ಬೆಂಗಳೂರು : ಯಡಿಯೂರಪ್ಪ ರಾಜೀನಾಮೆಯ ಬೆನ್ನಲ್ಲೇ ಯಾರನ್ನು ಮುಂದಿನ ಸಿಎಂ ಮಾಡಬೇಕು ಅನ್ನುವ ಕುರಿತಂತೆ ಹೈಕಮಾಂಡ್ ಚರ್ಚೆ ಪ್ರಾರಂಭಿಸಿದೆ. ಈಗಾಗಲೇ ಹತ್ತಾರು ಹೆಸರುಗಳನ್ನು ಮುಂದಿಟ್ಟಿರುವ ಹೈಕಮಾಂಡ್ ಸಾಧಕ ಬಾಧಕಗಳ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಹೊಸ ಮುಖವನ್ನು ಪರಿಚಯಿಸಿದ್ರೆ ಹೇಗೆ ಅನ್ನುವ ಬಗ್ಗೆಯೂ ಹೈಕಮಾಂಡ್ ವರದಿ ತರಿಸಿಕೊಂಡಿದ್ದು ಆ ಬಗ್ಗೆಯೂ ಅಳೆದು ತೂಗಿ ನೋಡಲಾಗುತ್ತಿದೆ.
ಹೊಸ ಸಿಎಂ ಅಧಿಕಾರ ಸ್ವೀಕರಿಸಿದ ಬಳಿಕ ಯಡಿಯೂರಪ್ಪ ಅವರು ಮುನಿಸಿಕೊಳ್ಳದಂತೆ ನೋಡಿಕೊಳ್ಳಬೇಕಿದೆ. ಒಂದು ವೇಳೆ ಅವರು ಮುನಿಸಿಕೊಂಡ್ರೆ ಮುಂದಿನ ಚುನಾವಣೆಯಲ್ಲಿ ಗೆಲುವು ಕಷ್ಟವಾಗಬಹುದು ಅನ್ನುವ ಹಿನ್ನಲೆಯಲ್ಲಿ BSY ಪುತ್ರ ವಿಜಯೇಂದ್ರ ಅವರನ್ನು ಆಯಾಕಟ್ಟಿನ ಜಾಗದಲ್ಲಿ ಕೂರಿಸುವ ಸಾಧ್ಯತೆಗಳಿದೆಯಂತೆ.
![kageri 02](https://torrentspree.com/wp-content/uploads/2021/07/kageri-02.png)
ಈ ನಡುವೆ ಸಿಎಂ ರೇಸ್ ನಲ್ಲಿ ಯಾರ ಹೆಸರಿಲ್ಲ ಹೇಳಿ, ಗಂಟೆಗೊಂದು ಹೆಸರುಗಳು ಸೇರಿಸಿಕೊಳ್ಳುತ್ತಿವೆ. ಆದರೆ ಹೈಕಮಾಂಡ್ ಬಳಿ ಇರುವ ನಾಲ್ಕೈದು ಹೆಸರು ಯಾವುದು ಅನ್ನುವುದು ಇನ್ನೂ ನಿಗೂಢ. ಇದೀಗ ಸಿಎಂ ರೇಸ್ ಗೆ ವಿಶ್ವೇಶರ ಹೆಗಡೆ ಕಾಗೇರಿ ಹೆಸರು ಸೇರ್ಪಡೆಯಾಗಿದ್ದು, ಕ್ಲೀನ್ ಹ್ಯಾಂಡ್, ನೇರ ನಡೆ ನುಡಿಯ ಕಾರಣ ಅವರಿಗೊಂದು ಅವಕಾಶ ಕೊಟ್ರೆ ಹೇಗೆ ಅನ್ನುವುದು ಹೈಕಮಾಂಡ್ ಯೋಚನೆಯಂತೆ.
ಈ ಬೆಳವಣಿಗೆ ನಡುವೆ ಸ್ಪೀಕರ್ ವಿಶ್ವೇಶರ ಹೆಗಡೆ ಕಾಗೇರಿ ರಾಜಭವನಕ್ಕೆ ಭೇಟಿ ಕೊಟ್ಟಿದ್ದು, ರಾಜ್ಯಪಾಲ ಛಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿದ್ದಾರೆ. ಈ ಬಗ್ಗೆ ವಿಧಾನಸಭಾ ಸಚಿವಾಲಯ ಪ್ರಕಟಣೆ ಹೊರಡಿಸಿದ್ದು, ಉದೊಂದು ಸೌಹಾರ್ದ ಭೇಟಿ ಅಂದಿದೆ. ಭೇಟಿ ವೇಳೆ ಕಳೆದ ಎರಡು ವರ್ಷಗಳಲ್ಲಿ ಸಚಿವಾಲಯ ಕೈಗೊಂಡಿರುವ ಕಾರ್ಯಕ್ರಮಗಳನ್ನು ಸ್ಪೀಕರ್ ರಾಜ್ಯಪಾಲರಿಗೆ ವಿವರಿಸಿದ್ದಾರೆ. ಒಂದು ರಾಷ್ಟ್ರ ಒಂದು ಚುನಾವಣೆ, ಭಾರತದ ಸಂವಿಧಾನ ಕುರಿತಂತೆ ಚರ್ಚೆ, ಸಂಸದೀಯ ನಡವಳಿಕೆಯ ಮೌಲ್ಯ ಮತ್ತು ಸಿದ್ದಾಂತ ಕುಸಿಯುತ್ತಿರುವ ಬಗ್ಗೆ ಚರ್ಚೆ ನಡೆದಿದೆ ಎಂದು ಪ್ರಕಟಣೆ ತಿಳಿಸಿದೆ
![kageri 01](https://torrentspree.com/wp-content/uploads/2021/07/kageri-01.png)
Discussion about this post