42 ಗಂಟೆಗಳಲ್ಲಿ ಗೊಬ್ಬರ ತಲುಪಿಸಬೇಕಾಗಿದ್ದ ಗೂಡ್ಸ್ ರೈಲು 4 ವರ್ಷ ಕಳೆದು ನಿಲ್ದಾಣ ತಲುಪಿದೆ. 1,326 ಕಿಲೋ ಮೀಟರ್ ತಲುಪಲು 3.5 ವರ್ಷ ತೆಗೆದುಕೊಳ್ಳುವ ಮೂಲಕ ದಾಖಲೆ ನಿರ್ಮಿಸಿದೆ.
2014 ರ ನವೆಂಬರ್ 10 ರಂದು ಡಿಪಿಎ ತುಂಬಿದ 1,316 ಬ್ಯಾಗುಗಳನ್ನು ಉತ್ತರ ಪ್ರದೇಶಕ್ಕೆ ಸಾಗಿಸಲು ರೈಲ್ವೆ ವ್ಯಾಗನ್ ಒಂದನ್ನು Indian Potash Limited (IPL) ಆಂಧ್ರದ ವಿಶಾಖಪಟ್ಟಣಂನಿಂದ ಬುಕ್ ಮಾಡಿತ್ತು.
ರೈಲ್ವೆ ಇಲಾಖೆಯ ಸೂಚನೆಯಂತೆ ಸಂಸ್ಥೆ ಕಟ್ಟಬೇಕಾದ ಹಣ ತುಂಬಿ ಗೂಡ್ಸ್ ಗಳನ್ನು ತುಂಬಿಸಿತ್ತು. ಅತ್ತ ಉತ್ತರ ಪ್ರದೇಶದ ಗೊಬ್ಬರ ವ್ಯಾಪಾರಿ ರಾಮಚಂದ್ರ ಗುಪ್ತಾ ಗೂಡ್ಸ್ ಇಂದು ಬರುತ್ತದೆ ನಾಳೆ ಬರುತ್ತದೆ ಎಂದು ಕಾಯುತ್ತಿದ್ದರು. ಆದರೆ ರೈಲು ಬರಲೇ ಇಲ್ಲ. ಒಂದಲ್ಲ ಎರಡಲ್ಲ ಬರೋಬ್ಬರಿ ಮೂರು ವರ್ಷದ ಕಾದರೂ ಗೊಬ್ಬರ ತುಂಬಿದ ವ್ಯಾಗನ್ ನಾಪತ್ತೆ.
ಈ ನಡುವೆ ರಾಮಚಂದ್ರ ಗುಪ್ತಾ ರೈಲ್ವೆ ಇಲಾಖೆ ಮತ್ತು ಇಂಡಿಯನ್ ಪೊಟಾಶ್ ಸಂಸ್ಥೆಗೆ ಪತ್ರ ಬರೆದರು.ಗೊಬ್ಬರ ಕಂಪನಿ ರೈಲ್ವೆ ಇಲಾಖೆಯ ಬೆನ್ನು ಹತ್ತಿತ್ತು. ಆದರೆ ಗೊಬ್ಬರ ತುಂಬಿದ ವ್ಯಾಗನ್ ಮಾತ್ರ ಪತ್ತೆಯಾಗಲೇ ಇಲ್ಲ.
ಈ ನಡುವೆ ದಿಢೀರ್ ಎಂದು ಕಳೆದ ಬುಧವಾರ (25/07/18) ರಂದು ಗೂಡ್ಸ್ ಹೊತ್ತ ರೈಲು 3.30ರ ಸುಮಾರಿಗೆ ಬಸ್ತಿ ರೈಲ್ವೆ ನಿಲ್ದಾಣ ತಲುಪಿದೆ.ದಾಖಲೆ ತೆಗೆದು ನೋಡಿದ ಅಧಿಕಾರಿಗಳು, ಸಿಬ್ಬಂದಿ ಶಾಕ್ ಆಗಿದ್ದಾರೆ.
ಈ ನಡುವೆ ಘಟನೆ ಕುರಿತಂತೆ ಪ್ರತಿಕ್ರಿಯಿಸಿರುವ ಗೊಬ್ಬರ ವ್ಯಾಪಾರಿ ರಾಮಚಂದ್ರ ಗುಪ್ತಾ “ 2014 ರಲ್ಲಿ ಕಂಪನಿ ನನ್ನ ಹೆಸರಿಗೆ ಗೂಡ್ಸ್ ಬುಕ್ ಮಾಡಿ ಕಳುಹಿಸಿತ್ತು. ಆದರೆ ಗೂಡ್ಸ್ ಬಂದಿರಲಿಲ್ಲ. ಈ ಬಗ್ಗೆ ರೈಲ್ವೆ ಇಲಾಖೆ ಮತ್ತು IPL ಗೆ ಮಾಹಿತಿ ನೀಡಿದ್ದೆ. ನಾನು ಗೂಡ್ಸ್ ಗೆ ಗಣ ಪಾವತಿಸಿಲ್ಲ. ಹೀಗಾಗಿ ಇದು IPL ಗೆ ಸೇರಿದ ಸೊತ್ತಾಗಿರುತ್ತದೆ. ಹೀಗಾಗಿ ವಿಚಾರ ರೈಲ್ವೆ ಇಲಾಖೆ ಮತ್ತು IPL ನೋಡಿಕೊಳ್ಳಲಿದೆ” ಎಂದಿದ್ದಾರೆ.
ಗೂಡ್ಸ್ ತಡವಾಗಿರುವ ಕುರಿತಂತೆ Indian Potash Limited Assistant Marketing Manager ಡಿಕೆ ಸಕ್ಸೇನಾ ಪ್ರತಿಕ್ರಿಯೆ ನೀಡಿದ್ದು, ” ಹೌದು ನಾವು ನವೆಂಬರ್ 2014 ರಂದು ವ್ಯಾಗನ್ ಅನ್ನು ಬುಕ್ ಮಾಡಿದ್ದೇವು. 14 ಲಕ್ಷ ಮೊತ್ತದ ಗೊಬ್ಬರ ಅವರಿಗೆ ಎಂದೋ ತಲುಪಬೇಕಾಗಿತ್ತು. ತಡವಾಗಿರುವ ಕುರಿತಂತೆ ನಾವು ರೈಲ್ವೆ ಇಲಾಖೆ ದೂರು ನೀಡಿದ್ದು, ಹೀಗಾಗಿ ಗೂಡ್ಸ್ ನ ಮೌಲ್ಯಮಾಪನವಾದ ನಂತರ ನಮಗಾದ ನಷ್ಟವನ್ನು ರೈಲ್ವೆ ಇಲಾಖೆ ಭರಿಸಿಬೇಕಿದೆ ” ಅಂದಿದ್ದಾರೆ.
ಹಾಗಾದರೆ ಮೂರು ವರ್ಷಗಳ ಕಾಲ ರೈಲ್ವೆ ಇಲಾಖೆ ಏನು ಮಾಡುತ್ತಿತ್ತು. ಈ ವ್ಯಾಗನ್ ಎಲ್ಲಿತ್ತು ಅನ್ನುವುದೇ ಯಕ್ಷ ಪ್ರಶ್ನೆ. ರೈಲ್ವೆ ಇಲಾಖೆ ಪ್ರಕಾರ ಗೂಡ್ಸ್ ಬೋಗಿಯಲ್ಲಿ ತೊಂದರೆ ಕಾಣಿಸಿಕೊಂಡರೆ ಅದನ್ನು ರಿಪೇರಿಗೆ ಕಳುಹಿಸುವ ಸಲುವಾಗಿ ಸಮೀಪದ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಲಾಗುತ್ತದೆ. ಹೀಗೆ ಇದನ್ನು ನಿಲ್ಲಿಸಿರಬೇಕು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗೊಬ್ಬರ ಕೊಳೆತು ಹೋಗುವಂತಾಗಿದೆ.
Discussion about this post