ಮಂಗಳೂರು : ಕರ್ನಾಟಕ ರಾಜಕೀಯ ಗಬ್ಬೆದ್ದು ನಾರಲಾರಂಭಿಸಿದೆ. ಸ್ವಚ್ಛಗೊಳಿಸಲಾಗದಷ್ಟು ರಾಜಕೀಯ ನಾಯಕರ ನಾಲಗೆ ಕೆಟ್ಟು ಹೋಗಿದೆ. ಅಭಿವೃದ್ಧಿ ವಿಚಾರದಲ್ಲಿ ಚರ್ಚೆ ಮಾಡಬೇಕಾದ ನಾಯಕರು ಇದೀಗ ಕೇಸರಿ ಶಾಲು, ಮದುವೆ, ಎರಡನೇ ಮದುವೆ, ಅಕ್ರಮ ಸಂಬಂಧ ಹೀಗೆ ಖಾಸಗಿ ವಿಚಾರಗಳ ಬಗ್ಗೆ ಮಾತನಾಡಲಾರಂಭಿಸಿದ್ದಾರೆ.
ಬಿಜೆಪಿಯ ರಾಜ್ಯ ನಾಯಕರನ್ನು ಟೀಕಿಸುವ ಸರಕು ಕಾಂಗ್ರೆಸ್ ನಾಯಕರ ಬಳಿ ಇಲ್ಲ. ಹೀಗಾಗಿ ಮಾತು ಪ್ರಾರಂಭಿಸಿದ್ರೆ ನೇರ ಮೋದಿಯ ಕಡೆ ಮಾತು ಹೊರಳುತ್ತದೆ. ಯಡಿಯೂರಪ್ಪ ಅವಧಿಯಲ್ಲಿ ನಡೆದ ಅಕ್ರಮ, ಬಿಜೆಪಿಯ ನಾಯಕರ ಭ್ರಷ್ಟಚಾರ ಈ ಬಗ್ಗೆ ಮಾತನಾಡುವುದನ್ನು ಬಿಟ್ಟು RSS ಅನ್ನು ಟೀಕಿಸುವುದರಲ್ಲಿ ಕಾಲ ಕಳೆಯುತ್ತಿದ್ದಾರೆ.
ಇನ್ನು ಬಿಜೆಪಿ ನಾಯಕರ ಪರಿಸ್ಥಿತಿಯೂ ಭಿನ್ನವಾಗಿಲ್ಲ, ರಾಹುಲ್ ಗಾಂಧಿ, ಸೋನಿಯಾ ಬಗ್ಗೆಯೇ ಮಾತು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಗಿದೆ ಅನ್ನಲಾದ ಅಕ್ರಮಕ್ಕೆ ರಚನೆಯಾದ ಸದನ ಸಮಿತಿಗಳೇ ಸಾಕ್ಷಿ. ಆದರೆ ಆ ಬಗ್ಗೆ ಮಾಹಿತಿಯೇ ಇಲ್ಲ.
ಈ ನಡುವೆ ಕುಮಾರಸ್ವಾಮಿಯವರ ಎರಡನೇ ಮದುವೆ ಬಗ್ಗೆ ಪ್ರಸ್ತಾಪಿಸಿರುವ ಬಿಜೆಪಿ ಟೀಕೆಗೆ ಗುರಿಯಾಗಿದೆ. ಅದರಲ್ಲೂ ರಾಹುಲ್ ಗಾಂಧಿ ಬಗ್ಗೆ ನಳಿನ್ ಕೊಟ್ಟಿರುವ ಹೇಳಿಕೆ ಯಡಿಯೂರಪ್ಪ ಅವರ ಅಸಮಾಧಾನಕ್ಕೂ ಕಾರಣವಾಗಿದೆ.
ಈ ನಡುವೆ ಮಂಗಳೂರಿನಲ್ಲಿ ಮಾತನಾಡಿರುವ ಕಾಂಗ್ರೆಸ್ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಹಿಂದೂ ಸಮಾಜದಲ್ಲಿ ಮದುವೆಯಾದ ಮೇಲೆ ಗಂಡ ಹೆಸರು ಸೇರಿಸುವುದು ಸಂಸ್ಕೃತಿ. ಸಂಸದೆ ಶೋಭಾ ಕರಂದ್ಲಾಜೆ ತನ್ನ ಹೆಸರಿನ ಜೊತೆ ಯಾರ ಹೆಸರನ್ನೂ ಸೇರಿಸಿಲ್ಲ ಅಂದಿದ್ದಾರೆ.
ಚೈತ್ರಾ ಕುಂದಾಪುರ ಅವರು ನೀಡಿದ ಹೇಳಿಕೆಗೆ ತಿರುಗೇಟು ನೀಡಿದ ಶಕುಂತಳಾ ಶೆಟ್ಟಿ, 30 ವರ್ಷದ ಮದುವೆ ವಿಚಾರವಾಗಿ ಮಾತನಾಡುವ ಚೈತ್ರಾ ಅವರೇ, ನಿಮ್ಮ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ 55 ವರ್ಷ ಕಳೆದರೂ ಮದುವೆಯಾಗದ ಬಗ್ಗೆ ತಾವು ಪ್ರಶ್ನೆ ಯಾಕೆ ಎತ್ತಿಲ್ಲ ಅಂದಿದ್ದಾರೆ.
ರಾಜಕೀಯ ನಾಯಕರು ಹೀಗೆ ಮದುವೆ, ಅಕ್ರಮ ಸಂಬಂಧ ಬಗ್ಗೆ ಮಾತನಾಡುತ್ತಾ ಕಾಲ ಕಳೆದ್ರೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಿರುತ್ತದೆಯೇ. ರಸ್ತೆ ಗುಂಡಿ ಬಿದ್ದು ಜನ ಸಾಯುತ್ತಿದ್ದಾರೆ. ಕೆಲಸವಿಲ್ಲದೆ ಅನೇಕ ಕುಟುಂಬಗಳು ಸಂಕಷ್ಟದಲ್ಲಿದೆ. ಹಾಗಿದ್ದರೂ ಈ ರಾಜಕೀಯ ಮಂದಿಗೆ ಉಳಿದವರ ಮದುವೆ ಬಗ್ಗೆ ಚಿಂತೆ. ನಾಚಿಕೆಯಾಗಬೇಕು ಇವರಿಗೆ.
Discussion about this post