ನಿಜಕ್ಕೂ ಇದೊಂದು ದುರಂತ ಅನ್ನದೆ ವಿಧಿಯಿಲ್ಲ. ಕೋರ್ಟ್ ಗಳಿಗೆ ಮಾಡಬೇಕಾದ ಕೆಲಸ ಸಾವಿರಾರಿದೆ. ಆದರೆ ಜನಪ್ರತಿನಿಧಿಗಳಾದವರು ಬದುಕಿದ್ದಾರೆಯೇ ಅನ್ನುವ ಪ್ರಶ್ನೆ ಉದ್ಭವಿಸಿದ ಕಾರಣ ಜನರ ಜೀವ ಉಳಿಸಲು, ನಗರದ ಸೌಂದರ್ಯ ಕಾಪಾಡಲು ಹೈಕೋರ್ಟ್ ಮಧ್ಯ ಪ್ರವೇಶ ಮಾಡುವಂತಾಗಿದೆ.
ಈಗಾಗಲೇ ಫ್ಲೆಕ್ಸ್, ಬ್ಯಾನರ್ ಕುರಿತಂತೆ ಖಡಕ್ಕ್ ಆದೇಶ ಕೊಟ್ಟಿರುವ ಹೈಕೋರ್ಟ್, ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಗುರುವಾರ ಸಂಜೆ ವೇಳೆಗೆ ನಗರದಲ್ಲಿ ಒಂದೇ ಒಂದು ಗುಂಡಿ ಕಾಣಿಸಬಾರದು ಎಂದು ಬಿಬಿಎಂಪಿಗೆ ಕಠಿಣ ಎಚ್ಚರಿಕೆ ನೀಡಿದೆ.
ರಸ್ತೆ ಗುಂಡಿ ವಿಚಾರಕ್ಕೆ ಸಂಬಂಧಿಸಿದ ಪಿಐಎಲ್ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ನೇತೃತ್ವದ ವಿಭಾಗೀಯ ಪೀಠ, ಬಿಬಿಎಂಪಿಯನ್ನು ಹಿಗ್ಗಾ ಮುಗ್ಗಾ ಜಾಡಿಸಿದೆ.
ವಿಚಾರಣೆ ವೇಳೆ ನಗರದಲ್ಲಿ 1655 ರಸ್ತೆ ಗುಂಡಿಗಳು ಬಾಕಿ ಇವೆ ಎಂದು ಬಿಬಿಎಂಪಿ ವಕೀಲರು ನೀಡಿದ ಮಾಹಿತಿಯಿಂದ ಕೆಂಡಾಮಂಡಲಾದ ನ್ಯಾಯಮೂರ್ತಿಗಳು, ರಸ್ತೆಗುಂಡಿಗಳಿಂದ ಜನ ತೊಂದರೆ ಅನುಭವಿಸುತ್ತಿದ್ದಾರೆ. ನಿಮ್ಮ ಅಧಿಕಾರಿಗಳಿಗೆ ನಾಚಿಕೆಯಾಗುವುದಿಲ್ಲವೇ. ನಾಳೆ ಸಂಜೆಯೊಳಗೆ ಒಂದೂ ಗುಂಡಿ ಇರಬಾರದು. ಎಲ್ಲಾ ರಸ್ತೆ ಗುಂಡಿ ಮುಚ್ಚಬೇಕು. ಸಂಜೆಯೊಳಗೆ ಮೆಷರ್ ಮೆಂಟ್ ಬುಕ್, ಕಾಮಗಾರಿ ಆದೇಶ, ಅಳತೆ, ಅಂದಾಜುಪಟ್ಟಿ ಸಲ್ಲಿಸಬೇಕು ಎಂದು ನ್ಯಾಯಾಧೀಶರು ಸೂಚಿಸಿದ್ದಾರೆ.
ರಸ್ತೆ ಗುಂಡಿಗಳಿಂದ ಆಗುತ್ತಿರುವ ಅನಾಹುತಗಳು ಒಂದಲ್ಲ,ಎರಡಲ್ಲ. ಕೆಲವು ಕಡೆ ಟ್ರಾಫಿಕ್ ಪೊಲೀಸರೇ ಗುಂಡಿ ಮುಚ್ಚುತ್ತಿದ್ದಾರೆ. ಆದರೆ ಪಾಲಿಕೆ ಸದಸ್ಯರು, ಅಧಿಕಾರಿಗಳು ತಮ್ಮದೇ ಲೋಕದಲ್ಲಿದ್ದಾರೆ. ಇನ್ನು ಬೆಂಗಳೂರಿನಿಂದ ಆಯ್ಕೆ ಶಾಸಕರ ಬಗ್ಗೆ ಕೇಳುವುದೇ ಬೇಡ. ಇವರು ಗೆದ್ದಿರುವುದೇ ಶಾಪ ಅನ್ನುವಂತಾಗಿದೆ.
ಅಧಿಕಾರಿಗಳಿಗೆ ಮೂಗು ದಾರ ಹಾಕಬೇಕಾದ ಕುಮಾರಸ್ವಾಮಿ ಪಾಪ ಸರ್ಕಾರ ಉಳಿಸುವುದರಲ್ಲಿ ಬ್ಯುಸಿಯಾಗಿದ್ದಾರೆ.
ಹಾಗಂತ ಬಿಜೆಪಿ ಅಧಿಕಾರಕ್ಕೆ ಬಂದ ರಸ್ತೆ ಗುಂಡಿಗಳನ್ನು ಮುಚ್ಚುತ್ತಾರೆ ಅಂದುಕೊಂಡರೆ, ಭ್ರಮೆ, ಜನರನ್ನು ಪೀಡಿಸುವುದರಲ್ಲಿ ಪಕ್ಷ ಬೇಧವಿಲ್ಲ.
ಹೋಗ್ಲಿ ಕೊನೆಗೆ ಕೋರ್ಟ್ ಆದರೂ ಜನರ ಪರವಾಗಿ ಮಧ್ಯ ಪ್ರವೇಶ ಮಾಡಿದೆಯಲ್ಲ. ದೇವರಿಗೆ ನಮಸ್ಕಾರ ಮಾಡುವ ಬದಲು ಹೈಕೋರ್ಟ್ ಹೆಬ್ಬಾಗಿಲಿಗೆ ನಮಸ್ಕಾರ ಮಾಡಿದರೆ ಪುಣ್ಯ ಗ್ಯಾರಂಟಿ. ಅದೇ ನಮ್ಮ ಪಾಲಿಗೆ ದೇವಸ್ಥಾನ.
Discussion about this post