ಕನ್ನಡ ನಾಡಿನ ಮೂಲೆ ಮೂಲೆಯಲ್ಲೂ ಸಾಧಕರಿದ್ದಾರೆ.ಆದರೆ ಮಾಧ್ಯಮಗಳ ಕಣ್ಣಿಗೆ ಇವೆಲ್ಲಾ ಕಾಣಿಸದಿರುವ ಕಾರಣದಿಂದ ಅಥವಾ ಕಂಡರೂ ಕಾಣದಂತಿರುವ ಕಾರಣಕ್ಕೆ ಈ ಸಾಧಕರು ಹೊರ ಜಗತ್ತಿಗೆ ಪರಿಚಯವಾಗುವುದೇ ಇಲ್ಲ.
ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳು ಪ್ರಬಲವಾಗುತ್ತಿದ್ದಂತೆ ಎಲೆ ಮರೆ ಕಾಯಿಯಂತಿರುವ ಮಂದಿ ಜಗತ್ತಿಗೆ ಪರಿಚಯವಾಗಲಾರಂಭಿಸಿದ್ದಾರೆ. ಹಾಗಂತ ಸಾಮಾಜಿಕ ಜಾಲತಾಣಗಳಲ್ಲಿ ಬಂದ ಎಲ್ಲಾ ವಿಷಯಗಳು ಎಲ್ಲಾ ಜನರಿಗೆ ತಲುಪುತ್ತದೆಯೇ ಖಂಡಿತಾ ಇಲ್ಲ. ಈ ಕಾರಣದಿಂದ ಇಂಥ ಸಾಧಕರನ್ನು ಮತ್ತಷ್ಟು ಜನರಿಗೆ ಪರಿಚಯಿಸುವುದು ನಮ್ಮ ಉದ್ದೇಶ.
ಸಾಧಕರಿಲ್ಲದ ಊರು ಯಾವುದಿದೆ ಹೇಳಿ, ನಿಮ್ಮೂರಿನಲ್ಲಿ
ಎಲೆಮರೆ ಕಾಯಿಯಂತಿರುವ ಸಾಧಕರು ಇದ್ದೇ ಇರುತ್ತಾರೆ. ಅಂಥ ಮಂದಿಯ ವಿವರಗಳನ್ನು ನಮ್ಮ torrentspree@gmail.com ಗೆ ಕಳುಹಿಸಿಕೊಡಿ. ಜೊತೆಗೆ ಅವರ ಕೆಲ ಫೋಟೋ ಸಾಧ್ಯವಾದರೆ ವಿಡಿಯೋವನ್ನು
ಕಳುಹಿಸಿ ಕೊಡಿ.
ಈ ಸರಣಿಯಲ್ಲಿ ನಿಮಗೆ ಪರಿಚಯಿಸುತ್ತಿರುವ ಸಾಧಕ ದೇರಳಕಟ್ಟೆಯ ಮಹಮ್ಮದ್ ಕುಂಞ. ಮಂಗಳೂರು ನಗರಿಂದ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಹೋಗುವ ದಾರಿಯಲ್ಲಿ ಸಿಗುವ ಊರು ದೇರಳಕಟ್ಟೆ. ಒಂದು ಕಾಲಕ್ಕೆ ಇದು ಅಷ್ಟೇನು ಪ್ರಸಿದ್ಧ ಸ್ಥಳವಾಗಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಕೆಎಸ್ ಮೆಡಿಕಲ್ ಕಾಲೇಜು, ಯೇನಪೋಯ ಮೆಡಿಕಲ್ ಕಾಲೇಜುಗಳು ಬಂದಿರುವ ಕಾರಣಕ್ಕೆ ದೇರಳಕಟ್ಟೆ ಪ್ರಸಿದ್ಧಿಯಾಗಿದೆ.
ಇದೇ ದೇರಳಕಟ್ಟೆ ಬಸ್ ನಿಲ್ದಾಣ ಸಮೀಪ ಹಣ್ಣಿನ
ಅಂಗಡಿ ನಡೆಸುತ್ತಿರುವ ಮಹಮ್ಮದ್ ಕುಂಞ ಅವರ ದಿನಚರಿ ಪ್ರಾರಂಭವಾಗುವುದು ಬಸ್ ನಿಲ್ಡಾಣ ಗುಡಿಸುವ
ಮೂಲಕ. ಬೆಳಗ್ಗೆ ಅಂಗಡಿ ತೆರೆದ ತಕ್ಷಣ ತನ್ನ ಶಾಪ್ ಸ್ವಚ್ಛಗೊಳಿಸಿ, ಬಳಿಕ ಬಸ್ ನಿಲ್ಡಾಣವನ್ನು
ಕ್ಲೀನ್ ಮಾಡುತ್ತಾರೆ.
ನಾಗರಿಕ ಸಮಾಜದ ಅನಾಗರಿಕ ಮಂದಿ ಬಸ್ ನಿಲ್ಡಾಣದಲ್ಲಿ ಅದೆಷ್ಟು ಕಸ ಎಸೆದಿರಲಿ, ಬೇಸರ ಮಾಡಿಕೊಳ್ಳದೇ ಅದನ್ನು ಕ್ಲೀನ್ ಮಾಡುತ್ತಾರೆ. ತನ್ನ ಅಂಗಡಿಯ ಸುತ್ತ ಮುತ್ತ ಸ್ವಚ್ಛವಾಗಿರಬೇಕು ಅನ್ನುವ ಆಶಯದಿಂದ ಮಹಮ್ಮದ್ ಕುಂಞ ಮಾಡುತ್ತಿರುವ ಕೆಲಸ ನಿಜಕ್ಕೂ ಗ್ರೇಟ್. ಮಹಮ್ಮದ್ ಕುಂಞ ಯವರು ಬಸ್ ನಿಲ್ದಾಣ ಕ್ಲೀನ್ ಮಾಡುವುದನ್ನು ನೋಡಿಯೂ ಮನುಷ್ಯರು ಅನ್ನಿಸಿಕೊಂಡ ಪ್ರಾಣಿಗಳು ಗಲೀಜು ಮಾಡುತ್ತಿರುವುದು ಮಾತ್ರ ದುರಂತವೇ ಸರಿ.
Discussion about this post