ಬೆಂಗಳೂರು : ಬ್ರಿಟನ್ ಹಾಗೂ ರಷ್ಯಾದಲ್ಲಿ ಮತ್ತೊಂದು ಸುತ್ತಿನ ಕೊರೋನಾ ಸ್ಫೋಟಕ್ಕೆ ಕಾರಣವಾಗಿರುವ ಡೆಲ್ಟಾ ತಳಿಯ ಉಪ ತಳಿ AY 4.2 ಭಾರತದಲ್ಲೂ ಆತಂಕ ಮೂಡಿಸಿದೆ. ಬೆಂಗಳೂರು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಈ ತಳಿಯಿಂದ ಸೋಂಕು ಹರಡಿರುವುದು ಗೊತ್ತಾಗಿದ್ದು ಮೂರನೇ ಅಲೆಯ ಭೀತಿ ಎದುರಾಗಿದೆ.
ಈ ನಡುವೆ ರೂಪಾಂತರಿ ತಳಿಯ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿಗಾವಹಿಸಿದ್ದು, ಕರ್ನಾಟಕ ಆರೋಗ್ಯ ಇಲಾಖೆ ಕೊಟ್ಟಿರುವ ವರದಿ ನಿಟ್ಟುಸಿರುಬಿಡುವಂತೆ ಮಾಡಿದೆ. ರಾಜ್ಯದಲ್ಲೂ 7 ಜನರಲ್ಲಿ AY 4.2 ರೂಪಾಂತರಿ ವೈರಸ್ ಪತ್ತೆಯಾಗಿದೆ. ಆದರೆ ಆ 7 ಜನರಿಂದ ಮತ್ಯಾರಿಗೋ ಸೋಂಕು ಹರಡಿಲ್ಲ. ಜೊತೆಗೆ ಅವರೆಲ್ಲರೂ ಅಪಾಯವಿಲ್ಲದೆ ಗುಣಮುಖರಾಗಿದ್ದಾರೆ. ಮಾತ್ರವಲ್ಲದೆ ರೂಪಾಂತರಿ ತಳಿ ಪತ್ತೆಯಾಗಿ ಮೂರು ತಿಂಗಳು ಕಳೆದಿದೆ. ಹೀಗಾಗಿ ಮತ್ತೆ ಆ ವೈರಸ್ ಭೀತಿ ಇರಲಾರದು ಅನ್ನುವುದು ತಜ್ಞರ ನಿರೀಕ್ಷೆ.
ಇನ್ನು ಎರಡನೇ ಅಲೆ ಹಾಗೂ ಲಸಿಕೆಯಿಂದ ಸಮುದಾಯದಲ್ಲಿ ಪ್ರತಿಕಾಯ ಬೆಳೆದಿದೆ. ಹೀಗಾಗಿ ಈ ವೈರಸ್ ಗಂಭೀರವಾಗಿ ಹರಡುವುದಿಲ್ಲ ಅಂದಿರುವ ತಜ್ಞರು, ಹಾಗಂತ ಮೂರನೇ ಅಲೆಯ ಸಾಧ್ಯತೆ ಜೀವಂತವಾಗಿದೆ. ಯಾವುದೇ ಕ್ಷಣದಲ್ಲೂ ಹೊಸ ರೂಪಾಂತರಿ ವೈರಸ್ ಹುಟ್ಟಿಕೊಳ್ಳಬಹುದಾಗಿದೆ. ಈಗಾಗಲೇ ಗುಂಪು ಸೇರುವುದು, ಸಭೆ ಸಮಾರಂಭ ಹೆಚ್ಚಾಗಿದೆ. ಹೀಗಾಗಿ ಇನ್ನೂ 3 ರಿಂದ 4 ತಿಂಗಳು ಮಾಸ್ಕ್, ಸ್ಯಾನಿಟೈಸರ್, ದೈಹಿಕ ಅಂತರ ಎಂದು ಕಟ್ಟೆಚ್ಚರ ವಹಿಸಿದರೆ ಕೊರೋನಾ ಸೋಲಿಸಬಹುದು ಅಂದಿದ್ದಾರೆ.
Discussion about this post