ಬೆಂಗಳೂರು : ಕೊನೆಗೂ ಕರ್ನಾಟಕ ರಾಜ್ಯದ ರಾಜಕೀಯ ನಾಟಕಗಳಿಗೆ ತೆರೆ ಬಿದ್ದಿದೆ. ಹೈಕಮಾಂಡ್ ನಿಂದ ಸಂದೇಶ ಬರುತ್ತದೆ ಸಂದೇಶ ಬರುತ್ತದೆ ಅಂತ ಹೇಳುತ್ತಿದ್ದ ಯಡಿಯೂರಪ್ಪ ಎರಡು ವರ್ಷದ ಸಾಧನಾ ಸಮಾವೇಶದಲ್ಲಿ ತಮ್ಮ ವಿದಾಯ ಭಾಷಣವನ್ನು ಮಾಡಿ, ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ವಿದಾಯ ಭಾಷಣದಲ್ಲಿ ತಮ್ಮ ರಾಜಕೀಯ ಏಳು ಬೀಳುಗಳನ್ನು ನೆನಪಿಸಿಕೊಂಡ ಯಡಿಯೂರಪ್ಪ ಪಕ್ಷಕ್ಕೆ ನಾನೇನು ಮಾಡಿದೆ, ಪಕ್ಷ ನನಗೇನು ಕೊಟ್ಟಿದೆ ಅನ್ನುವುದನ್ನು ಹೇಳಿದ್ದಾರೆ. ಇದಕ್ಕೂ ಮುನ್ನ ಶಿಕಾರಿಪುರ ತಾಲ್ಲೂಕಿನ ಜನರು ನನ್ನನ್ನು ಏಳು ಬಾರಿ ಶಾಸಕರಾಗಿ ಮಾಡಿದ್ದರು. ಅಧಿಕಾರ, ತೋಳ್ಬಲ, ಜಾತಿಯ ಬಳಕೆಗಳನ್ನು ಮಾಡಿದ್ದರೂ ಜನ ನಮ್ಮನ್ನು ಕೈಬಿಡಲಿಲ್ಲ. ನಾವು ಈಗಿರುವ ಸ್ಥಿತಿಗೆ ಲಕ್ಷಾಂತರ ಕಾರ್ಯಕರ್ತರ ಶ್ರಮ ಕಾರಣ ಎಂದು ಹೇಳಿದರು.
ಸಮಾವೇಶದಲ್ಲಿ ಆರಂಭದಿಂದಲೂ ಯಡಿಯೂರಪ್ಪ ಅವರ ಮಾತುಗಳು ವಿದಾಯದ ಭಾಷಣದಂತೆ ಕಂಡುಬಂದಿತ್ತು. ಭಾವುಕ ಮಾತುಗಳಲ್ಲಿಯೇ ಅವರು ತಾವು ನಡೆದುಬಂದ ಹಾದಿಯನ್ನು ನೆನೆದರು. ತಾವು ಏಕಾಂಗಿಯಾಗಿ ಹೋರಾಟ ಮಾಡಿದ ಬಗೆ, ಸಾಮಾನ್ಯ ಕಾರ್ಯಕರ್ತನ ಹಂತದಿಂದ ಸಿಎಂ ಸ್ಥಾನದವರೆಗೆ ಬೆಳೆದ ರೀತಿ, ಸರ್ಕಾರ ನಡೆಸಲು ಎದುರಿಸಿದ ಸಂಕಷ್ಟಗಳು, ಎದುರಾದ ಸವಾಲುಗಳನ್ನು ಅವರು ಹಂಚಿಕೊಂಡರು.
Discussion about this post