ಬೆಂಗಳೂರು : ಯಾರನ್ನ ಬೇಕಾದ್ರೂ ಸರಿ ಮಾಡಬಹುದು. ಆದರೆ ಈ ಪೊಲೀಸ್ ಇಲಾಖೆಯನ್ನು ಸರಿ ಮಾಡಲು ಸಾಧ್ಯವೇ ಇಲ್ಲ. 10 ರೂಪಾಯಿ 20 ರೂಪಾಯಿಗೂ ಕೈಯೊಡ್ಡುವ ಖಾಕಿ ಮಂದಿಯ ಮಾನ ನೂರಾರು ಸಲ ಹರಾಜುಗೊಂಡಿದೆ. ಹಾಗಿದ್ದ ಮೇಲೂ ಅವರು ಮಾತ್ರ ಬುದ್ದಿ ಕಲಿಯೋದಿಲ್ಲ, ಹಫ್ತಾ ವಸೂಲಿ ಮಾಡುವ ಬುದ್ದಿ ಬಿಡೋದಿಲ್ಲ. ಇದಕ್ಕೆ ನೂರಾರು ಉದಾಹರಣೆಗಳು ನಮ್ಮ ಮುಂದಿದೆ.
ಈ ನಡುವೆ ರಸ್ತೆ ಬದಿ ಅಂಗಡಿಯಿಂದ 30 ರೂಪಾಯಿ ಹಫ್ತಾ ವಸೂಲಿ ಮಾಡಿದ ಮಾರತ್ತಹಳ್ಳಿ ಠಾಣೆಯ ಹೊಯ್ಸಳ ವಾಹನದ ಸಿಬ್ಬಂದಿಯ ಮಾನ ಮರ್ಯಾದೆ ಸಾಮಾಜಿಕ ಜಾಲತಾಣಗಳಲ್ಲಿ ಹರಾಜಾಗುತ್ತಿದೆ. ಗುರುವಾರ ಹೊಯ್ಸಳ ( KA-02 G-1865 ) ವಾಹನದಲ್ಲಿ ಗಸ್ತಿನಲ್ಲಿದ್ದ ಹೆಡ್ ಕಾನ್ಸ್ಟೇಬಲ್ ಗುರುಮೂರ್ತಿ ಮತ್ತು ಕಾನ್ಸ್ಟೇಬಲ್ ಸುರೇಂದ್ರ ಮಾರತ್ತಹಳ್ಳಿ ಮೇಲು ಸೇತುವೆ ಬಳಿ ರಸ್ತೆ ಬದಿ ಅಂಗಡಿಯ ಮಹಿಳೆಯಿಂದ 30 ರೂಪಾಯಿ ಪಡೆದಿದ್ದಾರೆ.
ಇದು ಮಾರತ್ತಹಳ್ಳಿಯ ಕಥೆ. ಬಹುತೇಕ ಹೊಯ್ಸಳದ ಕಥೆಯೂ ಹೀಗೆ ಆಗಿದೆ. ಸಾರ್ವಜನಿಕರು ಹೊಯ್ಸಳ ವಾಹನದ ಮೇಲೆ ಹೀಗೆ ಮೊಬೈಲ್ ಕ್ಯಾಮಾರದ ಕಣ್ಣಿಟ್ಟರೆ ಪೊಲೀಸ್ ಠಾಣೆಗಳಲ್ಲಿ ಕೆಲವೇ ಕೆಲವು ಪೊಲೀಸರು ಮಾತ್ರ ಇರುತ್ತಾರೆ. ಉಳಿದವರೆಲ್ಲಾ ಅಮಾನತು ಆಗುವುದರಲ್ಲಿ ಅನುಮಾನವೇ ಇಲ್ಲ. ಹೋಗ್ಲಿ ಈ ಲಂಚಕೋರ ಪೊಲೀಸ್ ವಿಡಿಯೋ ವನ್ನು ಅವರ ಹೆಂಡತಿ ಮಕ್ಕಳು ನೋಡಿದರೆ ಅವರು ಸಮಾಜದಲ್ಲಿ ಅನುಭವಿಸಬೇಕಾದ ಸಂಕಷ್ಟಗಳ ಬಗ್ಗೆ ಈ ಭ್ರಷ್ಟರಿಗೆ ಅರಿವೆಯೇ ಇರುವುದಿಲ್ವ..?
ಇನ್ನು ಈ ಬಗ್ಗೆ KRS ಪಕ್ಷದ ಮುಖಂಡ ರವಿಕೃಷ್ಣಾ ರೆಡ್ಡಿ ಸಾಮಾಜಿಕ ಜಾಲತಾಣದಲ್ಲಿ, ಪೋಲೀಸ್ ವಾಹನದಲ್ಲಿ ಹೋಗುವ ಭ್ರಷ್ಟ, ಲಂಚಕೋರ ಪೊಲೀಸರು ನಾಚಿಕೆ ಮಾನ ಮರ್ಯಾದೆ ಇಲ್ಲದೆ ಅಲ್ಲಿಯ ಅಂಗಡಿಯೊಂದರ ಮಾಲೀಕಳಿಂದ ಸಾರ್ವಜನಿಕವಾಗಿ ದಿನಕ್ಕೆ 20 ರೂಪಾಯಿ ಮಾಮೂಲು/ಹಫ್ತಾ ವಸೂಲಿ ಮಾಡುತ್ತಿದ್ದಾರೆ. ಎಲ್ಲಾ ಅಂಗಡಿಗಳಿಂದ ಮತ್ತು ಬೀದಿಬದಿ ವ್ಯಾಪಾರಿಗಳಿಂದ ಹೀಗೆ ಪ್ರತಿದಿನವೂ ವಸೂಲಿ ಮಾಡುತ್ತಿದ್ದಾರೆ.
ಭಿಕ್ಷಾಟನೆ ಕಾನೂನುಬಾಹಿರ. ಲಂಚ ತೆಗೆದುಕೊಳ್ಳುವುದು ಅಪರಾಧ. ಪೊಲೀಸ್ ಸಮವಸ್ತ್ರದಲ್ಲಿ ಇರುವ ಈ ಲಂಚಕೋರ ಭಿಕ್ಷುಕರನ್ನು ಬೆಂಗಳೂರಿನ ಪೊಲೀಸ್ ಆಯುಕ್ತರು ಈ ಕೂಡಲೇ ವಜಾ ಮಾಡಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
Discussion about this post