ಉಡುಪಿ ಅಷ್ಟಮಠಗಳ ತರುಣ ಯತಿಗಳಲ್ಲಿ ಓರ್ವರಾಗಿರುವ , ಅತ್ಯಂತ ತಾರುಣ್ಯದಲ್ಲೇ ಇಂಜಿನಿಯರಿಂಗ್ ಸ್ಥಾಪಿಸುವ ಮೂಲಕ ಸಮಸ್ತ ಕೃಷ್ಣ ಭಕ್ತರೂ ಹುಬ್ಬೇರಿಸುವಂತೆ ಮಾಡಿದ ಶ್ರೀ ಸೋದೆ ಮಠಾಧೀಶರಾದ ಪರಮಪೂಜ್ಯ ಶ್ರೀಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಮತ್ತೊಂದು ಕ್ರಾಂತಿಕಾರ್ಯದ ಹೆಜ್ಜೆ ಇಡುವ ಮೂಲಕ ಮತ್ತೊಮ್ಮೆ ನಾಡಿನ ಗಮನಸೆಳೆದಿದ್ದಾರೆ .
ಕುಂದಾಪುರ ತಾಲೂಕಿನ ಹೂವಿನಕೆರೆಯಲ್ಲಿ (ಪ್ರಾತಃ ಸ್ಮರಣೀಯರಾದ ಶ್ರೀ ವಾದಿರಾಜಗುರುಸಾಋವಭೌಮರ ಜನ್ಮಭೂಮಿ) ಶ್ರೀ ಮಠದ ಅಧೀನದಲ್ಲಿರುವ 116 ಎಕ್ರೆ ಅಮೂಲ್ಯ ಜಮೀನಿನಲ್ಲಿ ಭವಿಷ್ಯದ ಉದ್ದೇಶಗಳಿಗಾಗಿ ಶ್ರೀಗಂಧ ಸಾಗುವಾಗಿ ಹೆಬ್ಬಲಸು ಹಲಸು ಮೊದಲಾದ ವೃಕ್ಷಸಂಕುಲಗಳನ್ನು ಪೋಷಿಸಿ ಬೆಳೆಸುವ ಮಹತ್ವದ ಕೆಲಸಕ್ಕೆ ಶ್ರೀಪಾದರು ನಿನ್ನೆ ( ಶುಕ್ರವಾರ 16/7/2021) ನಾಂದಿ ಹಾಕಿದ್ದಾರೆ . ಪ್ರಕೃತಿ ಪ್ರಿಯರು , ಸಸ್ಯಪ್ರೇಮಿಗಳಿಗೆ ಇದೊಂದು ಹೆಚ್ಚು ಸಂತೋಷ ಕೊಡುವ ಸುದ್ದಿ . ಅದೇರೀತಿ ನಾಡಿನ ಎಲ್ಲ ಮಠ ಮಾನ್ಯರಿಗೂ ಅನುಕರಣೀಯವಾದ ಕಾರ್ಯಕ್ರಮ .
ಇವತ್ತು ನಾಡಿನಲ್ಲಿ ನೂರಾರು ಮಠಗಳು ಸಾವಿರಾರು ಸಮಾಜಮುಖಿ ಯೋಜನೆಗಳನ್ನು ಹಮ್ಮಿಕೊಂಡು ಕೆಲಸಮಾಡುತ್ತಿವೆ . ಬಹುಕಾಲ ಇಂಥಹ ಲೋಕೋತ್ತರಕಾರ್ಯಗಳು ನಡೆಯಬೇಕು . ಆದರೆ ಅವುಗಳಿಗಾಗಿ ಆರ್ಥಿಕ ಸಂಪನ್ಮೂಲಗಳನ್ನೂ ಹೊಂದಿಸಿಕೊಳ್ಳಬೇಕು . ಆ ಹಿನ್ನೆಲೆಯಲ್ಲಿ ಇಂಥಾ ದೂರಗಾಮಿ ಕಾರ್ಯಗಳು ಅತೀ ಅವಶ್ಯವಾಗ್ತವೆ .
![tree2](https://torrentspree.com/wp-content/uploads/2021/07/tree2.jpg)
ನಮ್ಮಲ್ಲಿ ಅನೇಕ ಪ್ರಾಚೀನ ಮಠಗಳಲ್ಲಿ ಇನ್ನೂ ಒಂದಷ್ಟು ಭೂಮಿಗಳು ಉಳಿದಿರುವುದು ಸಮಾಧಾನದ ಸಂಗತಿ ( ಭೂ ಮಸೂದೆ ಕಾನೂನಿನಿಂದಾಗಿ ಉಡುಪಿಯ ಮಠಗಳೂ ಸೇರಿದಂತೆ ನಾಡಿನ ನೂರಾರು ಮಠಗಳ ಸಾವಿರಾರು ಎಕರೆಗಟ್ಟಲೆ ಭೂಮಿ ಪರಭಾರೆ ಆಯಿತು . ಇರಲಿ ಬಿಡಿ ಅದರಿಂದ ಒಂದಿಷ್ಟು ಕುಟುಂಬಗಳಿಗೆ ಬದುಕು ಲಭಿಸಿದೆ ) ಹಾಗೆ ಉಳಿದ ಭೂಮಿಯಲ್ಲಿ ಈ ರೀತಿ ಕಾಡು ಬೆಳೆಸುವುದರಿಂದ ಪ್ರಕೃತಿಗೂ ಒಂದಷ್ಟು ಶಕ್ತಿ ತುಂಬಿದಂತಾಗುತ್ತದೆ ಹಾಗೂ ಮಠಗಳ ಭವಿಷ್ಯಕ್ಕೆ ಒಂದಷ್ಟು ಆರ್ಥಿಕ ಸಂಪನ್ಮೂಲಗಳೂ ದೊರೆಯುತ್ತವೆ . ವಾಣಿಜ್ಯದ (ಆರ್ಥಿಕ) ಉದ್ದೇಶಕಾಗಿ ಹಲಸು ಹೆಬ್ಬಲಸು ಸಾಗುವಾನಿ , ರಕ್ತಚಂದನ , ಶ್ರೀಗಂಧದಂಥಹ ಮರಗಳನ್ನು ಬೆಳೆಸುವುದರಿಂದ ಬೇರೆ ಹೂಡಿಕೆಗಿಂತಲೂ ಹೆಚ್ಚು ಆದಾಯ ದೊರೆಯುವುದರಲ್ಲಿ ಸಂದೇಹವೇ ಇಲ್ಲ . ಜೊತೆಗೆ ಪ್ರಕೃತಿಯ ಪೋಷಣೆ ಮಾಡಿದ ಆತ್ಮ ಸಂತೋಷ, ಅದು ಬೆಲೆಕಟ್ಟಲಾಗದ್ದು . ಅದರೆ ಜೊತೆಗೆ ಒಂದಷ್ಟು ಹಣ್ಣುಕೊಡುವ ಇತರೆ ಮರಗಳನ್ನೂ ಆ ಪ್ರದೇಶಗಳಲ್ಲಿ ಬೆಳೆಸಿದರೆ ಅಸಂಖ್ಯ ಪಕ್ಷಿ ಪ್ರಾಣಿ ಸಂಕುಲಗಳಿಗೆ ಜೀವಪೋಷಣೆ ಕೊಟ್ಟ ಪಾರಮಾರ್ಥಿಕ ಮಹಾಪುಣ್ಯವೂ ಲಭ್ಯವಾಗುತ್ತದೆ.
ಇಂಥ ಎಲ್ಲ ಅಮೂಲ್ಯ ಕಾರಣಗಳಿಂದ ಶ್ರೀ ಸೋದೆ ಮಠಾಧೀಶರು ನಡೆಸಿದ ಚಿಂತನೆ ಹಾಗೂ ಮಠದ ಲಭ್ಯ ಜಮೀನಿನಲ್ಲಿ ಕಾಡುಬೆಳೆಸುವ ಕೆಲಸಕ್ಕೆ ಎಷ್ಟು ಅಭಿವಂದನೆ ಹೇಳಿದರೂ ಕಡಿಮೆ .
ಕಳಕೊಂಡ ಭೂಮಿ ಬಹಳ ಇರಬಹುದು .ಆದರೆ ಉಳಿದದ್ದನ್ನು ಉಳಿಸಿಕೊಳ್ಳುವ ಮತ್ತು ಅದನ್ನು ಹಾಗೇ ಪಾಳುಬಿಡದೇ ಹೆಚ್ಚು ಸದ್ಬಳಕೆ ಮಾಡಿಕೊಳ್ಳುವ ಕಾರ್ಯಗಳಿಗೆ ಹೆಚ್ಚುಗಾರಿಕೆ ಇದೆ .
ನಾಡಿನ ಎಲ್ಲ ಮಠಗಳೂ ಇಂಥಹ ಆತ್ಮನಿರ್ಭರೋಪಾಯಗಳನ್ನು ಮಾಡಿಕೊಂಡು ತಾವು ಸುದೃಢ , ಸಶಕ್ತ ಸ್ವಾವಲಂಬಿ ಆಗುವುದರ ಜೊತೆಗೆ ದೇಶವನ್ನೂ ಸಮೃದ್ಧಗೊಳಿಸುವ ಇಂಥಹ ಮಹತ್ವದ ಕಾರ್ಯಗಳನ್ನು ಮಾಡುವಂತಾಗಲಿ ಎಂದು ಹಾರೈಸುತ್ತಾ , ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರಿಗೆ ಅಭಿನಂದನಾಪೂರ್ವಕ ಅಭಿವಂದನೆಗಳನ್ನು ಸಲ್ಲಿಸುತ್ತೇನೆ . ಶ್ರೀಗಳು ಈಗ ಹಮ್ಮಿಕೊಂಡ ಕಾರ್ಯದಲ್ಲಿ ಅತ್ಯಪೂರ್ವ ಯಶಸ್ಸು ದೊರೆಯಲಿ . ಸದ್ಯದಲ್ಲೇ ಆ ಭೂಮಿಯಲ್ಲಿ ಸುಂದರ ಸಮೃದ್ಧ ವನ ಮೂಡಿಬರಲಿ .
ಜಿ ವಾಸುದೇವ ಭಟ್ ಪೆರಂಪಳ್ಳಿ
Discussion about this post