ಮಾಜಿ ಪ್ರಧಾನಿ ದೇವೇಗೌಡರ ಸೋಲು ಕರ್ನಾಟಕದ ಸೋಲು ಎಂದು ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ದೇವೇಗೌಡ ಮತ್ತು ನಿಖಿಲ್ ಕುಮಾರಸ್ವಾಮಿ ಸೋಲಿನ ಬಗ್ಗೆ ಮಾತನಾಡಿರುವ ಅವರು ದೇವೇಗೌಡರ ಸೋಲು ಸ್ವಾಭಿಮಾನದ ಸೋಲಿನಿಂದ ನಮಗೆಲ್ಲಾ ಬಹಳ ನೋವು ತಂದಿದೆ.
ದೇವೇಗೌಡರು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ರಾಜಕಾರಣದ ಸ್ಥಾನಮಾನ ಸೃಷ್ಟಿಸಿದ ಮಹಾನುಭಾವ. ಸ್ತ್ರೀ ಸಬಲೀಕರಣಕ್ಕೆ ಮಹಿಳಾ ಮೀಸಲಾತಿಗೆ ಮುನ್ನುಡಿ ಬರೆದ ಸಮಾಜಮುಖಿ ಚಿಂತಕರಾದ ಅವರನ್ನು ಇಳಿವಯಸ್ಸಿನಲ್ಲಿ ಸೋಲಿಸುವ ಮೂಲಕ ಕೆಲವರು ವಿಕೃತಾನಂದ ಅನುಭವಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಬೇಕೆಂದು ಹಲವರು ಪ್ರಯತ್ನ ಪಟ್ಟು ಅವರುಗಳೇ ಹೆಸರಿಲ್ಲದಂತಾಗಿದ್ದಾರೆ. ದೇವೇಗೌಡರ ಸೋಲು, ನಿಖಿಲ್ ಸೋಲಿನಿಂದ ನಾವುಗಳು ಅಧೀರರಾಗಿಲ್ಲ. ಕಾರ್ಯಕರ್ತರು ಜನಗಳ ನಡುವೆ ಇದ್ದುಕೊಂಡು ನಮ್ಮ ಕುಟುಂಬ ಮತ್ತೆ ಮತ್ತಷ್ಟು ಶಕ್ತಿಶಾಲಿಯಾಗುತ್ತದೆ.
ನಮಗೆ ಹತಾಶೆ, ಭಯ, ಹಿಂಜರಿಕೆ ಇಲ್ಲವೇ ಇಲ್ಲ. ನಮಗೆ ಜನರ ಆಶೀರ್ವಾದದ ಬಲವೂ ಇದೆ, ಆತ್ಮವಿಶ್ವಾಸವೂ ಧೃಢವಾಗಿದೆ. ಆದ್ದರಿಂದ ನಮ್ಮ ಕುಟುಂಬವನ್ನು, ನಮ್ಮ ಪಕ್ಷವನ್ನು, ನಮ್ಮ ಕಾರ್ಯಕರ್ತರನ್ನು, ನಮ್ಮ ಮುಖಂಡರನ್ನು ಸೋಲಿನಿಂದ ಹಿಮ್ಮೆಟ್ಟಿಸಬಹುದೆಂಬ ಭ್ರಮೆಯಲ್ಲಿ ಇರುವವರು, ಭ್ರಮೆಯಲ್ಲಿ ಇರುವಂತಾಗುತ್ತದೆ.
ಟೀಕೆ ಟಿಪ್ಪಣಿಗಳಿಗೆ ನಾವು ಉತ್ತರ ನೀಡುವ ಅವಶ್ಯಕತೆ ಇಲ್ಲ – ಜನಸೇವೆಯೇ ಜನಾರ್ದನ ಸೇವೆ ಎಂದು ತಿಳಿದಿರುವ ನಾವು ಮತ್ತೆ ರಾಜ್ಯದಲ್ಲಿ ಪ್ರಖರಿಸುತ್ತೇವೆ ಎಂದು ತಮ್ಮ ಕುಟುಂಬ ಹಾಗೂ ಪಕ್ಷದ ಬಗ್ಗೆ ಧೈರ್ಯದ ಮಾತುಗಳನ್ನು ಅನಿತಾ ಕುಮಾರಸ್ವಾಮಿ ಮಾತನಾಡಿದ್ದಾರೆ
Discussion about this post