ಬೆಂಗಳೂರು : ಮಾಧ್ಯಮಗಳಿಗೆ ಮೂಗುದಾರ ಹಾಕುವ ವಿಚಾರದಲ್ಲಿ ಸಾಕಷ್ಟು ಸುದ್ದಿ ಮಾಡಿದ್ದು ಬಿಜೆಪಿ ಸರ್ಕಾರ. ಅದು ಮೇಲೂ ಅಷ್ಟೇ, ಕೆಳಗೂ ಅಷ್ಟೇ. ಮೊನ್ನೆ ಮೊನ್ನೆ ಮಾಧ್ಯಮಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಬಗ್ಗೆ ಮಾತನಾಡಿದ್ದ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ವಿವಾದ ಸೃಷ್ಟಿಸಿದ್ದರು.
ಇನ್ನೂ ಕರ್ನಾಟಕದಲ್ಲೂ ವಿಧಾನಸೌಧದಿಂದ ಮಾಧ್ಯಮದವರನ್ನು ಹೊರಗಟ್ಟುವ ಪ್ರಯತ್ನ ಪ್ರತೀ ಸಲ ಸದ್ದಿಲದೆ ನಡೆಯುತ್ತಿದೆ. ಈಗಾಗಲೇ ಕಲಾಪಗಳಿಂದ ಟಿವಿ ಚಾನೆಲ್ ಕ್ಯಾಮಾರಗಳನ್ನು ಹೊರಗಿಡಲಾಗಿದೆ. ಈ ನಡುವೆ ವಿಧಾನಸೌಧದ ಕಾರಿಡಾರ್ ಗಳಲ್ಲಿ ವಿಡಿಯೋ ಚಿತ್ರೀಕರಣ ಹಾಗೂ ಛಾಯಾಗ್ರಹಣವನ್ನು ಮಾಡುವುದನ್ನು ನಿಷೇಧಿಸಿ ಸರ್ಕಾರ ಸುತ್ತೂಲೆ ಹೊರಡಿಸಿತ್ತು.
ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಕಲಾಪಗಳು ಹಾಗೂ ಇನ್ನಿತರೇ ಸಂದರ್ಭಗಳಲ್ಲಿ ಕೆಲವು ಪತ್ರಿಕಾ ಹಾಗೂ ವಿದ್ಯುನ್ಮಾನ ಮಾಧ್ಯಮದವರು ವಿಧಾನಸೌಧ ಕಟ್ಟಡದ ಕಾರಿಡಾರ್ ಗಳಲ್ಲಿ ವಿಡಿಯೋ ಚಿತ್ರೀಕರಣ ಛಾಯಾಗ್ರಹಣ ಮಾಡುತ್ತಿದ್ದು, ಹಲವಾರು ಬಾರಿ ಗಣ್ಯ ವ್ಯಕ್ತಿಗಳ ಸುಗಮ ಚಲನವಲನಕ್ಕೆ ಅಡ್ಡಿಯುಂಟಾಗಿರುವುದು ಗಮನಕ್ಕೆ ಬಂದಿದ್ದು, ಸುಗಮ ಚಲನೆ ಹಾಗೂ ಭದ್ರತೆಯ ಹಿತದೃಷ್ಟಿಯಿಂದ ಮುಖ್ಯಮಂತ್ರಿಗಳು ಹಾಗೂ ಸಚಿವರಿಂದ ಹೇಳಿಕೆಯನ್ನು ಪಡೆಯುವ ಸಲುವಾಗಿ ವಿಧಾನಸೌಧದ ಕೆಂಗಲ್ ದ್ವಾರದ ಬಳಿ ಅವಕಾಶ ಕಲ್ಪಿಸಲಾಗಿದೆ ಎಂದು ಆದೇಶದಲ್ಲಿ ಸೂಚಿಸಲಾಗಿತ್ತು
ಗಮನಾರ್ಹ ಅಂಶ ಅಂದ್ರೆ ನಿರ್ದಿಷ್ಟಪಡಿಸಿದ ಜಾಗವನ್ನು ಹೊರತುಪಡಿಸಿ ಕಾರಿಡಾರ್ ಗಳಲ್ಲಿ ವಿಡಿಯೋ ಚಿತ್ರೀಕರಣ ಛಾಯಾಗ್ರಹಣವನ್ನು ನಿಷೇಧಿಸುವುದು ಸೂಕ್ತವೆಂಬ ಪ್ರಸ್ತಾವನೆಯು ಮುಖ್ಯಮಂತ್ರಿಯವರಿಂದ ಅನುಮೋದಿಸಲ್ಪಟ್ಟಿರುತ್ತದೆ ಎಂದು ಬೇರೆ ಹೇಳಲಾಗಿತ್ತು.
ಇದು ಹಿರಿಯ ಪತ್ರಕರ್ತರ ಆಕ್ರೋಶಕ್ಕೂ ಕಾರಣವಾಗಿತ್ತು. ಹೀಗಾಗಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಪತ್ರಕರ್ತರು, ಆದೇಶವನ್ನು ತಕ್ಷಣ ವಾಪಾಸ್ ಪಡೆಯುವಂತೆ ಆಗ್ರಹಿಸಿದರು. ಈ ವೇಳೆ ಕೆಲ ಅಧಿಕಾರಿಗಳು ಆದೇಶದ ಸಮರ್ಥನೆಗೂ ಮುಂದಾದರು. ಆಗ ಪತ್ರಕರ್ತರು ಖಾರವಾಗಿಯೇ ಉತ್ತರಿಸಿದ ಬಳಿಕ ತಪ್ಪು ಸರಿ ಮಾಡಿಕೊಳ್ಳುವುದಾಗಿ ಹೇಳಿದ ಸಿಎಂ ಯಡಿಯೂರಪ್ಪ ಮುಖ್ಯಕಾರ್ಯದರ್ಶಿಯವರನ್ನು ಕರೆದು ಆದೇಶ ಹಿಂಪಡೆಯುವಂತೆ ಸೂಚಿಸಿದ್ದಾರೆ.
Discussion about this post