ಬೆಂಗಳೂರು : ಈ ಹಿಂದೆ ಬಂಧಿಸಲ್ಪಟ್ಟ ಶಂಕಿತ ಉಗ್ರರು ನೀಡಿದ ಮಾಹಿತಿ ಹಿನ್ನಲೆಯಲ್ಲಿ ಬೆಂಗಳೂರು ಸಾಫ್ಟ್ ವೇರ್ ಇಂಜಿನಿಯರ್ ಒಬ್ಬನನ್ನು NIA ಬಂಧಿಸಿದೆ. ಬಂಧಿತ ಶಂಕಿತ ಉಗ್ರನನ್ನು ಜುಹೇಬ್ ಹಮೀದ್ ಶಕೀಲ್ ಮುನ್ನಾ ಅಲಿಯಾಸ್ ಜುಹೇಬ್ ಮುನ್ನಾ (38) ಎಂದು ಗುರುತಿಸಲಾಗಿದೆ.
ಜುಹೇಬ್ ಐಸಿಸ್ ಸಂಘಟನೆ ಬಲಪಡಿಸುವ ಸಲುವಾಗಿ ರಚಿಸಲಾಗಿರುವ ಕುರಾನ್ ಸರ್ಕಲ್ ವಾಟ್ಸಾಪ್ ಗ್ರೂಪ್ ನ ಸದಸ್ಯ ಎಂದಷ್ಟೇ ಗೊತ್ತಾಗಿದ್ದು, ಉಳಿದ ಮಾಹಿತಿಗಳನ್ನು ಪೊಲೀಸರು ಬಿಟ್ಟು ಕೊಟ್ಟಿಲ್ಲ. ಸಾಕಷ್ಟು ಗೌಪ್ಯವಾಗಿ ಈ ಕಾರ್ಯಾಚರಣೆ ನಡೆದಿದೆ. ಜುಹೇಬ್ ನಲ್ಲಿ ಬೆಂಗಳೂರಿನ ಯಾವ ಏರಿಯಾದಲ್ಲಿ ಬಂಧಿಸಲಾಗಿದೆ. ಈತ ಯಾವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅನ್ನುವ ಮಾಹಿತಿಗಳು ಇನ್ನೂ ರಹಸ್ಯವಾಗಿದೆ.
ರಾಷ್ಟ್ರೀಯ ಮಾಧ್ಯಮಗಳ ವರದಿಯ ಪ್ರಕಾರ ಬಂಧಿತ ಆರೋಪಿ ಬೆಂಗಳೂರಿನ ತಿಲಕ್ ನಗರ ನಿವಾಸಿಯಾಗಿದ್ದು, ಸೌದಿ ಅರೇಬಿಯಾದಿಂದ ದೆಹಲಿಗೆ ಬಂದಿಳಿದ ಸಂದರ್ಭದಲ್ಲಿ ಈತನನ್ನು ಬಂಧಿಸಲಾಗಿದೆ.
ಈ ಹಿಂದೆ ಉಗ್ರ ಚಟುವಟಿಕೆಗೆ ಸಹಕಾರದ ಆರೋಪದ ಹಿನ್ನಲೆಯಲ್ಲಿ ಬಂಧಿತನಾಗಿರುವ ದಂತ ವೈದ್ಯ ಶೌಕೀರ್ ಮೆಹಮೂದ್, ಫ್ರೇಜರ್ ಟೌನ್ ಅಕ್ಕಿ ವ್ಯಾಪಾರಿ ಇರ್ಫಾನ್ ನಾಸೀರ್, ತಮಿಳುನಾಡಿನ ಬ್ಯಾಂಕ್ ನೌಕರ ಅಹಮ್ಮದ್ ಅಬ್ದುಲ್ ಖಾದರ್ ವಿಚಾರಣೆ ವೇಳೆ ಕೊಟ್ಟ ಮಾಹಿತಿಯ ಆಧಾರದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಏನಿದು ಕುರಾನ್ ಸರ್ಕಲ್..?
ಐಸಿಸ್ ಉಗ್ರ ಸಂಘಟನೆಗೆ ಯುವಕರನ್ನು ಸೆಳೆಯುವ ನಿಟ್ಟಿನಲ್ಲಿ ಕುರಾನ್ ಸರ್ಕಲ್ ಹೆಸರಿನ ವಾಟ್ಸಾಪ್ ಗ್ರೂಪ್ ಮಾಡಿಕೊಳ್ಳಲಾಗಿದೆ. ಉಗ್ರವಾದದ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿದವರನ್ನೇ ಈ ಗ್ರೂಪ್ ಗೆ ಸೇರಿಸಿಕೊಳ್ಳಲಾಗುತ್ತಿತ್ತು. ಬಳಿಕ ಮುಸ್ಲಿಮರ ಮೇಲಿನ ದೌರ್ಜನ್ಯದ ವಿಡಿಯೋಗಳನ್ನು ಹಂಚಿ ಪ್ರಚೋದಿಸಲಾಗುತ್ತದೆ. ಹೀಗೆ ಮಾಡುತ್ತಿರುವವರ ವಿರುದ್ಧ ಸೇಡು ತೀರಿಸಿಕೊಳ್ಳುವ ಮನೋಭಾವನೆಯನ್ನು ಉದ್ರೇಕಗೊಳಿಸುವ ಕಾರ್ಯ ಇಲ್ಲಿ ನಡೆಯುತ್ತಿತ್ತು. ಸೌದಿ ಅರೇಬಿಯಾದಲ್ಲಿ ನೆಲೆಸಿರುವ ಶಂಕಿತರು ಈ ಗ್ರೂಪ್ ಗೆ ಆರ್ಥಿಕ ಸಹಾಯ ಮಾಡುತ್ತಿದ್ದರು ಅನ್ನುವುದು ಅಧಿಕಾರಿಗಳ ತನಿಖೆ ವೇಳೆ ಗೊತ್ತಾಗಿದೆ.
Discussion about this post