ಮಂಗಳೂರು : ರಾಜ್ಯದಲ್ಲಿ ಅನ್ ಲಾಕ್ 4.O ಜಾರಿಗೊಳಿಸಿದ್ದರೂ, ದೇವಸ್ಥಾನಗಳ ಮೇಲೆ ಬೇರಿರುವ ನಿರ್ಬಂಧವನ್ನು ಇನ್ನೂ ಸಡಿಲಗೊಳಿಸಿಲ್ಲ. ಚಿತ್ರಮಂದಿರಗಳನ್ನು ಷೇ 50ರಷ್ಟು ಭರ್ತಿ ಮಾಡಲು ಅವಕಾಶ, ಬಾರ್ ಗಳಲ್ಲಿ ಕೂತು ಮದ್ಯ ಸೇವಿಸಲು ಅವಕಾಶ ನೀಡಿರುವ ಸರ್ಕಾರ ದೇವಸ್ಥಾನಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಿಲ್ಲ.
ಮಾತ್ರವಲ್ಲದೆ ದೇವಾಲಯಗಳಲ್ಲಿ ಅನ್ನದಾಸೋಹಕ್ಕೆ ಹೇರಿರುವ ನಿರ್ಬಂಧವನ್ನು ಸರ್ಕಾರ ಇನ್ನೂ ಸಡಿಲಿಸಿಲ್ಲ. ಇದು ಆಸ್ತಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ ಕರಾವಳಿಯ ಬಹುತೇಕ ದೇವಸ್ಥಾನಗಳಲ್ಲಿ ಅನ್ನಪ್ರಸಾದಕ್ಕೆ ಸಾಕಷ್ಟು ಮಹತ್ವವಿದೆ.
ಈ ನಡುವೆ ಮಾತನಾಡಿರುವ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ದೇವಸ್ಥಾನಗಳು ಈಗಾಗಲೇ ಭಕ್ತರಿಗೆ ಮುಕ್ತವಾಗಿವೆ. ಈ ಸಂದರ್ಭದಲ್ಲಿ ದೇವಸ್ಥಾನಗಳಲ್ಲಿ ಅನ್ನ ದಾಸೋಹ ಇಲ್ಲದಿರುವುದರಿಂದ ದೂರದಿಂದ ಭಕ್ತರಿಗೆ ತೊಂದರೆಯಾಗುತ್ತಿದೆ. ಜೊತೆ ಸೇವೆಗಳಿಗೂ ಅವಕಾಶ ಇಲ್ಲದಿರುವುದು ಭಕ್ತರ ಬೇಸರಕ್ಕೆ ಕಾರಣವಾಗಿರುವುದು ನನ್ನ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕೆಲವೇ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಮಾಹಿತಿಗಳ ಪ್ರಕಾರ ಮುಂದಿನ ವಾರದಿಂದ ದೇವಸ್ಥಾನಗಳಲ್ಲಿ ಸೇವೆ ಹಾಗೂ ಅನ್ನ ದಾಸೋಹ ಕಾರ್ಯ ಪ್ರಾರಂಭವಾಗಲಿದೆ ಎನ್ನಲಾಗಿದೆ.
Discussion about this post