ಮಂಗಳೂರು : ಕೊರೋನಾ ಲಸಿಕೆ ವಿತರಣೆಗಿದ್ದ ಅನೇಕ ಅಡ್ಡಿ ಆತಂಕಗಳು ಇದೀಗ ನಿವಾರಣೆಯಾಗಿದೆ. ಲಸಿಕೆಯ ಕೊರತೆಯೊಂದು ಬಿಟ್ಟರೆ, ಬಹುತೇಕರಲ್ಲಿ ಇದೀಗ ಲಸಿಕೆ ಪಡೆಯಬೇಕು ಅನ್ನುವ ಇಚ್ಛೆಯಿದೆ. ಹಿಂದೆ ಸುಳ್ಳು ಸುದ್ದಿಗಳಿಗೆ ಬಲಿಯಾದ ಅನೇಕರು ಕೊರೋನಾ ಲಸಿಕೆ ಪಡೆಯಲು ಹಿಂದೇಟು ಹಾಕಿದ್ದರು. ಯಾವಾಗ ಲಸಿಕೆ ಕೊರೋನಾದಿಂದ ರಕ್ಷಿಸಿಕೊಳ್ಳಲು ಇರುವ ಏಕೈಕ ಮಾರ್ಗ ಅನ್ನುವ ಕಾರಣದಿಂದ ಲಸೆ ಪಡೆಯುತ್ತಿದ್ದಾರೆ.
ಈ ನಡುವೆ ದಕ್ಷಿಣ ಕನ್ನಡ ಎರಡು ಗ್ರಾಮಗಳು ಶೇ 100ರಷ್ಟು ಲಸಿಕೆ ಪಡೆದು ಸಾಧನೆಗೈದಿದೆ. ಬಡಗಬನ್ನೂರು ಮತ್ತು ಸಿರಿಬಾಗಿಲು ಗ್ರಾಮಗಳಲ್ಲಿ ಸರ್ವರಿಗೂ ಲಸಿಕೆ ವಿತರಣೆ ಮಾಡಿದ ಹೆಗ್ಗಳಿಕೆಗೆ ಆರೋಗ್ಯ ಇಲಾಖೆ ಪಾತ್ರವಾಗಿದೆ.
ಜಿಲ್ಲೆಯ ಕಡಬ ತಾಲೂಕಿನ ಕುಗ್ರಾಮ ಸಿರಿಬಾಗಿಲು. ಹೆಸರಿಗೆ ಮಾತ್ರ ಇದು ಸಿರಿಬಾಗಿಲು. ಆದರೆ ಇಲ್ಲಿ ಸಿರಿಗೆ ಬರವಿದೆ. ಮೂಲಭೂತ ಸೌಕರ್ಯಗಳು ಈ ಗ್ರಾಮಕ್ಕೆ ಮರೀಚಿಕೆಯಾಗಿದ್ದು, ಸ್ಥಳೀಯ ಶಾಸಕರ ನಿರ್ಲಕ್ಷ್ಯಕ್ಕೆ ಈ ಗ್ರಾಮ ಕೈಗನ್ನಡಿ.
ಪರಿಸ್ಥಿತಿ ಹೀಗಿದ್ದರೂ, ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕೊಂಬಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಿರಿ ಬಾಗಿಲು ಗ್ರಾಮ ಶೇ100ರಷ್ಟು ಲಸಿಕೆ ಪಡೆದ ಮೊದಲ ಗ್ರಾಮ ಅನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. 165 ಕುಟುಂಬಗಳಿರುವ ಗ್ರಾಮದಲ್ಲಿ 872 ಮಂದಿ ವಾಸವಾಗಿದ್ದಾರೆ. ಗ್ರಾಮಕ್ಕೊಂದು ಸರಿಯಾದ ರಸ್ತೆ ಇಲ್ಲದ ಕಾರಣ ಲಸಿಕೆ ವಿತರಿಸಲು ಆರೋಗ್ಯ ಕಾರ್ಯಕರ್ತರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಅರಣ್ಯ ಪ್ರದೇಶದಲ್ಲಿರುವ ಮನೆಗಳಿಗೆ ಕಾಲ್ನಡಿಗೆಯಲ್ಲೇ ಸಾಗಿದ ಕಾರ್ಯಕರ್ತರು ಲಸಿಕೆ ಚುಚ್ಚಿ ಬಂದಿದ್ದಾರೆ.
ಜುಲೈ 19 ರಂದು ಈ ಗ್ರಾಮ ಶೇ100ರ ಲಸಿಕೆ ಗುರಿಯನ್ನು ಮುಟ್ಟಿದ್ದು, 571 ಮಂದಿಗೆ ಲಸಿಕೆ ನೀಡಬೇಕಾಗಿತ್ತು. ಈ ಪೈಕಿ 14 ಮಂದಿಗೆ ಬೇರೆ ರೋಗ ಲಕ್ಷಣಗಳ ಕಾರಣ ಲಸಿಕೆಯನ್ನು ತಿರಸ್ಕರಿಸಲಾಗಿದೆ. ಇಬ್ಬರು ಗರ್ಭಿಣಿಯರು ಲಸಿಕೆ ಸ್ವೀಕರಿಸಿಲು ಸಮ್ಮತಿಸಿಲ್ಲ. ಗ್ರಾಮದ ನಾಲ್ವರು ಮಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಇನ್ನು ಶೇ 100 ಲಸಿಕೆ ಪಡೆದ ಮತ್ತೊಂದು ಗ್ರಾಮ, ಪುತ್ತೂರು ತಾಲೂಕಿನ ಬಡಗಣ್ಣೂರು. ಇಲ್ಲಿ ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿದ್ದು, ಈ ಪೈಕಿ 28 ಮಂದಿಗೆ ಲಸಿಕೆ ನಿರಾಕರಿಸಲಾಗಿದೆ. 10 ಜನ ಜಿಲ್ಲೆಯಿಂದ ಹೊರಗಡೆ ವಾಸಿಸುತ್ತಿದ್ದಾರೆ ಎಂದು ಪುತ್ತೂರು ತಾಲೂಕು ವೈದ್ಯಾಧಿಕಾರಿ ಡಾ. ದೀಪಕ್ ರೈ ಹೇಳಿದ್ದಾರೆ.
Discussion about this post