ಧರ್ಮಸ್ಥಳ : ಕೊರೋನಾ ಸೋಂಕು ನಿಯಂತ್ರಣ ಸಲುವಾಗಿ ಲಾಕ್ ಡೌನ್ ಜಾರಿಯಲ್ಲಿದ್ದ ಸಂದರ್ಭದಲ್ಲಿ ಭಕ್ತರಿಗಾಗಿ ದೇವಸ್ಥಾನ ತೆರೆದ ಶ್ರೀ ಕ್ಷೇತ್ರ ಧರ್ಮಸ್ಥಳ ವಿವಾದಕ್ಕೆ ಸಿಲುಕಿದೆ. ರಾಜ್ಯದ ಎಲ್ಲಾ ಕಡೆಗಳಲ್ಲಿ ಧಾರ್ಮಿಕ ಕ್ಷೇತ್ರಗಳು ಬಾಗಿಲು ಮುಚ್ಚಿದ್ದರೂ ಇಲ್ಲಿ ಮಾತ್ರ ಭಕ್ತರಿಗೆ ಪ್ರವೇಶ ಸಿಕ್ಕಿದ್ದು ಹೇಗೆ ಅನ್ನುವ ಪ್ರಶ್ನೆ ಎದ್ದಿದೆ. ಜೊತೆಗೆ ಬಂದ ಭಕ್ತರು ಸೇವಾ ಚೀಟಿಗಳನ್ನೂ ಮಾಡಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಸಾಲು ಸಾಲು ಸೀಲ್ ಡೌನ್ ಗ್ರಾಮಗಳ ಸಮೀಪದಲ್ಲೇ ಶ್ರೀಕ್ಷೇತ್ರವಿದ್ದು, ಪರ ಊರಿನ ಭಕ್ತರ ಭೇಟಿಯಿಂದ ಸೋಂಕು ಹರಡುವ ಭೀತಿ ಇದ್ದರೂ, ಪೊಲೀಸ್ ಇಲಾಖೆ, ಗ್ರಾಮ ಪಂಚಾಯತ್, ತಾಲೂಕು ಆಡಳಿತ, ಸ್ಥಳೀಯ ಶಾಸಕರು ಮೌನಕ್ಕೆ ಶರಣಾಗಿರುವುದು ಅಚ್ಚರಿಗೆ ಕಾರಣವಾಗಿದೆ.
ಈ ನಡುವೆ ಈ ವಿಚಾರ ಯಾವಾಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಯ್ತೋ, ಎಚ್ಚೆತ್ತುಕೊಂಡ ಜಿಲ್ಲಾಡಳಿತ ದೇವಸ್ಥಾನ ಆಡಳಿತ ಮಂಡಳಿಗೆ ನೋಟೀಸ್ ಜಾರಿ ಮಾಡಿದೆ. ಜೊತೆಗೆ ದೇವಸ್ಥಾನವನ್ನು ಭಕ್ತರಿಗೆ ಮುಂದಿನ ಎರಡು ವಾರಗಳ ಕಾಲ ಮುಚ್ಚುವಂತೆ ಹೇಳಿದೆ.
ಇನ್ನು ತನ್ನ ಎಡವಟ್ಟುಗಳು ಮುಚ್ಚಿ ಹಾಕುವ ಸಲುವಾಗಿ ಶನಿವಾರ ಸಭೆ ನಡೆಸಿದ ಗ್ರಾಮ ಕಾರ್ಯಪಡೆ ಕೊರೋನಾ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಘೋಷಿಸಿದೆ. ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ್ ರಾವ್ ನೇತೃತ್ವದಲ್ಲಿ ಸಭೆ ನಡೆದಿದ್ದು, ಬೆಳ್ತಂಗಡಿ ತಹಶೀಲ್ದಾರ್ ಮಹೇಶ್ ಉಪಸ್ಥಿತರಿದ್ದರು.
ಈ ವೇಳೆ ಬೇರೆ ಜಿಲ್ಲೆಯಿಂದ ಆಗಮಿಸುವ ಯಾತ್ರಾರ್ಥಿಗಳನ್ನು ತಡೆಯುವ ನಿಟ್ಟಿನಲ್ಲಿ ಚಾರ್ಮಾಡಿ, ಕೊಕ್ಕಡ, ಬೆಳ್ತಂಗಡಿ ಚೆಕ್ ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಸೂಚಿಸಿದ್ದಾರೆ. ಜೊತೆಗೆ ಲಾಕ್ ಡೌನ್ ಮುಗಿಯೋ ತನಕ ಹರಿಕೆ ಮಂಡೆಯನ್ನು ತೆರೆಯದಂತೆ ದೇವಸ್ಥಾನ ಆಡಳಿತ ಮಂಡಳಿಗೆ ಸೂಚನೆ ನೀಡಲಾಗಿದೆ.
ಹಾಗಾದ್ರೆ ಇಷ್ಟು ದಿನ ಹರಕೆ ಮಂಡೆಯನ್ನು ತೆರೆದಿರುವುದಕ್ಕೆ ಯಾರು ಹೊಣೆ ಎಂದು ತಾಲೂಕು ಆಡಳಿತ ಉತ್ತರಿಸಬೇಕಾಗಿದೆ. ಒಟ್ಟಾರೆ ಪರಿಸ್ಥಿತಿಯನ್ನು ಅವಲೋಕಿಸಿದರೆ ಬೆಳ್ತಂಗಡಿ ಶಾಸಕರು ಎಲ್ಲೋ ಎಡವಿದಂತೆ ಕಾಣಿಸುತ್ತಿದೆ.
Discussion about this post