ಪುತ್ತೂರು : ಕೊರೋನಾ ಕಾರಣದಿಂದ ಶಾಲೆಗಳಿಗೆ ಬೀಗ ಬಿದ್ದು ವರ್ಷ ಕಳೆದಿದೆ. ಅನಿವಾರ್ಯ ಕಾರಣದಿಂದ ಮಕ್ಕಳು ಮೊಬೈಲ್ ನಲ್ಲೇ ಪಾಠ ಕಲಿಯುವಂತಾಗಿದೆ. ನಗರ ಪ್ರದೇಶಗಳಲ್ಲಿ ನೆಟ್ ಸೌಲಭ್ಯ ಉತ್ತಮವಾಗಿದೆ. ಹೀಗಾಗಿ ಅಲ್ಲಿ ಸಮಸ್ಯೆಯಾಗಿಲ್ಲ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ನೆಟ್ ವರ್ಕ್ ಸಮಸ್ಯೆಯಿಂದ ಮಕ್ಕಳ ಪರದಾಟ ಹೇಳತೀರದಾಗಿದೆ.
ಹೀಗಾಗಿ ಇದೀಗ ಶಾಲೆಗಳನ್ನು ತೆರೆಯಿರಿ ಅನ್ನುವ ಒತ್ತಾಯ ಗ್ರಾಮೀಣ ಪ್ರದೇಶದಲ್ಲಿ ಕೇಳಿ ಬರಲಾರಂಭಿಸಿದೆ. ಒಂದು ಕಡೆ ಮಕ್ಕಳು ಮೊಬೈಲ್ ನೋಡಿ ಆರೋಗ್ಯ ಹಾಳುಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಅವರ ಕಲಿಕಾ ಗುಣಮಟ್ಟವೂ ಕುಸಿದಿದೆ ಅನ್ನುವುದು ಪೋಷಕರ ನೋವು.
ಈ ನಡುವೆ ಶಾಲೆ ಪ್ರಾರಂಭಿಸಿ, ಇಲ್ಲವೇ ನೆಟ್ ವರ್ಕ್ ಒದಗಿಸಿ ಎಂದು ಆಗ್ರಹಿಸಿ, SDMC ಸದಸ್ಯರು ಹಾಗೂ ಪೋಷಕರು ಮೌನ ಪ್ರತಿಭಟನೆ ನಡೆಸಿದ ಘಟನೆ ಪುಣಚ ಅಜೇರು ಶಾಲೆಯಲ್ಲಿ ನಡೆದಿದೆ .
ಈಗಾಗಲೇ ಲಾಕ್ ಡೌನ್ ತೆರವುಗೊಳಿಸಲಾಗಿದ್ದು, ಒಂದು ಕಡೆ ದೇವಸ್ಥಾನ, ಬಾರ್, ಮಾರುಕಟ್ಟೆ ತೆರೆಯಲ್ಪಟ್ಟಿದೆ. ಜೊತೆಗೆ ಪದವಿ ಕಾಲೇಜುಗಳನ್ನು ತೆರೆಯಲು ಅನುಮತಿಯನ್ನೂ ನೀಡಲಾಗಿದೆ. ಆದರೆ ಶಾಲೆಗಳನ್ನು ತೆರೆಯಲು ಅನುಮತಿ ನೀಡಿಲ್ಲ. ಮಕ್ಕಳು ಮನೆಯಲ್ಲೇ ಕೂತು ಅನ್ ಲೈನ್ ಮೂಲಕ ಪಾಠ ಕೇಳಬೇಕು ಎಂದು ಸರ್ಕಾರ ಹೇಳುತ್ತಿದೆ. ಆದರೆ ನಮ್ಮ ಪ್ರದೇಶದಲ್ಲಿ ನೆಟ್ ವರ್ಕ್ ಅನ್ನುವುದೇ ಇಲ್ಲ. ಹಾಗಿದ್ದ ಮೇಲೆ ವಿದ್ಯಾರ್ಥಿಗಳು ಪಾಠ ಕೇಳುವುದಾದರೂ ಹೇಗೆ. ಇದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಲಿದೆ ಹೀಗಾಗಿ ಶಾಲೆಯಲು ಸಾಧ್ಯವಿಲ್ಲದಿದ್ರೆ ನೆಟ್ ವರ್ಕ್ ಸಮಸ್ಯೆಯನ್ನು ಸರಿ ಪಡಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ಪೋಷಕರು ಆಗ್ರಹಿಸಿದ್ದಾರೆ.
ಇದಾದ ಬಳಿಕ ಈ ಸಂಬಂಧ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು SDMC ಸದಸ್ಯರು ಹಾಗೂ ಪೋಷಕರು ನಿರ್ಧರಿಸಿದ್ದಾರೆ.
Discussion about this post