಗಾ, ಭದ್ರಾವತಿಯ ಭದ್ರ, ಹೊಸಪೇಟೆಯ ತುಂಗಭದ್ರಾ, ಕಾರವಾರದ ಕಾಳಿ ಹಾಗೂ ಬಾಗಲಕೋಟೆಯ ಘಟಪ್ರಭಾ ನದಿಗಳು ಇದರಲ್ಲಿ ಸೇರಿವೆ.
ಇಂದು ನಡೆದ ಧಾರ್ಮಿಕ ವಿಧಿ ವಿಧಾನ ಕಾರ್ಯಕ್ರಮದಲ್ಲಿ ವಾಜಪೇಯಿ ಕುಟುಂಬಸ್ಥರಿಗೆ ಗೃಹ ಸಚಿವ ರಾಜ್ ನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಪಸ್ಥಿತರಿದ್ದರು.
ಈ ನಡುವೆ ವಾಜಪೇಯಿ ಹೆಸರಿನಲ್ಲಿ ಸರಣಿ ಕಾರ್ಯಕ್ರಮಗಳನ್ನು ನಡೆಸಲು ಬಿಜೆಪಿ ನಿರ್ಧರಿಸಿದ್ದು, ಮುಂದಿನ ವಾರದಿಂದ ಈ ಕಾರ್ಯಕ್ರಮ ಸರಣಿ ಪ್ರಾರಂಭವಾಗಲಿದೆ. ಈಗಾಗಲೇ ಕಾರ್ಯಕ್ರಮದ ರೂಪುರೇಷೆ ಸಿದ್ದವಾಗಿದ್ದು, ಮಾಹಿತಿ ನಿರೀಕ್ಷಿಸಲಾಗುತ್ತಿದೆ.
Discussion about this post