ಎರಡನೇ ಅವಧಿಗೆ ಪ್ರಧಾನಿ ಹುದ್ದೆಗೆ ಏರಿರುವ ಮೋದಿ ಮೊದಲ ದಿನ ಅದ್ಯಾವ ನಿರ್ಧಾರ ಪ್ರಕಟಿಸುತ್ತಾರೆ ಅನ್ನುವ ಕುತೂಹಲವಿತ್ತು. ಸಂಪುಟ ಸಚಿವರಿಗೆ ಖಾತೆ ಹಂಚಿಕೆಯಾದ ಬೆನ್ನಲ್ಲೇ ಮೋದಿಯವರ ಸಂಪುಟ ಸಭೆ ಕೈಗೊಂಡ ನಿರ್ಣಯಗಳು ಇದೀಗ ಜನ ಮೆಚ್ಚುಗೆ ಪಡೆದಿದೆ.
ಆಗಬೇಕಾಗಿರುವುದು ಸಾಕಷ್ಟಿದೆ, ಆದರೂ ಆಗುವತ್ತ ಮುಂದಡಿ ಇಟ್ಟ ಕೆಲಸವನ್ನು ಶ್ಲಾಘಿಸಲೇಬೇಕು.
ಪ್ರಧಾನಿ ನರೇಂದ್ರ ಮೋದಿ ಅವರ ನೂತನ ಸರಕಾರ ಆರಂಭದಲ್ಲೇ ದೇಶದ ರೈತರು, ವ್ಯಾಪಾರಿಗಳಿಗೆ ಭರ್ಜರಿ ಕೊಡುಗೆ ನೀಡಿದೆ.
ಬಡ ರೈತರಿಗೆ ವರ್ಷಕ್ಕೆ 6,000 ರೂ. (ಮೂರು ಕಂತುಗಳಲ್ಲಿ) ನೀಡುವ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಸಿದ್ಧಿ’ ಯೋಜನೆಯನ್ನು ಎಲ್ಲಾ ರೈತರಿಗೂ ವಿಸ್ತರಿಸಲಾಗಿದೆ.
ಅಲ್ಲದೆ, 60 ವರ್ಷ ಮೇಲ್ಪಟ್ಟ ರೈತರು ಮತ್ತು ವ್ಯಾಪಾರಿಗಳಿಗೆ ಮಾಸಿಕ 3,000 ರೂ. ಪಿಂಚಣಿ ನೀಡುವ ವಿಶೇಷ ಯೋಜನೆಯನ್ನೂ ಸರಕಾರ ಘೋಷಿಸಿದೆ.
ಶುಕ್ರವಾರ ನಡೆದ ಪ್ರಧಾನಿ ಮೋದಿ ಅವರ ನೂತನ ಸಚಿವ ಸಂಪುಟದ ಮೊದಲ ಸಭೆಯು ಈ ಕುರಿತ ನಿರ್ಣಯಗಳಿಗೆ ಅಂಗೀಕಾರ ದೊರೆತಿದೆ.
ಸಂಪುಟ ಸಭೆಯ ಬಳಿಕ ನೂತನ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ.
”ಪಿಎಂ-ಕಿಸಾನ್ ಯೋಜನೆ ವ್ಯಾಪ್ತಿ ವಿಸ್ತರಣೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ. ಪರಿಷ್ಕೃತ ನಿಯಮಗಳಿಂದಾಗಿ ಈ ಇನ್ನೂ 2 ಕೋಟಿ ಹೆಚ್ಚು ಫಲಾನುಭವಿಗಳು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಇದರಿಂದ ಈ ಯೋಜನೆ ಮೇಲೆ ಸರಕಾರ ಮಾಡುತ್ತಿರುವ ವೆಚ್ಚವು 12,000 ಕೋಟಿ ರೂ.ನಷ್ಟು ಹೆಚ್ಚಾಗಲಿದೆ. 2019-20ರಲ್ಲಿ ಒಟ್ಟು 87,217 ಕೋಟಿ ರೂ.ಗಳನ್ನು ಇದಕ್ಕಾಗಿ ವೆಚ್ಚ ಮಾಡಲಾಗುತ್ತದೆ.
ಈ ಬಾರಿಯ ಬಜೆಟ್ನಲ್ಲಿ 75,000 ಕೋಟಿ ರೂ. ವೆಚ್ಚದ ‘ಪಿಎಂ-ಕಿಸಾನ್ ಸಮ್ಮಾನ್’ ಯೋಜನೆಯನ್ನು ಸರಕಾರ ಘೋಷಿಸಿತ್ತು. 2 ಎಕರೆಯವರೆಗೂ ಜಮೀನು ಹೊಂದಿರುವ ಸಣ್ಣ ಮತ್ತು ಮಧ್ಯಮ ಗಾತ್ರದ 12.5 ಕೋಟಿ ರೈತರಿಗೆ ಇದರ ಪ್ರಯೋಜನ ದೊರೆಯಲಿದೆ ಎಂದು ಸರಕಾರ ಹೇಳಿತ್ತು. ಇದೀಗ ಪಿಎಂ-ಕಿಸಾನ್ ಯೋಜನೆ ವಿಸ್ತರಣೆಯಿಂದ 14.5 ಕೋಟಿ ರೈತರು ಪ್ರಯೋಜನ ಪಡೆಯಲಿದ್ದಾರೆ.
ಇದೇ ವೇಳೆ, ”ಪ್ರಧಾನ ಮಂತ್ರಿ ಕಿಸಾನ್ ಪಿಂಚಣಿ ಯೋಜನೆ’ ಅಡಿಯಲ್ಲಿ ಬಡ ಮತ್ತು ಮಧ್ಯಮ ಗಾತ್ರದ ರೈತರಿಗೆ 60 ವರ್ಷ ದಾಟಿದ ಬಳಿಕ ಮಾಸಿಕ 3,000 ರೂ. ಪಿಂಚಣಿ ನೀಡುವ ಯೋಜನೆಯನ್ನೂ ಸಂಪುಟ ಅನುಮೋದಿಸಿದ್ದು,’ಪ್ರಧಾನ ಮಂತ್ರಿ ಕಿಸಾನ್ ಪಿಂಚಣಿ ಯೋಜನೆ’ಗೆ ನೋಂದಾಯಿಸಿಕೊಂಡ ರೈತರಿಗೆ 60 ವರ್ಷ ದಾಟಿದ ಬಳಿಕ ಮಾಸಿಕ 3,000 ರೂ. ನಿಶ್ಚಿತ ಪಿಂಚಣಿ ದೊರೆಯಲಿದೆ. ಆರಂಭಿಕವಾಗಿ ಈ ಯೋಜನೆಯು ಗರಿಷ್ಠ 5 ಕೋಟಿ ಸಣ್ಣ ಮತ್ತು ಮಧ್ಯಮ ಗಾತ್ರದ ರೈತರಿಗೆ ಲಭ್ಯವಾಗಲಿದೆ. ಮುಂದಿನ ಹಂತಗಳಲ್ಲಿ ಇದನ್ನು ವಿಸ್ತರಣೆ ಮಾಡಲಾಗುವುದು. ದೇಶಾದ್ಯಂತ 18ರಿಂದ 40 ವರ್ಷ ವಯಸ್ಸಿನ ರೈತರು ಸ್ವಯಂಪ್ರೇರಿತವಾಗಿ ಈ ಯೋಜನೆಗೆ ನೋಂದಾಯಿಸಿಕೊಳ್ಳಬಹುದು. ಚಂದಾದಾರರು ನಿಧನವಾದರೆ, ಅವರ ಸಂಗಾತಿಯು 50% ಪಿಂಚಣಿಯನ್ನು ಪಡೆಯಲಿದ್ದಾರೆ. ಪಿಎಂ-ಕಿಸಾನ್ ಯೋಜನೆಯಲ್ಲಿ ದೊರೆಯುವ ಹಣವನ್ನು ರೈತರು ಪಿಂಚಣಿ ಯೋಜನೆಯಲ್ಲಿ ತೊಡಗಿಸಬಹುದು ಎಂದು ಸರಕಾರ ಹೇಳಿದೆ.
60 ವರ್ಷ ಮೇಲ್ಪಟ್ಟ ಎಲ್ಲಾ ಚಿಲ್ಲರೆ ವ್ಯಾಪಾರಿಗಳು, ಸ್ವಯಂ ಉದ್ಯೋಗಿಗಳಿಗೂ ಸರಕಾರ ಪಿಂಚಣಿ ಯೋಜನೆ ಘೋಷಿಸಿದೆ. ವಾರ್ಷಿಕ 1.5 ಕೋಟಿಗಿಂತಲೂ ಕಡಿಮೆ ಜಿಎಸ್ಟಿ ವಹಿವಾಟು ಹೊಂದಿರುವ ಮತ್ತು 18-40 ವಯಸ್ಸಿನ ವ್ಯಾಪಾರಿಗಳು ಈ ಯೋಜನೆಗೆ ನೋಂದಾಯಿಸಿಕೊಳ್ಳಬಹುದು. ವ್ಯಾಪಾರಿಗಳು ಕಂತುಗಳಲ್ಲಿ ತೊಡಗಿಸುವಷ್ಟೇ ಹಣವನ್ನೂ ಸರಕಾರವೂ ತೊಡಗಿಸಲಿದ್ದು, ವ್ಯಕ್ತಿಗೆ 60 ವರ್ಷ ತುಂಬಿದ ಬಳಿಕ ಮಾಸಿಕ 3,000 ರೂ. ಪಿಂಚಣಿ ನೀಡಲಾಗುವುದು. ಮುಂದಿನ 3 ವರ್ಷಗಳಲ್ಲಿ 5 ಕೋಟಿ ವ್ಯಾಪಾರಿಗಳು ಯೋಜನೆಯ ಪ್ರಯೋಜನ ಪಡೆಯುವ ವಿಶ್ವಾಸವನ್ನು ಸರ್ಕಾರ ಹೊಂದಿದೆ.
ಹುತಾತ್ಮ ಹೋಧರ ಮಕ್ಕಳಿಗೆ ನೀಡಲಾಗುವ ವಿದ್ಯಾರ್ಥಿ ವೇತನವನ್ನು ಹೆಚ್ಚಿಸುವ ಮೂಲಕ ಸರಕಾರ ‘ದೇಶ ಕಾಯುವವರಿಗೆ ಮೊದಲ ಆದ್ಯತೆ’ ನೀತಿ ಅನುಸರಿಸಿದೆ. ‘ಪ್ರಧಾನ ಮಂತ್ರಿ ವಿದ್ಯಾರ್ಥಿವೇನ ಯೋಜನೆ’ ಅಡಿ ಹೆಣ್ಣು ಮಕ್ಕಳಿಗೆ ಮಾಸಿಕ ವಿದ್ಯಾರ್ಥಿ ವೇತನವನ್ನು 2,250ರಿಂದ 3,000 ರೂ.ಗೆ ಹೆಚ್ಚಿಸಲಾಗಿದೆ. ಹುಡುಗರ ವಿದ್ಯಾರ್ಥಿ ವೇತನವನ್ನು 2,000 ರೂ.ನಿಂದ 2,500ಕ್ಕೆ ಏರಿಸಲಾಗಿದೆ. ಹುತಾತ್ಮ ರಾಜ್ಯ ಪೊಲೀಸ್ ಸಿಬ್ಬಂದಿ ಕುಟುಂಬವನ್ನೂ ಯೋಜನೆ ವ್ಯಾಪ್ತಿಗೆ ಸೇರಿಸಲಾಗಿದೆ.
ಸಾಕುಪ್ರಾಣಿಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕಾಲು- ಬಾಯಿ ರೋಗ ಮತ್ತು ಜ್ವರದಿಂದ ಉಂಟಾಗುವ ಗರ್ಭಪಾತವನ್ನು (ಬ್ರೂಸೆಲೋಸಿಸ್) ಮುಂದಿನ ಐದು ವರ್ಷಗಳಲ್ಲಿ ಸಂಪೂರ್ಣ ನಿಮೂಲನೆ ಮಾಡಲು ಕೇಂದ್ರ ಸರ್ಕಾರ ದೃಢ ನಿರ್ಧಾರ ಕೈಗೊಂಡಿದೆ. ಇದಕ್ಕಾಗಿ -ಠಿ; 13,343 ಕೋಟಿ ಯೋಜನೆ ರೂಪಿಸಿದೆ. ಈ ಯೋಜನೆಯಡಿಯಲ್ಲಿ 30 ಕೋಟಿ ರಾಸು (ಹಸು, ಎತ್ತು, ಎಮ್ಮೆ,ಕೋಣ), 20 ಕೋಟಿ ಕುರಿ, ಮೇಕೆ ಮತ್ತು 1 ಕೋಟಿ ಹಂದಿಗಳಿಗೆ ಚುಚ್ಚುಮದ್ದು ನೀಡಲಾಗುತ್ತದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಯೋಜನೆಯಾಗಿದ್ದರೂ ವಿಶೇಷ ಪ್ರಸಂಗಗಳಲ್ಲಿ ಕೇಂದ್ರ ಸರ್ಕಾರವೇ ಸಂಪೂರ್ಣ ಹಣ ಭರಿಸುತ್ತದೆ.
Discussion about this post