ಬೆಂಗಳೂರು : ನಟ ಪುನೀತ್ ರಾಜ್ ಕುಮಾರ್ ಇನ್ನಿಲ್ಲ ಅನ್ನುವ ನೋವು ಕರುನಾಡನ್ನು ಕಾಡುತ್ತಿದೆ. ಒಳ್ಳೆಯ ಮನಸ್ಸಿನ ವ್ಯಕ್ತಿ ಇಷ್ಟು ಬೇಗ ದೇವರಿಗೆ ಇಷ್ಚವಾದನೇ, ವಿಧಿ ಇಷ್ಟೊಂದು ಕ್ರೂರವಾಗಿ ವರ್ತಿಸಿದ್ಯಾಕೆ ಅನ್ನುವ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ.
ಇನ್ನು ಪುನೀತ್ ಅವರ ಅಂತಿಮ ದರ್ಶನಕ್ಕೆ 20 ರಿಂದ 25 ಲಕ್ಷ ಜನ ಬೆಂಗಳೂರಿಗೆ ಬಂದಿದ್ದಾರೆ ಅಂದ್ರೆ ಅಪ್ಪು ಅದೆಷ್ಟು ಮಂದಿಗೆ ಅಪ್ಯಾಯಮಾನವಾಗಿದ್ದರು ಊಹಿಸಿ. ಈ ನಡುವೆ ಪುನೀತ್ ರಾಜ್ ಕುಮಾರ್ ಅವರ 11ನೇ ದಿನ ಕಾರ್ಯಗಳನ್ನು ಮುಗಿಸಿರುವ ದೊಡ್ಮನೆ ಜೀವನವನ್ನು ಸಹಜ ಸ್ಥಿತಿಗೆ ತರಲು ಪ್ರಯತ್ನಿಸುತ್ತಿದೆ. ಆದರೆ ಅದು ಅಷ್ಟು ಸುಲಭದ ಮಾತಲ್ಲ.
![puneeth rajkumar sakrebailu](https://torrentspree.com/wp-content/uploads/2021/11/puneeth-rajkumar-sakrebailu.jpg)
ಈ ನಡುವೆ ಅಪ್ಪು ನೆನಪುಗಳನ್ನು ಶಾಶ್ವತವಾಗಿಸುವ ಕಾರ್ಯವನ್ನು ಅಭಿಮಾನಿಗಳು ಕೈಗೆತ್ತಿಕೊಂಡಿದ್ದು, ಅಪ್ಪು ಹೆಸರಿನಲ್ಲಿ ಅನೇಕ ಕಾರ್ಯಗಳು ನಡೆಯುತ್ತಿದೆ. ಈ ನಡುವೆ ಅರಣ್ಯ ಇಲಾಖೆ ಅಪ್ಪುವಿಗೆ ವಿಶಿಷ್ಟವಾಗಿ ಗೌರವ ಸಲ್ಲಿಸಿದೆ.
ಸಕ್ರೆಬೈಲು ಆನೆ ಬಿಡಾರದಲ್ಲಿರುವ ಮರಿಯಾನೆಗೆ ಪುನೀತ್ ಎಂದು ಹೆಸರಿಟ್ಟಿರುವ ಅರಣ್ಯ ಇಲಾಖೆ ವಿಶೇಷ ಗೌರವ ಸಲ್ಲಿಸಿದೆ. ಬುಧವಾರ ಸಕ್ರೆಬೈ ಲು ಆನೆ ಬಿಡಾರದಲ್ಲಿ ತಾಯಿ ಆನೆಯಿಂದ ಮರಿಯಾನೆಯನ್ನು ಬೇರ್ಪಡಿಸುವ ಕಾರ್ಯಕ್ರಮ ನಡೆದಿದ್ದು, ನೇತ್ರಾ ಹೆಸರಿನ ತಾಯಿಯಾನೆಯ ಗಂಡು ಮರಿಯಾನೆಗೆ ಪುನೀತ್ ಎಂದು ನಾಮಕರಣ ಮಾಡಲಾಗಿದೆ.
ಅದರಲ್ಲೂ ವಿಧಿಯಾಟ ಅಂದ್ರೆ ಎರಡು ತಿಂಗಳ ಹಿಂದೆಯಷ್ಟೇ ಸಕ್ರೆಬೈಲು ಆನೆ ಬಿಡಾರಕ್ಕೆ ಆಗಮಿಸಿದ ನಟ ಪುನೀತ್ ಇದೇ ಮರಿಯಾನೆಯನ್ನು ಮುದ್ದಿಸಿದ್ದರು.
Discussion about this post