ಉಡುಪಿ : ಜುಲೈ 12ರಂದು ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಉಪ್ಪಿನಕೋಟೆಯಲ್ಲಿರುವ ಅಪಾರ್ಟ್ಮೆಂಟ್ ನಲ್ಲಿ ನಡೆದ ಕೊಲೆ ಪ್ರಕರಣ ಪೊಲೀಸ್ ಇಲಾಖೆಯ ತಲೆ ಕೆಡಿಸಿತ್ತು. ಆಗಷ್ಟೇ ದುಬೈ ನಿಂದ ಬಂದವಳು ಅಪಾರ್ಟ್ ಮೆಂಟ್ ನಲ್ಲಿ ಕೊಲೆಯಾಗಿದ್ದಾಳೆ ಅಂದ್ರೆ ಉಡುಪಿಯ ಕಾನೂನು ಸುವ್ಯವಸ್ಥೆ ಎತ್ತ ಸಾಗಿದೆ ಅನ್ನುವ ಪ್ರಶ್ನೆ ಎದ್ದಿತ್ತು.
ಹೀಗಾಗಿ ವಿಶಾಲ ಗಾಣಿಗ ಹತ್ಯೆ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಮೊದಲು ವಿಶಾಲ ಅವರನ್ನು ಅಪಾರ್ಟ್ ಮೆಂಟ್ ಗೆ ಬಿಟ್ಟ ಆಟೋ ಚಾಲಕನ್ನು ವಿಚಾರಣೆ ನಡೆಸಿದ್ದರು. ಆದರೆ ಸತತ ವಿಚಾರಣೆ ಬಳಿಕವೂ ಆಟೋ ಚಾಲಕನ ಕೈವಾಡಕ್ಕೆ ಸಾಕ್ಷಿ ಸಿಕ್ಕಿರಲಿಲ್ಲ. ಇನ್ನು ಗಂಡ ಕೊಲೆ ಮಾಡಿರಬಹುದು ಅಂದ್ರೆ ಆತ ದುಬೈ ನಲ್ಲಿ ಕೂತಿದ್ದಾನೆ. ಕೊಲೆಯ ಬಳಿಕ ಚಿನ್ನಾಭರಣ ದೋಚಿದ್ದಾರೆ ಅಂದ್ರೆ ಇದು ದರೋಡೆಕೋರರ ಕೃತ್ಯವಿರಬಹುದೇ. ಹಾಗಾದ್ರೆ ವಿಶಾಲ ಬರೋದು ದರೋಡೆಕೋರರಿಗೆ ಹೇಗೆ ಗೊತ್ತಾಗಿದೆ ಎಂದು ಪೊಲೀಸರು ತಲೆಗೆ ಹುಳ ಬಿಟ್ಟು ಕೂತಿದ್ದರು.
ದರೋಡೆಕೋರಾಗಿದ್ರೆ ಉಸಿರುಗಟ್ಟಿಸಿ ಕೊಲೆ ಮಾಡಿ ಹೋಗಬೇಕಾಗಿತ್ತು ಅದ್ಯಾಕೆ ನೇಣಿಗೆ ಹಾಕಿದ್ದಾರೆ ಅನ್ನುವುದು ಪೊಲೀಸರಿಗೆ ಯಕ್ಷ ಪ್ರಶ್ನೆಯಾಗಿತ್ತು. ಅದ್ಯಾವ ಕಡೆಯಿಂದ ನೋಡಿದರೂ ಇದು ಚಿನ್ನಾಭರಣಕ್ಕಾಗಿ ನಡೆದ ಕೊಲೆ ಅನ್ನುವುದು ಪೊಲೀಸರಿಗೆ ಅನ್ನಿಸಲೇ ಇಲ್ಲ. ಹೀಗಾಗಿ ಪೊಲೀಸರಿಗೆ ವಿಶಾಲ ಗಾಣಿಗ ಪತಿ ಬೀಜೂರು ಚಾರುಕೊಡ್ಲು ನಿವಾಸಿ ರಾಮಕೃಷ್ಣ ಗಾಣಿಗ ಮೇಲೆಯೇ ಅನುಮಾನ ಬಲವಾಗಿತ್ತು. ಹೀಗಾಗಿ ಪತ್ನಿಯ ಕೊಲೆಯ ಬಳಿಕ ಊರಿಗೆ ಬಂದವನ ಮೇಲೆ ಪೊಲೀಸರು ನಿಗಾ ವಹಿಸಿದ್ದರು. ಒಂದಿಷ್ಟು ರಿಲ್ಯಾಕ್ಸ್ ಆಗಿ ಓಡಾಡಲು ಬಿಟ್ಟ ವೇಳೆ ಇದು ರಾಮಕೃಷ್ಣ ಗಾಣಿಗನದ್ದೇ ಮಾಸ್ಟರ್ ಪ್ಲಾನ್ ಎಂದು ಪೊಲೀಸರಿಗೆ ಗೊತ್ತಾಗಿದೆ. ಹೀಗಾಗಿ ಠಾಣೆಗೆ ಕರೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.
ವಿಶಾಲ ಗಾಣಿಗ ಹಾಗೂ ರಾಮಕೃಷ್ಣ ಗಾಣಿಗ ನಡುವೆ ವೈಮನಸ್ಸು ಮೂಡಿತ್ತು. ಇದೇ ಕಾರಣಕ್ಕಾಗಿ ದುಬೈನಲ್ಲಿಯೇ ಕೂತು ಪತ್ನಿಯ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು. ಈ ಸಲುವಾಗಿ ಉತ್ತರ ಪ್ರದೇಶದ ಕಿಲ್ಲರ್ಗಳಿಗೂ ಸುಫಾರಿಯನ್ನು ಕೊಟ್ಟಿದ್ದ ರಾಮಕೃಷ್ಣ, ಪತ್ನಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಊರಿಗೆ ತೆರಳುತ್ತಿದ್ದಂತೆ ಕೊಲೆಗೆ ಸ್ಕೆಚ್ ಹಾಕಿದ್ದಾನೆ.
ಪತ್ನಿ ಹಾಗೂ ಮಗಳನ್ನು ಜುಲೈ 2 ರಂದು ಊರಿಗೆ ಕಳುಹಿಸಿಕೊಟ್ಟಿದ್ದ ರಾಮಕೃಷ್ಣ, ಉಪ್ಪಿನ ಕೋಟೆಯ ಅಪಾರ್ಟ್ಮೆಂಟ್ನಲ್ಲಿ ಉಳಿದುಕೊಳ್ಳುವಂತೆ ಹೇಳಿದ್ದ. ಆದರೆ ವಿಶಾಲ ಗಾಣಿಗ ಮಗಳೊಂದಿಗೆ ದುಬೈನಿಂದ ಬಂದವರು ಗುಜ್ಜಾಡಿಯ ತವರು ಮನೆಗೆ ತೆರಳಿದ್ದರು.
ಜುಲೈ 12 ರಂದು ಮಗಳನ್ನು ತವರು ಮನೆಯಲ್ಲೇ ಬಿಟ್ಟು ತುರ್ತಾಗಿ ಉಪ್ಪಿನಕೋಟೆಯ ಅಪಾರ್ಟ್ಮೆಂಟ್ಗೆ ದೌಡಾಯಿಸಿದ್ದರು. ಹಾಗೇ ಬಂದವರನ್ನು ಫ್ಲ್ಯಾಟ್ಗೆ ನುಗ್ಗಿದ ಸುಪಾರಿ ಕಿಲ್ಲರ್ ಗಳು ಕೊಲೆ ಮಾಡಿ ಪರಾರಿಯಾಗಿದ್ದರು. ಪೊಲೀಸರ ದಿಕ್ಕು ತಪ್ಪಿಸುವ ಸಲುವಾಗಿ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿದ್ದರು.
Discussion about this post