ಬೆಂಗಳೂರು : ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ದಿನವವನ್ನು ”ದಾಸೋಹ ದಿನ” ವನ್ನಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಆದೇಶವೊಂದು ಹೊರ ಬಿದ್ದಿದ್ದು, ಜನವರಿ 21ನ್ನು ದಾಸೋಹ ದಿನವನ್ನಾಗಿ ಆಚರಿಸಲು ರೂಪುರೇಷೆ ಸಿದ್ದಗೊಳಿಸುವಂತೆ ಸೂಚಿಸಲಾಗಿದೆ.
ಪರಮಪೂಜ್ಯ ಶ್ರೀ ಡಾ ಶಿವಕುಮಾರ ಮಹಾಸ್ವಾಮಿಗಳು ಕಾಯಕವೇ ಕೈಲಾಸ ಎಂದ ತತ್ವದಡಿ 1930ರಲ್ಲಿ ಸಿದ್ದಗಂಗಾ ಮಠದ ಜವಾಬ್ದಾರಿಯನ್ನು ಹೊತ್ತು ಅಂದಿನಿಂದಲೂ ನಿರಂತರವಾಗಿ ಮಠಕ್ಕೆ ಬರುವ ಲಕ್ಷಾಂತರ ಬಡ ಮಕ್ಕಳಿಗೆ ಜಾತಿ ಧರ್ಮ ಬೇಧವಿಲ್ಲದೆ ವಿದ್ಯೆ,ವಸತಿ, ದಾಸೋಹ, ನೀಡಿ ತ್ರಿವಿಧ ದಾಸೋಹಿಗಳಾಗಿದ್ದರು.
1960ರಲ್ಲಿ ಭಾರತ ದೇಶ ಆಹಾರದ ಕೊರತೆಯನ್ನು ಎದುರಿಸುತ್ತಿರುವಾಗ ಶ್ರೀಗಳು ತಾವೇ ಜೋಳಿಗೆ ಹಿಡಿದು ಜನರಿಂದ ದಾನ ಪಡೆದು ಹಸಿವು ನೀಗಿಸಿದವರು. ಶ್ರೀಗಳ ಪರಂಪರೆಯಂತೆ ಇಂದಿಗೂ ಸಾವಿರಾರು ಬಡ ಮಕ್ಕಳಿಗೆ ಹಾಗೂ ಭಕ್ತರಿಗೆ ನಿತ್ಯ ದಾಸೋಹ ಮಾಡಲಾಗುತ್ತಿದೆ. ಶ್ರೀಗಳು 9 ದಶಕಗಳಿಗೂ ಮೀರಿ ನಿತ್ಯ ದಾಸೋಹಗೈದು ನಾಡಿನ ಇತರ ಎಲ್ಲರಿಗೂ ಮಾದರಿಯಾಗಿದ್ದು, ದಾಸೋಹ ಶ್ರೇಷ್ಟರಾಗಿದ್ದವರು.
ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಲಿಂಗೈಕ್ಯರಾದ ಶಿವಕುಮಾರ ಸ್ವಾಮೀಜಿ ಅವರ ಅಪೂರ್ವ ಸೇವೆಯನ್ನು ಸ್ಮರಿಸುವ ಸಲುವಾಗಿ ಜನವರಿ 21 ರಂದು ಸರ್ಕಾರದ ವತಿಯಿಂದ ದಾಸೋಹ ದಿನವೆಂದು ಆಚರಿಸಲು ನಿರ್ಧರಿಸಲಾಗಿದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
ಇದೇ ಸುತ್ತೋಲೆಯಲ್ಲಿ 2007ರಲ್ಲಿ ಕರ್ನಾಟಕ ಸರ್ಕಾರವು ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿರುತ್ತದೆ ಎಂದು ಹೇಳಿಕೊಂಡಿದೆ. ಅದು ಯಾವಾಗ ಪದ್ಮಭೂಷಣ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರ ಕೊಡಲು ಶುರು ಮಾಡಿತು ಅನ್ನುವುದನ್ನು ಸುತ್ತೋಲೆಗೆ ಸಹಿ ಹಾಕಿದ ಅಧಿಕಾರಿಯೇ ಹೇಳಬೇಕು.
ಇದು ಕಣ್ಣು ತಪ್ಪಿ ಆಗಿರುವ ಯಡವಟ್ಟು ಎಂದು ನಾಳೆ ಅಧಿಕಾರಿಗಳು ತಿಪ್ಪೆ ಸಾರುತ್ತಾರೆ. ಆದರೆ ಸರ್ಕಾರದ ಸುತ್ತೋಲೆಗಳು ತಪ್ಪಾಗಿ ಇರಲೇಬಾರದು. ಅದು ಕೂಡಾ ಪದ್ಮ ಸರಣಿಯ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಕೊಡುತ್ತದೆ ಅನ್ನುವುದು ಕನಿಷ್ಟ ಜ್ಞಾನವಿರಬೇಕು ತಾನೇ..
Discussion about this post