ಕಲೈನಾರ್ ಎಂದೇ ಖ್ಯಾತಿ ಪಡೆದಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಪಡೆದ ಅಭಿಮಾನಿಗಳಿಗೆ ಲೆಕ್ಕವಿಲ್ಲ. ಅದರಲ್ಲೂ ಮೂರು ಮದುವೆಯಾದರೂ ಅವರು ಎಂದಿಗೂ ಟೀಕೆಗೆ ಗುರಿಯಾದವರಲ್ಲ. ಮೂರು ಹೆಂಡತಿಯರಿಂದ ಪಡೆದ ಮಕ್ಕಳಿಗೆ ಅನ್ಯಾಯ ಮಾಡಿವರಲ್ಲ. ಇದಕ್ಕೆ ಕಾರಣ ಅವರ ಬದ್ಧತೆ. ಹೀಗಾಗಿಯೇ ಕರುಣಾನಿಧಿ ಅವರ ಜೀವನ ಮತ್ತು ಕುಟುಂಬ ನಿರ್ವಹಣೆ ಹಿಂದೆ ಸ್ವಾರಸ್ಯಕರ ಕಥೆಯಿದೆ.
ಕರುಣಾನಿಧಿ ಒಟ್ಟು ಮೂರು ಬಾರಿ ಮದುವೆಯಾಗಿದ್ದಾರೆ. ಮೊದಲ ಮದುವೆ ಪದ್ಮಾವತಿ ಅನ್ನುವವರ ಜೊತೆ ನಡೆಯಿತು. ಈ ಮದುವೆಗೆ ಸಾಕ್ಷಿಯಾಗಿ ಎಂ.ಕೆ. ಮುತ್ತು ಇದ್ದಾರೆ. ಪದ್ಮಾವತಿ ಸಾವಿನ ನಂತರ ದಯಾಳು ಅಮ್ಮಾಳ್ ಅವರನ್ನು ಮದುವೆಯಾದರು.
ದಯಾಳು ಅಮ್ಮಾಳ್ ಹಾಗೂ ಕರುಣಾನಿಧಿ ದಾಂಪತ್ಯಕ್ಕೆ ಹುಟ್ಟಿದ್ದು ಅಳಗಿರಿ ಮತ್ತು ಇಂದಿನ ಡಿಎಂಕೆ ಕಾರ್ಯಾಧ್ಯಕ್ಷ ಎಂ. ಕೆ. ಸ್ಟಾಲಿನ್, ಸೆಲ್ವಿ ಮತ್ತು ತಮಿಳಿರಸನ್.
ರಷ್ಯಾದ ಕ್ರಾಂತಿಕಾರಿ ಸ್ಟಾಲಿನ್ ನಿಧನರಾದ ಐದು ದಿನದ ನಂತರ ಮಗ ಹುಟ್ಟಿದ್ದರಿಂದ ಆತನಿಗೆ ಸ್ಟಾಲಿನ್ ಎಂದು ಹೆಸರಿಡಲಾಗಿತ್ತು. ಅಳಗಿರಿಯನ್ನು ರಾಜಕೀಯವಾಗಿ ಬೆಳೆಸಬೇಕು ಅನ್ನುವ ಆಸೆ ತಂದೆಗಿತ್ತು.ಆದರೆ ಅದನ್ನು ಉಳಿಸಿಕೊಳ್ಳುವ ಯೋಗ್ಯತೆ ಮಗನಿಗೆ ಇರಲಿಲ್ಲ. ಹೀಗಾಗಿ ಸ್ಟಾಲಿನ್ ಮತ್ತು ಅಳಗಿರಿ ನಡುವೆ ಕಲಹ ಹುಟ್ಟಿಕೊಂಡಾಗ ಅಳಗಿರಿಯನ್ನು ಪಕ್ಷದಿಂದಲೇ ಕರುಣಾನಿಧಿ ಹೊರಹಾಕಬೇಕಾಯಿತು. ಈ ವೇಳೆ ಕರುಣಾನಿಧಿಯೂ ತಪ್ಪು ಮಾಡಿದರು ಅನ್ನುವ ದೂರಿದೆ.
ದಯಾಳು ಅಮ್ಮಾಳ್ ಜತೆ ನಾಲ್ಕು ಮಕ್ಕಳನ್ನು ಪಡೆದ ಕರುಣಾನಿಧಿ ಮತ್ತೆ ಮೂರನೇ ಮದುವೆಯಾದರು. ಆಕೆಯೇ ರಜತಿ ಅಮ್ಮಾಳ್. ಈಕೆಗೆ ಹುಟ್ಟಿದ ಮಗಳು ಕನಿಮೋಳಿ.
ಇನ್ನು ರಾಜಕೀಯ ಜೀವನದಲ್ಲಿ ವಿವಾದ ಮೆತ್ತಿಕೊಂಡಿದ್ದ ಅಯ್ಯ ವೈಯಕ್ತಿಕ ಜೀವನದಲ್ಲಿ ಶಿಸ್ತಿನ ಸಿಪಾಯಿ.
ಅಳಗಿರಿ ವಿಚಾರ ಬಿಟ್ಟರೆ ಮೂರು ಪತ್ನಿಯರ ಆರು ಮಕ್ಕಳ ನಡುವೆ ಯಾವ ವಿವಾದ ಬಾರದಂತೆ ನೋಡಿಕೊಂಡಿದ್ದರು ಅಂದರೆ ಅಯ್ಯನ ತಾಕತ್ತು ಎಂತಹುದು.
ಇನ್ನು ಜೀವನದಲ್ಲಿ ಸಮಯವನ್ನು ಕಟ್ಟಿನಿಟ್ಟಾಗಿ ಪಾಲಿಸುತ್ತಿದ್ದ ಕರುಣಾನಿಧಿ ಇಬ್ಬರು ಹೆಂಡತಿಯರನ್ನು ಬೇರೆ ಬೇರೆ ಅವಧಿಯಲ್ಲಿ ಭೇಟಿಯಾಗುತ್ತಿದ್ದರು. ಅದಕ್ಕೊಂದು ನಿಯಮವನ್ನೇ ರೂಪಿಸಿದ್ದ ಅವರು ನಿಯಮವನ್ನು ಒಂದೂ ದಿನವೂ ಮೀರಿದವರಲ್ಲ.
ಚೆನ್ನೈನ ಗೋಪಾಲಪುರಂನಲ್ಲಿ ಒಂದು ಕುಟುಂಬ ವಾಸವಿದ್ದರೆ ಸಿಐಟಿ ಕಾಲೋನಿಯಲ್ಲಿ ಮತ್ತೊಂದು ಕುಟುಂಬವಿತ್ತು. ಇವೆರಡರ ನಡುವಿನ ಅಂತರ ಕೇವಲ 2 ಕಿಲೋಮೀಟರ್.
ಈ ಎರಡು ಸ್ಥಳಗಳಿಗೆ ದಿನಕ್ಕೆರಡು ಬಾರಿ ಪ್ರಯಾಣಿಸುತ್ತಿದ್ದ ಕರುಣಾನಿಧಿ, ತಮ್ಮ ವಿರಾಮ ಮತ್ತು ಆಹಾರವನ್ನು ಇಬ್ಬರ ಜತೆಯೂ ಸಮಾನವಾಗಿ ಹಂಚಿಕೊಳ್ಳುತ್ತಿದ್ದರು.
ದಯಾಳು ಅಮ್ಮಾಳ್ ಜತೆ ಗೋಪಾಲಪುರಂ ನಿವಾಸದಲ್ಲಿ ಅವರು ಬೆಳಗ್ಗಿನ ಉಪಹಾರ ಮತ್ತು ಸಂಜೆಯ ಟೀ ಸೇವಿಸುತ್ತಿದ್ದರು. ರಾತ್ರಿಯನ್ನು ಕಳೆಯಲು ಸಿಐಟಿ ಕಾಲೊನಿಯಲ್ಲಿರುವ ರಾಜಾಥಿ ಅಮ್ಮಾಳ್ ಮನೆಗೆ ಹೋಗುತ್ತಿದ್ದರು. ಅಲ್ಲೇ ಅವರು ಮಧ್ಯಾಹ್ನದ ಉಟ ಮತ್ತು ರಾತ್ರಿಯ ಊಟ ಸವಿಯುತ್ತಿದ್ದರು.
ನಮ್ಮಲ್ಲೂ ಕೆಲವರಿದ್ದಾರೆ, ಅನಧಿಕೃತವನ್ನು ಅಧಿಕೃತ ಎಂದು ಒಪ್ಪಿಕೊಳ್ಳಲು ತಾಕತ್ತೇ ಇಲ್ಲದವರು. ಊರಿಗೆಲ್ಲಾ ಉಪದೇಶ ಮಾಡುವ ವ್ಯಕ್ತಿಗಳು ಮಾಡಿದ್ದು ಮಾತ್ರ ಅದೇನೋ ಅಂತಾರಲ್ಲ ಹಾಗೇ. ಇವರಿಗೆಲ್ಲಾ ಕರುಣಾನಿಧಿ ಆದರ್ಶ. ಮದುವೆ ಮೂರಾದರೂ ಮುಚ್ಚಿಟ್ಟವರಲ್ಲ.
Discussion about this post