ಮಂಗಳೂರಿನ ಯುವತಿಯೊಬ್ಬರು ವಿಕಲಚೇತನನ್ನು ವರಿಸಲು ಮುಂದಾಗಿ ಎಲ್ಲರ ಮನಸ್ಸು ಗೆದ್ದಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕಾಯರ್ತಡ್ಕ ಬಳಿಯ ಕಳೆಂಜ ಗ್ರಾಮದ ಯುವಕ ಚಂದ್ರಶೇಖರ್ ಅವರಿಗೆ ಕಾರ್ಕಳ ತಾಲೂಕಿನ ಮಾಳ ಗ್ರಾಮದ ಸಂಜೀವಿನಿ ಅವರ ಜೊತೆ ವರ್ಷದ ಹಿಂದೆ ಮದುವೆ ಮಾತುಕತೆ ನಡೆದಿತ್ತು. ಈ ವರ್ಷ ಮದುವೆ ಮಾಡಲು ಹಿರಿಯರು ತೀರ್ಮಾನಿಸಿದ್ದರು. ಆದರೆ ಟ್ಯಾಂಕರ್ ಕ್ಲೀನರ್ ಆಗಿದ್ದ ಚಂದ್ರಶೇಖರ್ ಅಂಕೋಲಾದಲ್ಲಿ ನಡೆದ ಅಪಘಾತದಲ್ಲಿ ತೀವ್ರ ಗಾಯಗೊಂಡು ಒಂದು ಕಾಲನ್ನೇ ಕಳಕೊಳ್ಳುವಂತಾಗಿತ್ತು. ಇದರಿಂದ ಹುಡುಗಿ ಮನೆಯವರು ಮದುವೆಗೆ ನಿರಾಕರಿಸಿದರು.
ಇದಾದ ನಂತರ 4 ತಿಂಗಳ ಕಾಲ ಚಂದ್ರಶೇಖರ್ ಆಸ್ಪತ್ರೆಯಲ್ಲೇ ಕಳೆಯಬೇಕಾಯಿತು. ಈ ಬೆನ್ನಲ್ಲೇ ಮಗನಿಗೆ ಅಪಘಾತವಾಗಿ ಒಂದು ಕಾಲು ಕಳೆದುಕೊಂಡ ಸುದ್ದಿ ಕೇಳಿ ಚಂದ್ರಶೇಖರ್ ಅವರ ತಾಯಿ ಪಾರ್ಶ್ವವಾಯು ಬಡಿದು ಹಾಸಿಗೆ ಹಿಡಿದರು.
ಇಂತಹ ಪರಿಸ್ಥಿತಿಯಲ್ಲಿ ಸಂಜೀವಿನಿ ತನಗೆ ಮದುವೆ ಬೇಡ ಅನ್ನಲಿಲ್ಲ. ಬದಲಾಗಿ ಮದುವೆಯಾದರೆ ಚಂದ್ರಶೇಖರ್ ನನ್ನೇ ಎಂದು ನಿರ್ಧರಿಸಿದರು. ತನ್ನ ಸಹಾಯಕ್ಕೆ ಬರುವಂತೆ ಹಿಂದೂ ಸಂಘಟನೆಗಳ ಸಹಾಯ ಯಾಚಿಸಿದರು. ಸಂಜೀವಿನಿ ಅವರ ಮಾನವೀಯ ನಡೆಯನ್ನು ಮೆಚ್ಚಿದ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ತಾವೇ ಮುಂದೆ ನಿಂತು ಮದುವೆ ಮಾಡಲು ನಿರ್ಧರಿಸಿತು.
ಭಾನುವಾರ ಕಾಯರ್ತಡ್ಕದ ಉಮಾಮಹೇಶ್ವರ ದೇವಸ್ಥಾನದಲ್ಲಿ ಮದುವೆ ನಡೆದಿದ್ದು ಸ್ವಾಮೀಜಿಗಳು, ಧಾರ್ಮಿಕ ಮುಖಂಡರನ್ನು ಸೇರಿಸಿ ಸಮಾಜೋತ್ಸವ ರೂಪದಲ್ಲಿ ಮದುವೆ ನಡೆದಿದೆ.
ಈ ಕಾರ್ಯಕ್ರಮದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದು ವಿಶೇಷವಾಗಿತ್ತು. ಯುವತಿಯ ದಿಟ್ಟ ನಿರ್ಧಾರಕ್ಕೆ ಇದೀಗ ಜನ ಮೆಚ್ಚುಗೆಯ ಪ್ರವಾಹ ಹರಿದು ಬರುತ್ತಿದೆ.
Discussion about this post