ಶಿವಮೊಗ್ಗ : ಬೆಳಗಾವಿ ಅಧಿವೇಶನಕ್ಕೆ ಅಂತಾ ಬಂದ ಜನಪ್ರತಿನಿಧಿಗಳು ಶನಿವಾರ ಭಾನುವಾರ ಬಂತು ಅಂದ್ರೆ ಸಾಕು ಗೋವಾಕ್ಕೆ ತೆರಳುತ್ತಾರೆ. ಅವರು ಈ ರೀತಿ ಮಾಡಬಾರದು, ಹಾಗೇ ಮಾಡಿದ್ರೆ ನಾಳೆ ಎಲ್ಲಾದರೂ ಮತ್ತೆ ಸಿಕ್ಕಿಹಾಕಿಕೊಳ್ಳುವ ಸಂಭವವಿರುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ರಾಜಶೇಖರ್ ಮುಲಾಲಿ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು ರಾಜಕಾರಣಿಗಳು ಹಾಗೂ ಗೋವಾದ ನಂಟಿನ ಕುರಿತಂತೆ ಜನರ ತಲೆಗೊಂದು ಹುಳ ಬಿಟ್ಟಿದ್ದಾರೆ.
ಈ ನಡುವೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ಪೊಲೀಸರ ನೋಟೀಸ್ ಕುರಿತಂತೆ ಪ್ರತಿಕ್ರಿಯಿಸಿರುವ ಮುಲಾಲಿ, ನನ್ನ ಬಳಿ 19 ಸಿಡಿಗಳಿವೆ ಎಂದು ನಾನು ಎಲ್ಲೂ ಹೇಳಿಲ್ಲ. ಅವೆಲ್ಲವೂ ಮಾಧ್ಯಮಗಳ ಸೃಷ್ಟಿ.
ಈ ಸಂಬಂಧ ಕಬ್ಬನ್ ಪಾರ್ಕ್ ಠಾಣೆಗೆ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಹೀಗಾಗಿ ಪೊಲೀಸರು ವಾಟ್ಸಾಪ್ ಮೂಲಕ ನೊಟೀಸ್ ನೀಡಿದ್ದಾರೆ ಎಂದರು.
ಇದೇ ವೇಳೆ ಹಾದಿ ಬೀದಿಯಲ್ಲಿ ಹೋಗುವವರು ಆರ್.ಟಿ.ಐ ಮೂಲಕ ಮಾಹಿತಿ ಕೇಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೀಡಿರುವ ಹೇಳಿಕೆ ಪ್ರತಿಕ್ರಿಯಿಸಿದ ಮುಲಾಲಿ, ಹಾದಿ ಬೀದಿಯಲ್ಲಿ ಹೋಗುವವರು ಮಾತ್ರವಲ್ಲ, ದನ ಕಾಯೋನು, ಅನಕ್ಷರಸ್ಥರು ಕೂಡಾ ಮಾಹಿತಿ ಕೇಳಬಹುದು. ಅದಕ್ಕೆ ಈ ನೆಲದ ಕಾನೂನಿನಲ್ಲಿ ಅವಕಾಶವಿದೆ.
ಈ ಕಾರಣದಿಂದ ಮುಖ್ಯಮಂತ್ರಿಗಳು ತಮ್ಮ ಹೇಳಿಕೆ ಹಿಂಪಡೆಯಬಹುದು ಎಂದು ಆಗ್ರಹಿಸಿದ್ದಾರೆ.
Discussion about this post