ಬೆಂಗಳೂರು : ಮಾಜಿ ಸಚಿವ ಜಾರಕಿಹೊಳಿ ಸಿಡಿಯ ಸತ್ಯಾಸತ್ಯತೆ ತಿಳಿಯುವ ಸಲುವಾಗಿ ತನಿಖೆ ಪ್ರಾರಂಭಿಸಿರುವ ಎಸ್ಐಟಿ ಶುಕ್ರವಾರ 5 ಮಂದಿಯನ್ನು ವಿಚಾರಣೆಗೆ ಕರೆದಿದೆ.
ವಿಶೇಷ ತನಿಖಾ ತಂಡದ ಕೈಗೆ ಸಿಕ್ಕಿರುವ ಐವರ ಪೈಕಿ ನಾಲ್ವರು ಪತ್ರಕರ್ತರಾಗಿದ್ದು, ಮತ್ತೊಬ್ಬಳು ಉಪನ್ಯಾಸಕಿ ಎಂದು ಗೊತ್ತಾಗಿದೆ.
ಇನ್ನು ಈ ಪ್ರಕರಣದಲ್ಲಿ ಇನ್ನಿಬ್ಬರು ಪತ್ರಕರ್ತರನ್ನು ವಿಚಾರಣೆಗೆ ಒಳಪಡಿಸಬೇಕಾಗಿದ್ದು, ಅವರು ತಲೆಮರೆಸಿಕೊಂಡಿದ್ದಾರೆ.
ಐವರ ಪೈಕಿ ಉಪನ್ಯಾಸಕಿಯದ್ದು ಹೆಚ್ಚಿನ ಪಾತ್ರವಿಲ್ಲ ಅನ್ನುವುದು ಎಸ್ಐಟಿಗೆ ಮನವರಿಕೆಯಾಗಿದೆ. ಹೀಗಾಗಿ ಆಕೆಯನ್ನು ಸಂಜೆಯೇ ಮನೆಗೆ ಕಳುಹಿಸಲಾಗಿದೆ. ಸಿಡಿಯನ್ನು ಕಲ್ಲಹಳ್ಳಿಗೆ ಹಸ್ತಾಂತರಿಸುವ ಸಂದರ್ಭದಲ್ಲಿ ಆಕೆ ಇದ್ದಳು ಅನ್ನುವ ಕಾರಣಕ್ಕೆ ಉಪನ್ಯಾಸಕಿಯನ್ನು ವಿಚಾರಣೆಗೆ ಕರೆ ತರಲಾಗಿತ್ತು.
ಇನ್ನು ಉಳಿದ ನಾಲ್ವರನ್ನು ಶುಕ್ರವಾರ ರಾತ್ರಿ 9.30ರ ತನಕ ವಿಚಾರಣೆಗೆ ಒಳಪಡಿಸಲಾಗಿದ್ದು, ಬಳಿಕ ಅಗತ್ಯವಿದ್ರೆ ಮತ್ತೆ ಬರಬೇಕು ಎಂದು ಹೇಳಿ ಕಳುಹಿಸಲಾಗಿದೆ.
ನಾಲ್ವರು ಪತ್ರಕರ್ತರ ಪೈಕಿ ಒಬ್ಬ ಖಾಸಗಿ ಸುದ್ದಿ ವಾಹಿನಿಯ ಸ್ಟಿಂಗ್ ಅಪರೇಷನ್ ವರದಿಗಾರ, ಮತ್ತೊಬ್ಬ ಮತ್ತೊಂದು ವಾಹಿನಿಯ ವರದಿಗಾರ, ಮೂರನೇಯವನು ಖಾಸಗಿ ಸುದ್ದಿ ವಾಹಿನಿಯ ವಿಡಿಯೋ ಎಡಿಟರ್ ಹಾಗೂ ನಾಲ್ವನೇಯವ ಸುದ್ದಿವಾಹಿನಿಯ ಡೆಸ್ಕ್ ನಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಗೊತ್ತಾಗಿದೆ.
ಈ ಎಲ್ಲರೂ ಬೆಂಗಳೂರಿನಲ್ಲೇ ವಾಸವಾಗಿದ್ದರು. ಯಾವಾಗ ಸಿಡಿ ಸ್ಪೋಟದ ತನಿಖೆ ಪ್ರಾರಂಭಿಸಿದರೋ ಆತಂಕಗೊಂಡ ಪತ್ರಕರ್ತರು ನಗರ ತೊರೆದು ಚಿಕ್ಕಮಗಳೂರು, ರಾಮನಗರ ಸೇರಿದರೆ, ಉಳಿದವರು ಬೆಂಗಳೂರಿನ ಚಾಮರಾಪೇಟೆ ಮತ್ತು ವಿಜಯನಗರದಲ್ಲಿ ನೆಲೆಯಾಗಿದ್ದರು.
Discussion about this post